ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2011

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಎಸ್. ಆರ್. ಗುಂಜಾಳ

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬಲ್ಲಿದ ರಾಗಿ, ೩೧೪ ಹೆಚ್ಚು ಗ್ರಂಥಗಳನ್ನು ರಚಿಸಿ, ಹಿರಿಯ ಸಾಹಿತಿಗಳ ಸಾಲಿನಲ್ಲಿರುವವರು ಡಾ. ಎಸ್.ಆರ್. ಗುಂಜಾಳ ಅವರು. ಧಾರವಾಡ ಜಿಲ್ಲೆಯ ಕೋಳಿವಾಡ ಗ್ರಾಮದಲ್ಲಿ ೧೯೩೨ರಲ್ಲಿ ಜನಿಸಿದ ಶ್ರೀಯುತರು ಬಾಲ್ಯದಲ್ಲಿ ಕಡು ಬ ಡ ತ ನ ದ ಕಾರಣ ಹಾವೇರಿಯ
ಶಿವಯೋಗೀಶ್ವರ ಪ್ರಸಾದ ನಿಲಯದಲ್ಲಿದ್ದು ಕೊಂಡು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಮುಂದೆ ಧಾರವಾಡದ ಮುರುಘಾಮಠದಲ್ಲಿ ಆಶ್ರಯ ಪಡೆದು ಬಿ.ಎ.. ಹಾಗು ಎಂ.ಎ. ಪದವಿ ಗಳಿಸಿ, ಶಿಕ್ಷಕ ವೃತ್ತಿ ಕೈಗೊಂಡರು. ನಂತರ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನ ಗ್ರಂಥಪಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪ ಗ್ರಂಥಪಾಲಕರಾಗಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ
ಕಾರಣಕರ್ತರಾದರು.

ಡಾ. ಎಸ್.ಆರ್. ಗುಂಜಾಳರು ನೂರಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಗ್ರಂಥಸೂಚಿ, ಲೇಖನ ಸೂಚಿ ಮಾಡುವುದರಲ್ಲಿ ಇವರದು ತಜ್ಞ ಹಸ್ತ. ಬಸವ ಸಾಹಿತ್ಯ ದರ್ಪಣ, ಬಸವಪಥ ಲೇಖನ ಸೂಚಿ, ವೀರಶೈವ ಸಂಶೋಧನ ಲೇಖನ ಸೂಚಿ, ವೀರಶೈವ ಧರ್ಮಗ್ರಂಥ ಸೂಚಿ, ವಿಶ್ವವಿದ್ಯಾಲಯಗಳಲ್ಲಿ ವೀರಶೈವ ಸಂಶೋಧನೆ ಮುಂತಾದ ಮಹತ್ವದ ಆಕರ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ.

ಅವರ ‘ಬಸವಣ್ಣನವರ ವಚನ ಪದಪ್ರಯೋಗ ಕೋಶ’ ಗ್ರಂಥ ಕನ್ನಡ ಸಾಹಿತ್ಯದಲ್ಲಿಯೇ ಮೊಟ್ಟ ಮೊದಲನೆಯದಾದ ವಿಶಿಷ್ಟ ಗ್ರಂಥ. ೧೨ ವರ್ಷಗಳ ಸತತ ಪರಿಶ್ರಮದ ಫಲದಿಂದ ಸಿದ್ಧಪಡಿಸಿದ ಈ ಬೃಹತ್ ಗ್ರಂಥಕ್ಕೆ ‘ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮತ್ತು ‘ದೇವರಾಜ ಬಹದ್ದೂರ್ ಪ್ರಶಸ್ತಿಗಳು ಬಂದಿವೆ. ಡಾ. ಎಸ್.ಆರ್. ಗುಂಜಾಳರು ಅನೇಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ವಚನ ಪಿತಾಮಹ ಫ.ಗು. ಹಳಕಟ್ಟಿ’ ಎಂಬ ಕೃತಿಗೆ ಮತ್ತೊಮ್ಮೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಇವರಿಗೆ ‘ಸೇವಾರತ್ನ’, ‘ಸಾಹಿತ್ಯ ಗೌರವ ಪ್ರಶಸ್ತಿ’, ‘ಶರಣ ಸಿರಿ’, ಮೊದಲಾದ ಪ್ರಶಸ್ತಿಗಳೂ ಲಭಿಸಿವೆ.

