ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
ಹಿಂದಿನ ಧಾರವಾಡ ಜಿಲ್ಲೆಯ, ಇಂದಿನ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹಾವಣಗಿ ಡಾ. ಬಿ.ಸಿ. ಜವಳಿ ಅವರ ಜನ್ಮಸ್ಥಳ. ೧೯೩೧ರ ಮಾರ್ಚ್ ೧೦ ಜನ್ಮದಿನ. ಹೆತ್ತವರಿಂದ ಹರಿದು ಬಂದ ಸಂಸ್ಕಾರ. ಎಳೆತನದಲ್ಲೇ ಮೈಗೂಡಿದ ಶ್ರದ್ಧಾಸಕ್ತಿ ಮತ್ತು ಸಜ್ಜನಿಕೆಯ ಸಂಸ್ಕೃತಿ.
ಧಾರವಾಡದ ರಾಜಾ ಲಖಮಗೌಡ ಸರದೇಸಾಯಿ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ. ೧೯೫೦ರಲ್ಲಿ ಮುಂಬಯಿ ಪ್ರಾಂತ್ಯದ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣವಾದ ಪ್ರತಿಭೆ, ನಂತರ
ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಬಿ.ಎ. ವಿಶೇಷ ಪದವಿ ಶಿಕ್ಷಣ. ೧೯೫೫ ರಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಮುಖ್ಯ ಭಾಷೆ ಕನ್ನಡದಲ್ಲಿ ೬೦೦ ಅಂಕಗಳು ಮತ್ತು ಉಪಭಾಷೆ ಸಂಸ್ಕೃತದಲ್ಲಿ ೨೦೦ ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮರೆನಿಸಿಕೊಂಡ ಹಿರಿಮೆ.
೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಪಡೆದ ಬಿ.ಸಿ. ಜವಳಿ ಅವರು ೧೯೭೧ರಲ್ಲಿ ಅದೇ ವಿಶ್ವವಿದ್ಯಾನಿಲಯದಿಂದ ತಮ್ಮ “ಹರಿಹರ ಕವಿಯ ಸ್ತ್ರೀ ಪಾತ್ರದರ್ಶನ” ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಗಳಿಸಿದರು. ತಾವು ಉನ್ನತ ಶಿಕ್ಷಣ ಪಡೆದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲೇ ಕನ್ನಡ ವಿಭಾಗದಲ್ಲಿ ಒಟ್ಟು ೩೨ ವರುಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ಬಿ.ಸಿ. ಜವಳಿ ಅವರು ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿದ್ದಾರೆ.
ಪಠ್ಯಪುಸ್ತಕ ನಿರ್ದೆಶನಾಲಯದ ಸಹಾಯಕ ನಿರ್ದೆಶಕರಾಗಿಯೂ ಸೇವೆ ಸಲ್ಲಿಸಿರುವ ಡಾ. ಬಿ.ಸಿ. ಜವಳಿ ಅವರು ಧಾರವಾಡ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಸಾಹಿತ್ಯ ಸಮಿತಿ ಅಧ್ಯಕ್ಷರಾಗಿ ಮತ್ತು ಪ್ರೊ. ಸಂ.ಶಿ. ಭೂಸನೂರ ಮಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಸಾಹಿತ್ಯ-ಸಂಸ್ಕೃತಿ ಸಂಬಂಧದ ಅನೇಕ ಸಂಘ-ಸಂಸ್ಥೆಗಳ ಸದಸ್ಯರಾಗಿದ್ದಾರೆ.
