ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಕವಿಯಾಗಿ, ರಸಜ್ಞ ವಿಮರ್ಶಕರಾಗಿ, ಶ್ರೇಷ್ಠ ಅನುವಾದಕ ರಾಗಿ, ಸಂಪಾದಕರಾಗಿ, ಬೋಧಕರಾಗಿ ಕೀರ್ತಿಗಳಿಸಿದವರು ಓದುವವರು ಲಿಂಗಣ್ಣಯ್ಯ ನಾಗಭೂಷಣಸ್ವಾಮಿ.
೨೨ ಸೆಪ್ಟೆಂಬರ್ ೧೯೫೩ರಲ್ಲಿ ಬೆಂಗಳೂರು ಜಿಲ್ಲೆ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಓ.ಎನ್. ಲಿಂಗಣ್ಣಯ್ಯ, ತಾಯಿ ಪುಟ್ಟಗೌರಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಎಂ.ಎ. ಪದವಿ ಗಳಿಸಿ ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗ, ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ, ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಭಾಷಾಂತರ ಕೇಂದ್ರದ ಗೌರವ ನಿರ್ದೇಶಕರಾಗಿ, ಕೆ.ಕೆ. ಬಿರ್ಲಾ ಫೌಂಡೇಶನ್, ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಇಂಡಿಯಾ, ಕರ್ನಾಟಕ ಅನುವಾದ ಅಕಾಡೆಮಿ ಮೊದಲಾದ ಸಂಸ್ಥೆಗಳ ವಿವಿಧ ಹುದ್ದೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸ್ವತಂತ್ರವಾಗಿ ಮತ್ತು ವಿಮರ್ಶಾತ್ಮಕವಾಗಿ ೧೮ ಕೃತಿಗಳನ್ನು ಸಂಪಾದಿಸಿರುವ ಮತ್ತು ಅನುವಾದ ಕಲೆಯಲ್ಲಿ ಸಿದ್ಧಹಸ್ತರಾದ ಶ್ರೀಯುತರು ಇಂಗ್ಲೀಷಿನಿಂದ ಕನ್ನಡಕ್ಕೆ ೨೭ ಮತ್ತು ಕನ್ನಡದಿಂದ ಇಂಗ್ಲೀಷಿಗೆ ೯ ಕೃತಿಗಳನ್ನು ಅನುವಾದಿಸಿದ್ದಾರೆ. ಚಂದ್ರಶೇಖರ ಕಂಬಾರ ಮತ್ತು ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳನ್ನು ಇಂಗ್ಲೀಷಿಗೆ ತರ್ಜುಮೆಗೊಳಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಿಂದ ಆಯ್ದ ಐದುನೂರು ವಚನಗಳನ್ನು ಮತ್ತು ಬಸವ ಸಮಿತಿಗಾಗಿ ೨,೫೦೦ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.
ಅನೇಕ ಸಾಕ್ಷ್ಯ ಚಿತ್ರಗಳಿಗೆ, ಚಲನಚಿತ್ರಗಳಿಗೆ ಇಂಗ್ಲೀಷ್ನಲ್ಲಿ ಸಬ್ಟೈಟಲ್, ಕಾಮೆಂಟರಿ, ಧ್ವನಿದಾನ ಮಾಡಿದ್ದಾರೆ.
ಸುಮಾರು ೩೦೦ಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿರುವ ಶ್ರೀಯುತರು ೧೫೦ ಕಮ್ಮಟಗಳು, ೧೦೦ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಪ್ರೊ. ನಾಗಭೂಷಣಸ್ವಾಮಿ ಅವರು ವಿಮರ್ಶಕರಾಗಿ, ಅನುವಾದಕರಾಗಿ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಮನ್ನಣೆ ನೀಡಿ ಗೌರವಿಸಿವೆ.