 

ಡಾ. ಎಸ್.ಆರ್. ಗುಂಜಾಳ ಅವರು ‘ಕರ್ನಾಟಕ ಗ್ರಂಥಾಲಯ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ೧೮ ವರ್ಷ ಸತತವಾಗಿ ಸಂಪಾದಕರಾಗಿ ಪ್ರಕಟಿಸಿ ಗ್ರಂಥಾಲಯ ಕ್ಷೇತ್ರಕ್ಕೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಬರೆದ ಆನೇಕ ಗ್ರಂಥಗಳು ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಗಂಥಗಳಂತೆ ಉಪಯುಕ್ತವಾಗಿವೆ.

ಉತ್ತಂಗಿ ಚನ್ನಪ್ಪನವರ ಪರಿಪಕ್ವ ಜೀವನದ ಕೊನೆಯ ೧೨ ವರ್ಷಗಳ ಸಂಪರ್ಕದಿಂದ ಗುಂಜಾಳರಿಗೆ ಲಿಂಗಾಯತ ಧರ್ಮದ ಕೈಪಿಡಿ ಯಾವುದೆಂಬುದರ ಪರಿಚಯವಾಯಿತು. ಆಗ ‘ಉತ್ತಂಗಿಯವರ ಉತ್ತುಂಗ ವಿಚಾರಗಳು’ ಎಂಬ ಪುಸ್ತಕ ಪ್ರಕಟಿಸಿದರು. “ಉತ್ತಂಗಿ ಚನ್ನಪ್ಪನವರು : ಜೀವನ ಮತ್ತು ಕೃತಿಗಳು” ಎಂಬ ಮಹಾ ಪ್ರಬಂಧವನ್ನು ಬರೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ, ಪದವಿ ಮತ್ತು ಬಂಗಾರದ ಪದಕವನ್ನು ಪಡೆದರು. ಗುಂಜಾಳರ ಮಾರ್ಗದರ್ಶನದಲ್ಲಿ ೧೭ ಜನ ವಿದ್ಯಾರ್ಥಿಗಳು ಪಿ.ಎಚ್‌ಡಿ. ಪದವಿ ಪಡೆದಿದ್ದಾರೆ. ಗುಂಜಾಳರ ಆತ್ಮ ಚರಿತ್ರೆ “ನಾನು” ಎಂಬ ಕೃತಿ ಹೃದಯಂಗಮವಾಗಿದೆ.

ನಿವೃತ್ತಿಯ ನಂತರ ನಾಗನೂರು ರುದ್ರಾಕ್ಷಿ ಮಠದ ‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಎಸ್.ಆರ್. ಗುಂಜಾಳರ ಎರಡು ಕೃತಿಗಳನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಡಾ. ಶ್ರೀಶೈಲ ಪಾಟೀಲರು ‘ಡಾ. ಎಸ್.ಆರ್. ಗುಂಜಾಳರ ಜೀವನ ಸಾಧನೆ’ ಎಂಬ ವಿಷಯ ಕುರಿತು ಮಹಾ ಪ್ರಬಂಧ ರಚಿಸಿ, ಪಿ.ಎಚ್‌ಡಿ. ಪದವಿ ಗಳಿಸಿದ್ದಾರೆ. ಅಲ್ಲದೆ ‘ಗ್ರಂಥಾಲಯದ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳರ ಬದುಕು-ಬರಹ’ ಎಂಬ ಜೀವನ ಚರಿತ್ರೆ ಪ್ರಕಟಿಸಿದ್ದಾರೆ. ಗುಂಜಾಳರ ಹುಟ್ಟುಹಬ್ಬದ ಸ್ಮರಣೆಯಾಗಿ ‘ಗ್ರಂಥಾಲಯದ ಅಂತರ್ಜಲ’ ಎಂಬ ಕೃತಿ ಪ್ರಕಟವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯವರು ೧೯೫೪ ರಿಂದ ೨೦೦೦ ದ ವರೆಗಿನ ಅವಧಿಯಲ್ಲಿ ಪ್ರಕಟಿತವಾದ ಕನ್ನಡ ಸಾಹಿತ್ಯ ಕೃತಿಗಳ ಸೂಚಿಯನ್ನು ಡಾ. ಎಸ್.ಆರ್. ಗುಂಜಾಳರೇ ಸಿದ್ಧಪಡಿಸಿದ್ದಾರೆ. ಇವರು ಸಾಹಿತ್ಯವಷ್ಟೇ ಅಲ್ಲ, ಸಮಾಜಕ್ಕೂ ಮೌಲಿಕ ಸೇವೆ ಸಲ್ಲಿಸಿದ್ದಾರೆ. ತಮ್ಮ ಆಸ್ತಿಯನ್ನು ಮಾರಿ, ಕುಮಾರವ್ಯಾಸನ ಕೋಳಿವಾಡದಲ್ಲಿ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ್ದಾರೆ.

ಡಾ. ಎಸ್.ಆರ್. ಗುಂಜಾಳ ಅವರು ಶರಣ ಸಾಹಿತ್ಯ ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿರುವ ಮೌಲಿಕ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ೨೦೧೧ ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಅವರ ಕೀರ್ತಿಗೆ ಮತ್ತೊಂದು ಗರಿಯನ್ನು ತೊಡಿಸಲು ಹೆಮ್ಮೆಪಡುತ್ತದೆ.

ಆಧುನಿಕ ವಚನ ರಚನೆ

ಪೂಜ್ಯ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ

ಶ್ರೀ ಗುರುಮೂರ್ತಯ್ಯ ಮತ್ತು
ಶ್ರೀಮತಿ ಶಿವಲಿಂಗಮ್ಮಾ ದಂಪತಿಗಳ ಪುತ್ರರಾಗಿ ೧೯೭೫ರಲ್ಲಿ ಜನಿಸಿದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಬಾಲ್ಯ ದಲ್ಲಿಯೇ ಆಧ್ಯಾತ್ಮ ದೀಕ್ಷೆ ಸ್ವೀಕರಿಸಿದರು.
ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಸಂಸ್ಕೃತ, ಸಂಗೀತ, ಸಾಹಿತ್ಯಗಳ ಅಧ್ಯಯನದ ನಂತರ ೧೯೯೧ ರಿಂದ ೧೯೯೯ ರ ವರೆಗೆ ಶಿವರಾತ್ರೀಶ್ವರ ಗುರುಕುಲ ದಲ್ಲಿದ್ದು ಉನ್ನತ ವ್ಯಾಸಂಗ ಮುಂದುವರಿಸಿದರು. ಸಂಸ್ಕೃತ ವಿದ್ವತ್‌ ಮತ್ತು ಕನ್ನಡ ಎಂ.ಎ., ಪದವಿ ಪಡೆದು, ಮುಂದೆ ೨೦೦೩ ರಲ್ಲಿ ಅಥಣಿಯ ಜಂಗಮಲಿಂಗಕ್ಷೇತ್ರ ಶ್ರೀ ಮೋಟಗಿ ಮಠದ ನಿರಂಜನ ಪಟ್ಟಾಧಿಕಾರವನ್ನು ‘ಸಮಾಜ ಸೇವಾ ದೀಕ್ಷೆ’ ಯಾಗಿ ಸ್ವೀಕರಿಸಿದರು. ಸಮಾಜಸೇವೆಗೆ ಕಂಕಣಬದ್ಧರಾಗಿ, ಬಸವಧರ್ಮ ಜಾಗೃತಿಯೊಂದಿಗೆ ನಲ, ಜಲ, ನುಡಿ ರಕ್ಷಣೆಯ ಪಣತೊಟ್ಟು ಸಾಧನೆಗಳ ಮೆಟ್ಟಲೇರುತ್ತಿದ್ದಾರೆ.

ಆಧುನಿಕ ವಚನಕಾರರಲ್ಲಿ ಪ್ರಭು ಚನ್ನಬಸವ ಸ್ವಾಮಿಗಳು ಪ್ರಮುಖರಾಗಿದ್ದಾರೆ. ‘ಅಥಣೀಶ’ ಎಂಬುದು ಅವರ ವಚನಾಂಕಿತ, ಅಥಣೀಶರ ವಚನಗಳು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರಿಕೊಂಡು ೨೦೦೨ ರಲ್ಲಿಯೇ ಅಧ್ಯಯನದ ವಸ್ತು ವಾದವು. ಪೂಜ್ಯ ಸ್ವಾಮೀಜಿ ಅವರು ದೇಶ, ಜನ, ಸಮಾಜ, ಸ್ವಾಮಿಗಳು, ಮಂದಿರಗಳು ಹೀಗೆ ಎಲ್ಲ ವಿಷಯಗಳ ಮೇಲೂ ವಚನಗಳನ್ನು ರಚಿಸಿದ್ದಾರೆ. ಸಾಮಾಜಿಕ ವಿಡಂಬನೆಯ ಮೊನಚು ನೀಡುವುದು ಅಥಣೀಶರ ವಚನಗಳ ವೈಶಿಷ್ಟ್ಯ, ಅಥಣೀಶರ ವಚನಗಳಿಂದಲೇ ಮೋಟಗಿ ಮಠ ನಾಡಿನ ಅಭಿಮಾನಕ್ಕೆ ಪಾತ್ರವಾಯಿತು ಎಂದು ಹೇಳಿದರೆ ಅತಿ ಶಯೋಕ್ತಿಯೇನಲ್ಲ. ಪೂಜ್ಯರ ಅಧ್ಯಯನಶೀಲತೆಯ ಫಲವಾಗಿ ಅಥಣೀಶರ ವಚನ ಸಾಹಿತ್ಯದೊಂದಿಗೆ ಮೋಟಗಿ ಮಠ ಕೂಡ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠ ಪ್ರವೇಶಿಸಿತು. ರಾಜಶೇಖರ ಹಿರೇಮಠರ ‘ಅಥಣೀಶರ ಆಧುನಿಕ ವಚನಗಳು’ ಸೇರಿದಂತೆ ಮೂರು ಸಂಪ್ರಬಂಧಗಳಿಗೆ ವಿಶ್ವವಿದ್ಯಾಲಯ ಎಂ.ಫಿಲ್, ಮಾನ್ಯತೆ ದೊರಕಿದೆ.