ಸಾಮಾನ್ಯವಾಗಿ, ಪ್ರಸಿದ್ಧಿ-ಪ್ರಚಾರಗಳಿಂದ ದೂರವಿರುವ ಮಿತಭಾಷಿ ಡಾ. ಬಿ.ಸಿ. ಜವಳಿ ನಾಡಿನ ನಾನಾ ಭಾಗಗಳಲ್ಲಿ ಬೇರೆ ಬೇರೆ ವಿಶ್ವವಿದ್ಯಾನಿಲಯಗಳು, ಆಕಾಡೆಮಿಗಳು ಮತ್ತಿತರ ಸಾಹಿತ್ಯ ಸಂಸ್ಥೆಗಳು ಹಾಗೂ ಮಠಗಳು ಏರ್ಪಡಿಸಿದ ಅನೇಕ ವಿಚಾರಸಂಕಿರಣಗಳಲ್ಲಿ ಪಾಲುಗೊಂಡು ಮಹತ್ವದ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ; ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ವಚನ ಸಾಹಿತ್ಯದ ಬಗೆಗೆ ಅಧ್ಯಯನಪೂರ್ಣ ಹಾಗೂ ವಿಚಾರಪೂರ್ಣ ಲೇಖನಗಳನ್ನು ಬರೆದಿರುವ ಡಾ. ಬಿ.ಸಿ. ಜವಳಿ ಅವರ ವಿಶೇಷ ಆಸಕ್ತಿ ಸಂಶೋಧನೆ, ನಾಡಿನ ನಾನಾ ಪತ್ರಿಕೆಗಳು, ಸ್ಮರಣ ಸಂಪುಟಗಳು ಮತ್ತು ವಿಶೇಷ ಸಂಚಿಕೆಗಳಲ್ಲಿ ಅವರ ಸುಮಾರು ೧೫೦ಕ್ಕೂ ಹೆಚ್ಚು ವಿದ್ವತ್ತೂರ್ಣ ಲೇಖನಗಳು ಪ್ರಕಟವಾಗಿವೆ. ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಅಧ್ಯಯನದಲ್ಲಿ ಮಾರ್ಗದರ್ಶನ ನೀಡಿದ್ದಾರೆ.
ಪ್ರಾಚೀನ ಕಾವ್ಯಗಳ ವಿಶೇಷ ಅಧ್ಯಯನ ಮಾಡಿರುವ ಡಾ. ಬಿ.ಸಿ. ಜವಳಿ ಅವರು ಹರಿಹರ ಕವಿಯ ಬಗೆಗಂತೂ ವಿಸ್ತ್ರತ ಕಾರ್ಯ ಮಾಡಿದ್ದಾರೆ. ಹನ್ನೆರಡನೆಯ ಶತಮಾನದ ಶರಣರನ್ನು ಜನಮನದಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಹರಿಹರ ಮಾಡಿದರೆ, ಹರಿಹರನನ್ನು ಕನ್ನಡ ಸಾಹಿತ್ಯ ಪರಂಪರೆಯ ಬೆಳಕಾಗಿ ಉಳಿಸುವಲ್ಲಿ ಡಾ. ಜವಳಿ ಅವರದು ಗಣನೀಯ ಪಾತ್ರವಿದೆ ಎನ್ನಬಹುದು.