ಪ್ರೊ. ನಾಗಭೂಷಣಸ್ವಾಮಿ ಅವರ ಸಾಹಿತ್ಯ ದಾಸೋಹ ಗಣನೀಯವಾದದ್ದು. ಆಳವಾದ ಅಧ್ಯಯನ, ಗಂಭೀರ ಸಂಶೋಧನೆ, ವೈಚಾರಿಕ ಪ್ರಜ್ಞೆ ವಿಮರ್ಶಾದೃಷ್ಟಿ, ಸೃಜನಶೀಲತೆ, ಸತ್ವಪೂರ್ಣವಾದ ಅನುವಾದ – ಪ್ರೊ. ಸ್ವಾಮಿ ಅವರ ವೈಶಿಷ್ಟ್ಯ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಪ್ರೊ. ನಾಗಭೂಷಣಸ್ವಾಮಿ ಅವರಿಗೆ ೨೦೧೩ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
ಕನ್ನಡದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಪ್ರೊ. ಜಿ.ಎಚ್. ಹನ್ನೆರಡುಮಠ ಅವರ ತಂದೆ ಹುಚ್ಚಯ್ಯಾ ಮತ್ತು ತಾಯಿ ಈಗ ಶತಾಯು ಆಗಿರುವ ಅನ್ನಪೂರ್ಣಮ್ಮ. ೧೯೪೦ರಲ್ಲಿ ಜನನ. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಬರೆದ ‘ಬಾಗಿಲ ಬೀಗದ ಬಿಂಕವೆ’ ಕಥೆಗೆ ಬೆಂಗಳೂರು ಕ್ರೈಸ್ತ ಕಾಲೇಜಿನ ರಾಜ್ಯಮಟ್ಟದ ಬಹುಮಾನ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಮೊದಲ ಕವನ ಸಂಕಲನ ‘ಕಾವ್ಯಕಲಾಪಿ’ ಬಿಡುಗಡೆಯಾಯಿತು. ಮಹಾಕಾವ್ಯ ‘ಬಸವ ಕಾವ್ಯದರ್ಶನ’ ೧೯೬೮ರಲ್ಲಿ ಮೈಸೂರು ಮಹಾರಾಜರಿಂದ ಬಿಡುಗಡೆಗೊಂಡಿತು.
ಬಾಲ್ಯದಿಂದಲೇ ಪ್ರಾರಂಭವಾದ ಸಾಹಿತ್ಯ ಕೃಷಿ. ಇಂದಿನವರೆಗೆ ೧೭ ಕಾದಂಬರಿಗಳು, ೧೪ ಕಾವ್ಯಗಳು, ೧೫ ನಾಟಕಗಳು, ೬ ಸಣ್ಣ ಕಥೆಗಳು, ೪ ವಿನೋದ ಬರಹಗಳು, ೨ ಲಲಿತ ಚಿಂತನೆಗಳು, ೫ ಚರಿತ್ರೆ, ೧೦ ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಕವನ, ಕಥೆ, ಮಕ್ಕಳ ನಾಟಕ, ವಚನ, ಪ್ರವಾಸಕಥನ, ವ್ಯಕ್ತಿ ಪರಿಚಯ, ಶೃಂಗಾರ ನೃತ್ಯ ನಾಟಕ – ಹೀಗೆ ಕನ್ನಡ ವಾಹ್ಮಯದ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಸೃಷ್ಟಿಸಿದ್ದಾರೆ. ಜೊತೆಗೆ ೬ ಚಲನಚಿತ್ರಗಳು, ೧೨ ಧ್ವನಿಸುರಳಿಗಳೂ ಬಿಡುಗಡೆಗೊಂಡಿವೆ.
ಪ್ರೊ. ಜಿ.ಎಚ್. ಹನ್ನೆರಡುಮಠ ಅವರ ಕಾದಂಬರಿ ಸಾಹಿತ್ಯ ಕುರಿತು ಪ್ರೊ. ಆರ್.ಐ. ಹರಕುಣಿ ಅವರು ಬರೆದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಹೆಚ್.ಡಿ. ಪದವಿ ನೀಡಿದೆ ಮತ್ತು ಪ್ರಸ್ತುತ ಗುಲ್ಬರ್ಗಾ ವಿಶ್ವವಿದ್ಯಾಲಯ ‘ಹನ್ನೆರಡುಮಠ ಸಮಗ್ರ ಸಾಹಿತ್ಯ ಕುರಿತು ಮಹಾಪ್ರಬಂಧ ಸಿದ್ಧಪಡಿಸುತ್ತಿದೆ.