ಚನ್ನಬಸವ ಸ್ವಾಮೀಜಿಯವರು ವಚನ ಚೈತ್ರ, ವಚನ ತರಂಗ ಒಲವಿನ ಒರತೆ, ವಚನ ಓಂಕಾರ ಮೊದಲಾದ ಆಧುನಿಕ ವಚನ ಸಂಕಲನಗಳನ್ನು ರಚಿಸಿದ್ದಾರೆ. ಕವನ ಸಂಕಲನಗಳು, ವೈಚಾರಿಕ ಚಿಂತನೆ ಕೃತಿಗಳನ್ನೂ ಬರೆದಿದ್ದಾರೆ. ಆನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಶ್ರೀ ಗುರು ಚನ್ನಬಸವೇಶ್ವರ ಗ್ರಂಥಮಾಲೆ’ಯ ಮೂಲಕ ಸುಮಾರು 50 ಮಸ್ತಕಗಳನ್ನು ಪ್ರಕಟಿಸಿದ್ದಾರೆ. ೧೨ನೆಯ ಶತಮಾನದಲ್ಲಿ ನಡೆದ ಅದ್ಭುತವಾದ ಜನಜಾಗೃತಿಯ ಫಲರೂಪವಾಗಿ ಮೂಡಿಬಂದ ವಚನ ಸಾಹಿತ್ಯದ ರಚನೆಯ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕೆಂಬ ಹಂಬಲದಿಂದ ತಮ್ಮ ಸಮಕಾಲೀನ ಸಂಗತಿಗಳನ್ನೇ ತಮ್ಮ ವಚನಗಳಿಗೆ ವಸ್ತುವನ್ನಾಗಿ ಮಾಡಿಕೊಳ್ಳುತ್ತಿರುವ ಪೂಜ್ಯರು, ಧ್ವನಿಸುರಳಿಗಳ ಮೂಲಕವೂ ತಮ್ಮ ವಚನಗಳನ್ನು ಜನಸಮುದಾಯಕ್ಕೆ ಮುಟ್ಟಿಸಿದ್ದಾರೆ.

ಶರಣ ಸಂಸ್ಕೃತಿಯ ಶ್ರೇಷ್ಠ ಮೌಲ್ಯಗಳನ್ನು ನಾಡಿನೆಲ್ಲೆಡೆ ಪಸರಿಸುತ್ತಾ, ದಣಿವರಿಯದ ದುಡಿಯುತ್ತಿರುವ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು, ಸಂತರ ಹಾಗೂ ಶಿವಶರಣರ ವಿಶ್ವಮಾನ್ಯ ತತ್ವಗಳನ್ನು ಕುರಿತಂತೆ ಅರ್ಥಪೂರ್ಣ ಪ್ರವಚನ ನೀಡುವ ಮೂಲಕ ಧರ್ಮಪ್ರಸಾರದ ಕೈಂಕರ್ಯ ಕೈಗೊಂಡಿದ್ದಾರೆ. ಧರ್ಮ ಜಾಗೃತಿಯೊಂದಿಗೆ ಜಾಗೃತಿಯನ್ನೂ ಮಾಡುತ್ತಿದ್ದಾರೆ.