ಡಾ. ಜವಳಿ ಅವರದು ತುಂಬ ತೂಕದ ಬರವಣಿಗೆ, ಹರಿಹರನ ಗಿರಿಜಾಕಲ್ಯಾಣ, ಹರಿಹರ ಕವಿಯ ಮಹೋನ್ನತ ವಿಚಾರಗಳು, ಬಸವಣ್ಣನವರ ಯೋಜನೆಗಳು ಡಾ. ಜವಳಿ ಅವರ ಮಹತ್ವದ ವಿಮರ್ಶಾ ಗ್ರಂಥಗಳು, ಪ್ರಭುಲಿಂಗಲೀಲೆ, ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣನ ರಗಳೆ ಕಾವ್ಯಗಳ ಗದ್ಯಾನುವಾದ ಮತ್ತು ವಿಮರ್ಶೆಯೂ ಅವರಿಂದ ನಡೆದಿದೆ. ಪಂಪಕವಿಯ ಭೀಷ್ಮ, ಕುಮಾರವ್ಯಾಸನ ಕೃಷ್ಣ, ಧರ್ಮಭಂಡಾರಿ ಬಸವಣ್ಣ ಮತ್ತು ಲಿಂಗಾಯತ ಧರ್ಮದ ಸಂಸ್ಥಾಪಕರಾರು? – ಇವು ಡಾ. ಬಿ.ಸಿ. ಜವಳಿ ಅವರ ವಿಶ್ಲೇಷಣಾ ಕೃತಿಗಳಾಗಿದ್ದರೆ, ಮಹಾದೇವಿಯಕ್ಕನವರ ಸಾಹಿತ್ಯ, ಹರಿಹರನ ರಗಳೆ – ೨ ಸಂಪುಟಗಳು. ರಸಿಕಚಕ್ರ ಹರಿಹರ, ನೈವೇದ್ಯ. ಹರಿಹರ ಪ್ರಶಸ್ತಿ – ಇವು ಅವರ ಸಂಪಾದನಾ ಗ್ರಂಥಗಳಾಗಿವೆ. ಡಾ. ಡಿ.ಸಿ. ಪಾವಟೆ, ಸಿದ್ರಾಮಪ್ಪ ಪಾವಟೆ, ಸಮಾಜ ಚಿಂತಕ ಮೃತ್ಯುಂಜಯ ಸ್ವಾಮಿಗಳು ಇವು ಡಾ. ಜವಳಿ ಅವರು ಬರೆದಿರುವ ಜೀವನ ಚರಿತ್ರೆಗಳು.
ಡಾ. ಬಿ.ಸಿ. ಜವಳಿ ಅವರದು ಒಂದು ರೀತಿಯಲ್ಲಿ ಸದ್ದಿಲ್ಲದ ಸೇವೆ. ಅವರಿಗೆ ಅನೇಕ ಸನ್ಮಾನ – ಪ್ರಶಸ್ತಿಗಳ ಗೌರವ ಸಂದಿದೆ. ಅವರು ಸದುವಿನಯದ ಸಹೃದಯಿ.
ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಬಿ.ಸಿ. ಜವಳಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನ ಸಹಯೋಗದ ೨೦೧೨ ರ “ರಮಣ ಶರಣ” ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
ಸಾಹಿತ್ಯ, ಸಂಸ್ಕೃತಿ, ಆಡಳಿತ, ಸಮಾಜಸೇವೆ, ಪುಸ್ತಕಗಳ ಮುದ್ರಣ – ಪ್ರಕಟಣೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಗೈದು, ಪ್ರಸಿದ್ಧರಾಗಿರುವವರು ಶ್ರೀ ಕೆ.ಸಿ. ಶಿವಪ್ಪ ಅವರು.
ಕಾಗಲವಾಡಿ ಚಿಕ್ಕವೀರಯ್ಯ ಶಿವಪ್ಪ ನವರು ಚಾಮರಾಜನಗರ ತಾಲೂಕಿನ ಕಾಗಲವಾಡಿಯವರು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ನಂತರ ಪ್ರಕಟಣಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಅದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಮದ್ರಾಸಿನ ಕೇಂದ್ರ ಸಂಶೋಧನಾಲಯದಲ್ಲಿ ಪ್ರಕಟಣಾ ವಿಭಾಗಾಧಿಕಾರಿಯಾಗಿ, ತದನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೆಶಕರಾಗಿ ೫೦೦ಕ್ಕೂ ಹೆಚ್ಚು ಪುಸ್ತಕಗಳ ಮುದ್ರಣ, ಪ್ರಕಾಶನ ಕಾರ್ಯದ ನೇತೃತ್ವ ವಹಿಸಿದ್ದರು. ಕೆಲಕಾಲ ವಿಶ್ವವಿದ್ಯಾನಿಲಯದ ಪರೀಕ್ಷಾ ನಿಯಂತ್ರಣಾಧಿ ಕಾರಿಯಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಗೌರವ ನಿರ್ದೇಶಕರಾಗಿ ಹಾಗೂ ‘ಪ್ರಸಾದ’, ‘ಶರಣಪಥ’, ‘ಜಶಿರಾ’ ವಾರ್ತಾ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿ ಅಚ್ಚರಿ ಹುಟ್ಟುವಷ್ಟು ಸಾಫಲ್ಯವನ್ನು ಸಾಧಿಸಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ಜಂಟಿ ನಿರ್ದೆಶಕರಾಗಿ ಶ್ರೀ ಕೆ.ಸಿ. ಶಿವಪ್ಪ ಅವರು ತಮ್ಮ ಪರಿಕಲ್ಪನೆ ಮತ್ತು ಕ್ರಿಯಾಶೀಲತೆಯಿಂದ ಮಾಡಿರುವ ಕಾರ್ಯಗಳು ಸ್ಮರಣೀಯವಾದವು. ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ-ರಾಷ್ಟ್ರಮಟ್ಟದ ಹತ್ತಾರು ಸಾಂಸ್ಕೃತಿಕ ಮೇಳಗಳನ್ನು ಯೋಜಿಸಿದ್ದಾರೆ. ಕನ್ನಡ ಸಂಸ್ಕೃತಿ ಕುರಿತಂತೆ ನೂರಾರು ಪುಸ್ತಕಗಳ ಪ್ರಕಟಣೆಯ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಅಚ್ಚುಕಟ್ಟಾಗಿ ಕಾರ್ಯಗತಗೊಳಿಸಿದ್ದಾರೆ. ಶ್ರೀಯುತರ ಸಂಪಾದಕತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಕ್ಕಳಿಗಾಗಿ ೧೦೦ ಪುಸ್ತಕಗಳು ಹೊರಬಂದಿವೆ. ಹೀಗೆ ಶ್ರೀ ಶಿವಪ್ಪನವರ ಸೇವಾವಧಿಯಲ್ಲಿ ಆಗಿರುವ ಕಾರ್ಯಗಳು ಬಹುಮುಖವಾದವು.
ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಲೇಸಗೈವ ಸಾರ್ವಜನಿಕ ಸೇವೆಯನ್ನು ಶ್ರೀ ಕೆ. ಶಿವಪ್ಪ ಅವರು ರೋಟರಿ ಸಂಸ್ಥೆಯ ಮೂಲಕ ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷರಾಗಿ, ರೋಟು ಏನಿಮಯ ತಂಡದ ನಾಯಕರ ಹಾಗೂ ಲೋಟ ಜಿಲ್ಲಾ ಸಮಿತಿಗಳ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿದ್ಯಾಭವನದ ಗೌರವ ಕಾರ್ಯದರ್ಶಿಯಾಗಿ ಅನೇಕ ಯೋಜನೆಗಳ ರೂವಾರಿಯಾಗಿದ್ದಾರೆ, ದೇಶ ವಿದೇಶಗಳಿಗೆ ಭೇಟಿ ನೀಡಿದ್ದಾರೆ.