‘ವಿಶ್ವಪ್ರಭೆ’ ಎಂಬ ೪,೦೦೦ ಪುಟಗಳ ಬೃಹತ್ ಸಂಪಾದನಾಕೃತಿ, ‘ಮಹಾಸಂಗಮ’ ಬೃಹತ್ ಕಾದಂಬರಿ ಮೂರು ತಿಂಗಳ ಮೌನ ಅನುಷ್ಠಾನದಲ್ಲಿ ಬರೆದ ‘ಚಿತ್ತರಗಿ ಚಿಜ್ಯೋತಿ’ ಇವರ ಕೆಲವು ವಿಶೇಷತೆಗಳು. ಹನ್ನೊಂದು ವರ್ಷಗಳಲ್ಲಿ ೧,೬೦೦ ಕ್ಕಿಂತ ಅಧಿಕ ಭಾವಗೀತೆಗಳನ್ನು ನೇಯ್ದ ದಾಸಿಮಯ್ಯ ಇವರು.
ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ, ಶ್ರೀ ಜಗದ್ಗುರು ಮೂರು ಸಾವಿರ ಮಠದ ಪ್ರಕಾಶನದ ೬೦೦ ಪುಸ್ತಕಗಳ ಪ್ರಕಟನೆಯಲ್ಲಿ ನಿರ್ದೇಶನ, ಮಾರ್ಗದರ್ಶನ, ಇಲಕಲ್ಲ ಮಠದ ಜನಸಮ್ಮುಖ ಕಾರ್ಯಗಳಲ್ಲಿ ೩೦ ವರ್ಷ ನಿರಂತರ ಸೇವೆ, ‘ಪರಂಜ್ಯೋತಿ’ ಪತ್ರಿಕೆಯ ಪ್ರಥಮ ಸಂಪಾದಕರಾಗಿ ೧೧ ವರ್ಷ, ಸಾಹಿತ್ಯ, ಸಂಸ್ಕೃತಿ, ಧರ್ಮ, ಯೋಗ, ಶಿಕ್ಷಣ, ಕಲೆ ಕುರಿತು ದೇಶ-ವಿದೇಶಗಳಲ್ಲಿ ನೂರಾರು ಉಪನ್ಯಾಸಗಳು, ನೂರಾರು ಗೌರವ-ಸನ್ಮಾನಗಳು ಜಿ.ಎಚ್. ಹನ್ನೆರಡುಮಠ ಜೀವನದ ತವನಿಧಿಯಲ್ಲಿ ಅಡಗಿವೆ.
ಜಿ.ಎಸ್. ಹನ್ನೆರಡುಮಠ ಅವರು ಆಧುನಿಕ ವಚನ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೩ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನವೆನಿಸುತ್ತದೆ.
ಪಂಡಿತ ಅಂಬಯ್ಯ ನುಲಿ ಅವರು ವೃತ್ತಿಯಲ್ಲಿ ಶಿಕ್ಷಕರು. ಜನ್ಮ ದಿನಾಂಕ ೧-೬-೧೯೫೯ ಹೊಸೂರು ತಾಲ್ಲೂಕು ರಾಯಚೂರು ಜಿಲ್ಲೆ ಜನ್ಮ ಸ್ಥಳ. ತಂದೆ ಮಹಾದೇವಪ್ಪ ನುಲಿ – ರಂಗಭೂಮಿ ನಿರ್ದೆಶಕರು, ತಾಯಿ ಶರಣಮ್ಮ ನುಲಿ. ಇವರ ಧರ್ಮಪತ್ನಿ ಶ್ರೀಮತಿ ದೇವೇಂದ್ರಮ್ಮ ನುಲಿ, ಪೋಷಕರು – ಶ್ರೀ ರಾಮಸ್ವಾಮಿ ನುಲಿ ಮತ್ತು ಶ್ರೀಮತಿ ಗಂಗಮ್ಮ ನುಲಿ, ಸಂಗೀತ ಸಾಧನೆ – ಆಕಾಶವಾಣಿ ಪ್ರಥಮ “ಎ” ಶ್ರೇಣಿ, ೧೦೦೦ಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ. ಉಪಾಧ್ಯಕ್ಷರು ಅಭಿನಂದನ ಆಡಿಯೋ ಮಾನವಿ. ಧ್ವನಿ ಸುರಳಿ ೧೭೫ಕ್ಕೂ ಹೆಚ್ಚು ಧ್ವನಿಸುರಳಿ.