ಕನ್ನಡ ಹಾಗು ವಚನಸಾಹಿತ್ಯ ಪ್ರಸಾರಕ್ಕಾಗಿ ಪ್ರತಿವರ್ಷ ಜನಜಾಗೃತಿ, ಪಾದಯಾತ್ರೆ ಇತ್ಯಾದಿ ಜನಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿಯವರು ಮತಗಳು ಮತ್ತು ಮಠಾಧೀಶರ ಸ್ಥಾನಕ್ಕೆ ಒಂದು ಹೊಸ ಅರ್ಥ ತಂದುಕೊಟ್ಟಿದ್ದಾರೆ. ಮತಗಳೆಂದರೆ ಕಲ್ಲು ಕಟ್ಟಿಗೆಗಳ ಕಟ್ಟಡಗಳಲ್ಲ, ಜಂಗಮಲಿಂಗ ಕ್ಷೇತ್ರಗಳೆಂದು ಅರ್ಥೈಸುವ ಶ್ರೀಗಳು ಸ್ವಾಮಿಗಳಾದವರಿಗೆ ಕಾಯಕ ಕಡ್ಡಾಯ ಎಂಬುದನ್ನು ಸ್ವತಃ ಅನುಸರಿಸಿ ತೋರಿಸಿದ್ದಾರೆ.

ಶ್ರದ್ಧೆ ಮತ್ತು ಪ್ರತಿಭೆ ಜೊತೆಗೂಡಿ ಆರಳಿದ ಆಥಣೀಶರು ತಮ್ಮ ಕಾವ್ಯ ಕಣಜದಿಂದ ಸಮೃದ್ಧವಾದ ಕೊಡುಗೆ ನೀಡಿದ್ದಾರೆ. ಅವರು ಸಾಹಿತ್ಯ ಮತ್ತು ಆಧುನಿಕ ವಚನ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ೨೦೧೧ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ವಚನ ಸಂಗೀತ ಕ್ಷೇತ್ರ

ಪಂಡಿತ ಡಿ. ಕುಮಾರದಾಸ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಧುನಿಕ ಕಲಾವಿದರಲ್ಲಿ ಪಂಡಿತ ಡಿ. ಕುಮಾರದಾಸ ಅವರದು ಎದ್ದು ಕಾಣುವ ಒಂದು ಹೆಸರು, ಬಳ್ಳಾರಿ ಜಿಲ್ಲೆಯ ಏಳಬೆಂಚಿ ಎಂಬ ಪುಟ್ಟ ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ಬಡತನ ಅನುಭವಿಸಿದವರು. ಆದರೂ ಅವರ ಗ್ರಾಮದ ಜನ ಅವರ ಬಾಲಪ್ರತಿಭೆಯನ್ನು ಗುರುತಿಸಿ, ಅವರಿಗೆ ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸಿದರು. ಗ್ರಾಮಸ್ಥರ ನೆರವಿನಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಆಶ್ರಯ ಪಡೆದು, ಸಂಗೀತ ಯೋಗಿಗಳೆಂದೇ ಹೆಸರಾಗಿದ್ದ. ಡಾ. ಪುಟ್ಟರಾಜಗವಾಯಿಗಳ ಶಿಷ್ಯರಾದರು. ೧೨ ವರ್ಷಗಳ ಕಾಲ ಪುಟ್ಟರಾಜ ಗವಾಯಿಗಳು ಅಚ್ಚುಮೆಚ್ಚಿನ ಶಿಷ್ಯರಾಗಿ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದರು. ಕರ್ನಾಟಕ ಸರ್ಕಾರದ ‘ವಿದ್ವತ್’ ಪರೀಕ್ಷೆ ಮತ್ತು ಗಂಧರ್ವ ಮಹಾವಿದ್ಯಾಲಯದ ‘ವಿಶಾರದ’ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದರು.

ಗದಗದಲ್ಲಿ ನಡೆದ ಎಡೆಯೂರು ಸಿದ್ಧಲಿಂಗೇಶ್ವರರ ೫ನೇ ಶತಮಾನೋತ್ಸವದಲ್ಲಿ ಗುರುಗಳಾದ ಡಾ. ಪುಟ್ಟರಾಜ ಗವಾಯಿಗಳಿಂದ ಸ್ವರ್ಣಪದಕ ಮತ್ತು ಆಶೀರ್ವಾದ ಪಡೆದ ಭಾಗ್ಯಶಾಲಿ ಶ್ರೀ ಕುಮಾರದಾಸ ಅವರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶರಣರ ವಚನಗಳು, ದಾಸರ ಪದಗಳನ್ನು ತಮ್ಮ ಸಂಪದ್ಭರಿತ ಕಂಠಸಿರಿಯಿಂದ ಸುಶ್ರಾವ್ಯವಾಗಿ ಹಾಡುವ ಕುಮಾರದಾಸರು ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದರು. ಕಳೆದ ೨೦ ವರ್ಷಗಳಿಂದ ಆಕಾಶವಾಣಿ ನಿಲಯದಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ೧೯೯೮ರಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನೀಡಿ ವಿಮರ್ಶಕರಿಗೆ ಹಾಗೂ ಶೋತೃಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸಿದರು.