ಶ್ರೀ ಕೆ.ಸಿ. ಶಿವಪ್ಪನವರು ತಮ್ಮ ಕಾವ್ಯಕಣಜದಿಂದ ಕವನ ಸಂಕಲನಗಳು, ಚೌಪದಿಗಳು, ಪ್ರಬಂಧಗಳು, ಕತೆಗಳು, ಅನುವಾದ, ಸಂಪಾದಿತ, ಜೀವನ ಚರಿತ್ರೆ ಮೊದಲದವು ಹೊರಬಂದಿವೆ. ಶ್ರೀ ಶಿವಪ್ಪನವರು ಬಹುಮುಖ ಪ್ರತಿಭೆಯ ಸಮನ್ವಯ ಕವಿ ಸ್ವಂತಿಕೆಯ ಹಂದರದ ಮೇಲೆ ತಮ್ಮ ಕವಿತಾ ಲತಾಕುಂಜವನ್ನು ಹಬ್ಬಿಸಿದ ಕವಿಚೇತನ, ಸಾರಸ್ಥತ ಪ್ರಪಂಚದ ಎಂದೆಂದಿಗೂ ನೆನಪಾರದ ಪ್ರೇಮಕವಿ, ಇವರ ಇತ್ತೀಚಿನ ಕೃತಿ ‘ಮುದ್ದು ರಾಮ ಮನಸು’ ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ಇವರ ಭಾವಗೀತೆಗಳು ಹಾಗೂ ಚೌಪದಿಗಳು ‘ರಾಗರತಿ’, ‘ಸಂಗಾತಿ’, ‘ಗೆಳತಿ’, ‘ರಾಧಾ ಮಾಧವ’, ಮುದ್ದುರಾಮ ಶೀರ್ಷಿಕೆಯಡಿಯಲ್ಲಿ ೩೦ ಧ್ವನಿಸುರುಳಿ ಹಾಗೂ ಸಿ.ಡಿ.ಗಳಾಗಿ ಹೊರಬಂದಿವೆ. ‘ಬೆಡಗಿನ ಬಾಟಿಕ್’ ಅನುವಾದಿತ ಹೊತ್ತಿಗೆಗೆ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.
ಶ್ರೀ ಶಿವಪ್ಪನವರ ಚೌಪದಿ ಸಾಹಿತ್ಯ ವಚನ ಸಾಹಿತ್ಯದ ಒಂದು ವಿಶಿಷ್ಟ ರೂಪವಾಗಿದೆ. ವಚನ ವಿಚಾರಧಾರೆಯ ಸತ್ವ ಸೌಂದರ್ಯಗಳನ್ನು ಅವರ ಚೌಪದಿ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗುರುತಿಸಬಹದು. ‘ಮುದ್ದುರಾಮ’ ಅವರ ರಚನೆಯ ಅಂಕಿತ.
ಶ್ರೀ ಕೆ.ಸಿ. ಶಿವಪ್ಪನವರ ಸಾಹಿತ್ಯದ ಬದ್ಧತೆ, ಪಾಂಡಿತ್ಯ, ಭಾವಸಂಪತ್ತು, ಅನುಭಾವಿಕ ಪ್ರಜ್ಞೆ ಮಾಗಿದ ವ್ಯಕ್ತತ್ವ, ಸಿದ್ಧಿ – ಸಾಧನೆ ಎಲ್ಲವನ್ನೂ ಗೌರವಪೂರ್ಣ ವಾಗಿ ನನಯುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೨ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
ಡಾ. ಸರ್ವಮಂಗಳಾ ಶಂಕರ್ ಅವರು ರ೦ದು ದಿನಾಂಕ ೩೦-೦೩-೧೯೫ ಕರ್ನಾಟಕದ ಐತಿಹಾಸಿಕ ಸ್ಥಳವಾದ ಶ್ರೀರಂಗ ಪಟ್ಟಣದಲ್ಲಿ ಸಂಗೀತ ಪ್ರೇಮಿಗಳಾದ ಶ್ರೀ ಎಸ್.ಸಿ. ರಾಜಶೇಖರ್ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳ ಪುತ್ರಿಯರಾಗಿ ಜನಿಸಿದರು. ಬಾಲ್ಯದಲ್ಲಿಯೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಸರ್ವಮಂಗಳಾ ತಮ್ಮ ಎಂಟನೆ ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಆರಂಭಿಕ ಶಿಕ್ಷಣವನ್ನು ವಿದ್ವಾನ್ ರಂಗಪ್ಪ, ವಿದುಷಿ ಶಾಂತಕುಮಾರಿ ಅವರಲ್ಲಿ ಪಡೆದು, ಮುಂದೆ ಹಿರಿಯ ವಿದ್ವಾಂಸರುಗಳಾದ ಬಳ್ಳಾರಿ ಎಂ. ಶೇಷಗಿರಿ ಆಚಾರ್, ಬಿ. ಕೃಷ್ಣಪ್ಪ, ಆನೂರು ಎಸ್. ರಾಮಕೃಷ್ಣ, ಆರ್.