ಗೋವಾ, ಮೈಸೂರು, ಬೆಂಗಳೂರು, ಚೆನ್ನೈ, ಮುಂಬಯಿ, ವಾರಣಾಸಿ ಮುಂತಾದ ಕಡೆ ಭಾರತದಾದ್ಯಂತ ಸಂಚರಿಸಿ ಅನೇಕ ಪ್ರಮುಖ ವೇದಿಕೆಗಳಲ್ಲಿ ತಮ್ಮ ಗಾನಸುಧೆಯನ್ನು ಪ್ರಸ್ತುತಪಡಿಸಿರುವ ಕುಮಾರದಾಸರು ಹಲವಾರು ದೂರದರ್ಶನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಾಡಿನ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಪಂಡಿತ ಕುಮಾರದಾಸ್ ವಚನ ಮತ್ತು ದಾಸರ ವಚನಗಳನ್ನು ಗಾಯನದ ಮೂಲಕ ಜನಪ್ರಿಯತೆಗಳಿಸಿದ್ದಾರೆ. ಹಾಗೆಯೇ ಶಾಸ್ತ್ರೀಯ ಸಂಗೀತದಲ್ಲೂ ವಿದ್ವಜ್ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರದು ಗಂಭೀರ ಮತ್ತು ಮಧುರ ಕಂಠಸಿರಿ, ಸಂಗೀತ ಸೇವೆ ಅವರಿಗೆ ಶ್ರದ್ಧಾಭಕ್ತಿಗಳ ಒಂದು ಆರಾಧನೆ. ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಮೈಗೂಡಿಸಿಕೊಂಡಿರುವ ಕುಮಾರದಾಸ ಅವರು ನಮ್ಮ ನಾಡಿನ ಹೆಮ್ಮೆಯ ಕಲಾವಿದರು. ವಚನ ಸಂಗೀತಕ್ಕೆ ಅವರಿಗೆ ಲಿಂ. ಡಾ. ಮಲ್ಲಿಕಾರ್ಜುನ ಮನಸೂರ, ಡಾ. ಬಸವರಾಜ ರಾಜಗುರು ಅವರಂತಹ ಮೇರು ಸಂಗೀತ ವಿದ್ವಾಂಸರೇ ಸ್ಫೂರ್ತಿಯಾಗಿದ್ದಾರೆ. ಪಂಡಿತ ಡಿ. ಕುಮಾರದಾಸ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಡೆಸಿರುವ ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಗೀತೋತ್ಸವ ಕಾರ್ಯಕ್ರಮಗಳಲ್ಲಿ ಪಾಲುಗೊಂಡು ಪರಿಷತ್ತಿನ ಸಂಬಂಧ ಬೆಳೆಸಿಕೊಂಡಿದ್ದಾರೆ.

ಕುಮಾರದಾಸ ಅವರು ಉತ್ತಮ ಗಾಯಕರಾಗಿರುವಂತೆ ನಡೆ-ನುಡಿಗಳಲ್ಲೂ ಸರಸ-ಸಜ್ಜನಿಕೆಗಳನ್ನು ತುಂಬಿಕೊಂಡಿದ್ದಾರೆ. ಕಲಾವಿದ ದೈವಾರಾಧಕನೂ ಹೌದು, ಸಮಾಜ ಸಂಬಂಧಿಯೂ ಹೌದು ಎನ್ನುವುದು ಕುಮಾರದಾಸ ಅವರ ನಂಬಿಕೆ. ಸಂಗೀತ ಕಲೆಯಲ್ಲಿ ಮತ್ತಷ್ಟು ಎತ್ತರಕ್ಕೆ ಏರುವ ಬಯಕೆ.

ವಚನ ಸಂಗೀತಕ್ಕೆ ಕುಮಾರದಾಸರು ನೀಡಿರುವ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ೨೦೧೧ ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಶ್ರೀ ಜಿ.ಎಸ್. ಜಯದೇವ, ದೀನಬಂಧು ಟ್ರಸ್ಟ್

*ಇತರರಿಗೆ ಮಾಡಿದ ಸೇವೆ ಭಗವಂತನಿಗೆ ಅರ್ಪಿಸಿದ ಅತ್ಯುನ್ನತ ಸೇವೆ ಯಾಗುತ್ತದೆ” ಎಂಬ ಸ್ವಾಮಿ ವಿವೇಕಾನಂದರ ಮಾತಿಗೆ ಸಾಕ್ಷಿಯಾಗಿ, ಪರಹಿತದಲ್ಲಿ ಸಂತೋಷವನ್ನು ಕಾಣುತ್ತಿರುವ ಸುಸಂಸ್ಕೃತರು ಶ್ರೀ ಜಿ.ಎಸ್. ಜಯದೇವ ಅವರು, ‘ದಿನ ಬಂಧು’, ‘ಶಕ್ತಿಧಾಮ’, ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಮೊದಲಾದ ಸಂಸ್ಥೆಗಳ ಮೂಲಕ ಲೋಕಸೇವೆಯ ಪವಿತ್ರ ಮಣಿಹವನ್ನು ಕೈಗೆತ್ತಿಕೊಂಡ, ಸದ್ದು ಗದ್ದಲವಿರದ ಸೇವಾವ್ರತಿ; ಎಲೆ ಮರೆಯ ಹೂವು ಅರಳುವ ರೀತಿ,

ದುಃಖದಿಂದ ಕಂಗಾಲಾದವರ ಕಂಬನಿ ಒರೆಸಲು, ಅವರ ಬಾಳಿನ ಕತ್ತಲು ನಿವಾರಿಸಲು ಉದಯವಾದದ್ದೇ ‘ದೀನಬಂಧು ಟ್ರಸ್ಟ್’. ೧೯೯೨ ರಲ್ಲಿ ಚಾಮರಾಜ ನಗರದಲ್ಲಿ ಅನಾಥ, ನಿರ್ಗತಿಕ ಮಕ್ಕಳ ಏಳಿಗೆಗಾಗಿ ‘ದೀನಬಂಧು ಮಕ್ಕಳ ಮನೆ’ ಯನ್ನು ರಚಿಸಲಾಯಿತು. ಆರು ಮಕ್ಕಳಿಂದ ಪ್ರಾರಂಭವಾದ ಆ ಮನೆ ಇಂದು ೪೪ ಮಕ್ಕಳಿಗೆ ಆಶ್ರಯತಾಣವಾಗಿದೆ. ಮೂರು ವರ್ಷದವರಿಂದ ಹದಿನಾರು ವರ್ಷ ವಯಸ್ಸಿನ ಮಕ್ಕಳನ್ನು ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ. ೧೦ನೇ ತರಗತಿಯವರೆಗೆ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣಾ ಕೌಶಲ್ಯವನ್ನು ಕಲಿಸಿ ಕೊಡುವುದು ಈ ಸಂಸ್ಥೆಯ ಧೈಯ, ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ, ಜೀವನ ಮೌಲ್ಯಗಳನ್ನು ಕಲಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಈ ಸಂಸ್ಥೆ ವಹಿಸಿರುವ ಪಾತ್ರ ನಿಜಕ್ಕೂ ಹೃದಯಸ್ಪರ್ಶಿ, ಸಂಸ್ಥೆಯ ಆಶ್ರಯದಲ್ಲಿ ೨೦೦೫ ರಿಂದ ನಿರ್ಗತಿಕ ಹೆಣ್ಣು ಮಕ್ಕಳಿಗೂ ವಸತಿ ಸೌಕರ್ಯವನ್ನು ಕಲ್ಪಿಸುವ ಆಶ್ರಮವನ್ನು ಸ್ಥಾಪಿಸಲಾಗಿದೆ.

ಬಡರೈತರು, ಭೂಮಿರಹಿತ ಕಾರ್ಮಿಕರು, ಬಡುಕಟ್ಟು ಜನಾಂಗದವರು ಇತ್ಯಾದಿ ಸಮಾಜದಲ್ಲಿ ಅವಕಾಶವಂಚಿತರಾದ ಜನರ ಮಕ್ಕಳಿಗಾಗಿ ಉತ್ತಮ ದರ್ಜೆಯ ಉಚಿತ ಶಾಲೆಯನ್ನು ೧೯೯೮ರಲ್ಲಿ ತೆರೆಯಲಾಯಿತು. ಅದೇ ‘ದೀನಬಂಧು ಪ್ರಾಥಮಿಕ ಶಾಲೆ’ – ಸೃಜನಶೀಲ ಕಲಿಕಾಕೇಂದ್ರ, ಕ್ತಿಯಾಶೀಲ ತರಬೇತಿ ಮತ್ತು ವಿವಿಧ ಚಟುವಟಿಕೆಗಳಮೂಲಕ ಪ್ರತಿಯೊಂದು ಮಗುವಿನ ಜಾಣೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡುವುದು ಈ ಶಾಲೆಯ ಮುಖ್ಯ ಗುರಿ. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ಮತ್ತು ಸಮಾಜದವರೂ ಸಹಭಾಗಿಯಾಗಿದ್ದಾರೆ. ಇದಲ್ಲದೆ ೨೦೦೦ ನೇ ಇಸ್ವಿಯಿಂದ ಚಾಮರಾಜನಗರದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗಾಗಿ ಶಿಕ್ಷಕರ ತರಬೇತಿ ಮೂಲಕ ಶ್ರಮಿಸಲಾಗುತ್ತಿದೆ.

“ಭಾರತದ ಸ್ತ್ರೀ ಸಮುದಾಯ ಉನ್ನತ ಮಟ್ಟಕ್ಕೇರದೆ ರಾಜ್ಯೋದ್ಧಾರ ಕಾರ್ಯ ಅಸಂಭವನೀಯ” – ಇದು ಸ್ವಾಮಿ ವಿವೇಕಾನಂದರ ನಿಶ್ಚಿತ ನಿಲುವು, ಇದು ದೀನಬಂಧುವಿನ ನಿಲುವೂ ಹೌದು. ಬರೀ ಮಕ್ಕಳಷ್ಟೇ ಅಲ್ಲ, ಮಹಿಳೆಯರ ಭಾವನೆ, ಸಾಧನೆ, ಸಮಸ್ಯೆ, ಸೌಖ್ಯಕ್ಕೆ ಸಂದಿಸುವ ಆಪ್ತಸಂಗಾತಿ ಸಂಸ್ಥೆ ದೀನಬಂಧು”. ಹಲವಾರು ಗ್ರಾಮಗಳ ಮಹಿಳೆಯರನ್ನು ಒಟ್ಟುಗೂಡಿಸಿ, ವ್ಯವಸಾಯ ಮತ್ತು ಆರ್ಥಿಕ ಅವಶ್ಯಕತೆಗಳ ಬಗ್ಗೆ ತರಬೇತಿ ನೀಡಿದೆ. ಸ್ವಸಹಾಯ ಪದ್ಧತಿ ಮೂಲಕ ಬಜೆಟ್‌ ಉಳಿತಾಯ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಕಲಿಸಲಾಗಿದೆ. ವ್ಯವಸಾಯ ಪದ್ಧತಿ ಸಾವಯವ ಕೃಷಿ ಎರೆಹುಳು ಗೊಬ್ಬರ ತಯಾರಿಕೆ, ಪರಿಸರ ಜಾಗೃತಿ ಇವೇ ಮೊದಲಾದ ವಿಷಯಗಳ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿದೆ. ಆರೋಗ್ಯ ಮತ್ತು ಸ್ವಚ್ಛತೆ ಕಾರ್ಯಕ್ರಮಗಳಡಿ ಶೌಚಾಲಯಗಳನ್ನು ಕಟ್ಟಿಸಲಾಗುತ್ತಿದೆ. ‘ಪ್ರಗತಿ’ ಎಂಬ ವಿಶಿಷ್ಟ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಸೇವೆಯೇ ಬಾಳಿಗೆ ಸಾರ್ಥಕ್ಯ ಎಂದರಿತು, ತ್ಯಾಗ-ಸೇವೆಯ ದೀಕ್ಷೆತೊಟ್ಟು, ಪ್ರಶಂಸೆ, ಪ್ರತಿಫಲ ಮೊದಲಾದ ಯಾವ ಫಲಾಪೇಕ್ಷೆಯೂ ಇಲ್ಲದೆ ‘ಕಾಯಕವೇ ಕೈಲಾಸ ಶರಣ ವಾಣಿಯನ್ನು ನಂಬಿ, ನಿಸ್ವಾರ್ಥದಿಂದ ದುಡಿಯುತ್ತಿರುವ ಶ್ರೀ ಜಿ.ಎಸ್‌. ಜಯದೇವ ಅವರು ‘ದೀನಬಂಧು’ವಿನ ಜೀವನಾಡಿ; ಆಧಾರಸ್ತಂಭ. ದೀನಬಂಧುವಿಗಾಗಿ ಇವರು ಮಾಡುತ್ತಿರುವ ಸೇವೆ ಸಹ್ಯಾದ್ರಿಗೆ ಸಮ.

ಮಕ್ಕಳು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಧರ್ಮ ಜನಾಂಗ, ಜಾತಿ, ಮತ, ಭಾಷೆ, ಯಾವುದೇ ಭೇದವಿಲ್ಲದೆ ಅವರ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ‘ದೀನಬಂಧು’ ಶರಣ ವಿಚಾರಧಾರೆಗೆ ಅನುಗುಣ ವಾಗಿಯೇ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಗೆ ಇನ್ನೂ ಉನ್ನತ ಭವಿಷ್ಯವನ್ನು ಹಾರೈಸುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೧ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.