ಕೆ. ಶ್ರೀಕಂಠನ್, ಗೌರಿಕುಪ್ಪಸ್ವಾಮಿ ಮೊದಲಾದವರ ಬಳಿ ಉನ್ನತ ಶಿಕ್ಷಣ ಪಡೆದು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಮ್ಯೂಸಿಕ್ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮ್ಯೂಸಿಕ್ ಪದವಿ, ‘ಸಂಗೀತಕ್ಷೇತ್ರಕ್ಕೆ ವಚನಕಾರರ ಕೊಡುಗೆ ನಿಬಂಧಕ್ಕೆ ಎಂ.ಫಿಲ್. ಪದವಿಗಳನ್ನು ಪ್ರಥಮ ಶ್ರೇಣಿಯಲ್ಲಿ ಪಡೆದರಲ್ಲದೆ, ‘ಸ್ವರ ವಚನಗಳು : ಒಂದು ಸಂಗೀತಾತ್ಮಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿಗಳಿಸಿದ ಪ್ರತಿಭಾನ್ವಿತರು.
ಬಿ.ಹೈ. ಶ್ರೇಣಿಯ ಕಲಾವಿದರಾಗಿರುವ ಸರ್ವಮಂಗಳಾ ಅವರು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಬಸವ- ಬಲ್ಲಿದ್ದ ಭಕ್ತಿ’, ಸಂಗೀತಕ್ಷೇತ್ರಕ್ಕೆ ವಚನಕಾರರ ಕೊಡುಗೆ; ‘ವೈರಾಗ್ಯನಿಧಿ ಅಕ್ಕಮಹಾದೇವಿ’, ‘ವಿಶ್ವಧರ್ಮಿ ಬಸವಣ್ಣ’ ಮೊದಲಾದ ಸಂಗೀತರೂಪಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಆಕಾಶವಾಣಿ ಸಂಗೀತವಿಭಾಗದ ತೀರ್ಪುಗಾರರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತವಿಭಾಗದ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಮ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಾಂಶುಪಾಲರಾಗಿ ಅನೇಕ ಸ್ತುತ್ಯಾರ್ಹ ಕಾರ್ಯಗಳು ಇವರ ನೇತೃತ್ವದಲ್ಲಿ ನಡೆದಿವೆ. ಪ್ರಸ್ತುತ ಇವರು ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೇಶ-ವಿದೇಶಗಳಲ್ಲಿ ಡಾ. ಸರ್ವಮಂಗಳಾ ಶಂಕರ್ ಅವರು ನಿರಂತರವಾಗಿ ಕಛೇರಿ, ಉಪನ್ಯಾಸ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಇಡೀ ದೇಶದಲ್ಲಿಯೇ ಒಂದು ವಿಷಯಕ್ಕೆ ಸಂಬಂಧಿಸಿದ ವಿಶೇಷ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೇಂದ್ರದಲ್ಲಿ ಲಿಂಗಾಯತ ಧರ್ಮ-ದರ್ಶನ -ಸಂಸ್ಕೃತಿಗೆ ಸಂಬಂಧಿಸಿದ ೧೨೦೦೦ ಕ್ಕೂ ಹೆಚ್ಚು ಕೃತಿಗಳ ಸಂಗ್ರಹ ಇಲ್ಲಿದೆ. ಈ ಗ್ರಂಥಾಲಯದ ಅಂಗಸಂಸ್ಥೆಯಾಗಿ ತಾಳೆಗರಿ ಮತ್ತು ಹಸ್ತಪ್ರತಿ ಗ್ರಂಥಾಲಯವನ್ನು ಆರಂಭಿಸಿ ಬೃಹತ್ತಾಗಿ ಬೆಳೆಸುವ ಉದ್ದೇಶ ಶ್ರೀಗಳಿಗಿದೆ. ಈ ನಿಟ್ಟಿನಲ್ಲಿ ತಾಳೆಗರಿಗಳ ಸಂಗ್ರಹ ಕಾರ್ಯ ಆರಂಭಿಸಲಾಗಿದೆ. ಆ ದಿಶೆಯಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಲಿಂಗಾಯತಕ್ಕೆ ಸಂಬಂಧಿಸಿದಂತೆ ಸಂಗ್ರಹಗೊಂಡ ತಾಡೋಲೆಗಳ ಸಂಖ್ಯೆ ೨೦೦ಕ್ಕೂ ಹೆಚ್ಚು. ಅದರಲ್ಲಿ ಅಡಕವಾದ ಕೃತಿಗಳು ೬೦೦ಕ್ಕೂ ಮಿಕ್ಕಿವೆ. ಗ್ರಂಥಾಲಯದಲ್ಲಿರುವ ಅಭಿನಂದನಾ ಗ್ರಂಥಗಳಲ್ಲಿ ಅಡಕವಾಗಿರುವ ಸಂಶೋಧನಾತ್ಮಕ ಲೇಖನಗಳ ಸೂಚಿ, ಶಿವಾನುಭವ ಪತ್ರಿಕೆಯ ಲೇಖನ ಸೂಚಿ, ಬಸವಪಥ ಪತ್ರಿಕೆಯ ಸೂಚಿ, ಪ್ರಸಾದ ಪತ್ರಿಕೆಯ ಸೂಚಿ ಸಿದ್ಧಪಡಿಸಿ ಪ್ರಕಟಿಸಲಾಗಿದ್ದು ಅವು ಸಂಶೋಧಕರಿಗೆ ಆಕರ ಕೃತಿಗಳಾಗಿವೆ. ಒಂದು ವಿಶ್ವವಿದ್ಯಾಲಯದ ಪ್ರಸಾರಾಂಗ ಮಾದರಿಯಲ್ಲಿ ಅಕಾಡೆಮಿಕ್ ಎನಿಸುವ ಮಹತ್ವದ ೬೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಲಾಗಿದೆ. ವಿಚಾರ ಸಂಕಿರಣ, ಸಂಶೋಧನ ಕಮ್ಮಟ, ಶಿಬಿರಗಳ ಸಂಯೋಜನೆ ಮಾಡಿದ್ದು ಗ್ರಂಥಾಲಯದ ಇನ್ನೊಂದು ವಿದ್ವತ್ತಿಯ ಕಾರ್ಯವಾಗಿದೆ.
ಗ್ರಂಥಾಲಯದ ಈ ಎಲ್ಲಾ ವಿಶೇಷತೆಗಳಿಗೆ ಮನ್ನಣೆಯಾಗಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪ್ರತಿಷ್ಠಿತ ‘ಉತ್ತಮ ಖಾಸಗಿ ಗ್ರಂಥಾಲಯ ಸೇವಾ ಪುರಸ್ಕಾರ’ ಲಭಿಸಿದೆ
ಸಮಗ್ರ ಗ್ರಂಥಗಳ ಡಿಜಿಟಲೈಜೇಶನ್, ಹಸ್ತಪ್ರತಿಗಳ ದಾಖಲೀಕರಣ, ಮೌಲಿಕ ಗ್ರಂಥಗಳ ಪ್ರಕಟನೆ, ಪ್ರಾಚೀನ ಕಾಲದ ಅಪರೂಪದ ಗ್ರಂಥಗಳ ಸಂಗ್ರಹ ಮೊದಲಾದವು ಈ ಕೇಂದ್ರದ ಭವಿಷ್ಯದ ಯೋಜನೆಗಳು.
ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯಕ್ಕೆ ಇನ್ನೂ ಉನ್ನತ ಭವಿಷ್ಯವನ್ನು ಹಾರೈಸುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೨ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
Copyright © 2024 Ramanashree Awards . All Rights Reserved. Crafted by Pixelsbrew