ಸಂಗೀತ ಸೇವೆ – ಹವ್ಯಾಸಿ ರಂಗಭೂಮಿಗೆ ಗೀತ ರಚನೆ, ಗಾಯನ, ಸಂಗೀತ ನಿರ್ದೇಶನ, ಈ ಟಿ.ವಿ.ಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ತೀರ್ಪುಗಾರರು. ಉದಯ ಟಿ.ವಿ. ಕುಟುಂಬ ಧಾರಾವಾಹಿ ಶೀರ್ಷಿಕೆ ಗಾಯನ, ರಾಜ್ಯ ಮಟ್ಟದ ಸುಗಮ-ಸಂಗೀತ ಸಮ್ಮೇಳನ, ಕದಂಬೋತ್ಸವ, ಹಂಪಿ ಉತ್ಸವ, ರಾಯಚೂರು ಜಿಲ್ಲಾ ಉತ್ಸವ ಹಾಗೂ ಕನ್ನಡ ವಿವಿಧ ವಾಹಿನಿಗಳಲ್ಲಿ ಹಲವು ಕಾರ್ಯಕ್ರಮಗಳು, ಆಳ್ವಾಸ್ ನುಡಿಸಿರಿ, ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿರುತ್ತಾರೆ.
ಅಂಬಯ್ಯ ನುಲಿಯವರು ಪಡೆದಿರುವ ಪ್ರಶಸ್ತಿಗಳು : ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ಸ್ವರಮಂದಾರ, ಗಾನ ಕೋಗಿಲೆ, ಮೇಘ ಮಲ್ಲಾರ, ಶರಣ ಸತ್ಯಪ್ಪ, ಮಧರಗಾನ ಮಂದಾರ ಹಾಗೂ ನಾಡಿನ ವಿವಿಧ ಮಠ ಮಾನ್ಯಗಳು ಸಂಘ-ಸಂಸ್ಥೆಗಳಿಂದ ವಿವಿಧ ಪ್ರಶಸ್ತಿ ಸನ್ಮಾನಗಳು, ಅಥಣಿ
ಮೋಟಗಿ ಮಠದಿಂದ ಗೌರವ, ಪಂಡಿತ ಸಿದ್ಧರಾಮ ಜಂಬಲದಿನ್ನಿ ಪ್ರಶಸ್ತಿ ಭಾಲ್ಕಿ ಮಠದಿಂದ, ಇನ್ನೂ ಅನೇಕ ಪಂಡಿತ ಮಹಾಶಯರು ಪ್ರಶಸ್ತಿ ಪುರಸ್ಕೃತಗಳನ್ನು ಪಡೆದಿರುತ್ತಾರೆ.
ಪಂ. ಅಂಬಯ್ಯ ನುಲಿ ಅವರು ನಿಷ್ಠೆಯಿಂದ ಸಂಗೀತಾಭ್ಯಾಸ ಮಾಡಿ, ಬದುಕಿನ ಕಷ್ಟನಿಷ್ಠುರಗಳ ಸವಾಲುಗಳನ್ನೆಲ್ಲ ಉದುರಿಸಿ ಸಂಗೀತ ಕ್ಷೇತ್ರದ ಓರ್ವ ಗೌರವಾನ್ವಿತ ಕಲಾವಿದರಾಗಿ ಬೆಳೆದಿದ್ದಾರೆ.
ಶರಣರ ವಚನಗಳು ಮತ್ತು ಕನ್ನಡ ಭಾವಗೀತೆಗಳ ಗಾಯನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿರುವ ಅಂಬಯ್ಯ ನುಲಿ ಅವರ ಸಂಗೀತ ಗುರು – ಶ್ರೀ ನಾರಾಯಣ ಢಗೆ ರಾಯಚೂರು ಅವರು. ಕಲಿಸಿದ ಗುರುಗಳಿಗೆ ಗೌರವ ತಂದುಕೊಟ್ಟವರು ಅಂಬಯ್ಯ ನುಲಿ.
ಶ್ರೀ ಅಂಬಯ್ಯ ನುಲಿ ಅವರು ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಗಮನಾರ್ಹ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೧೩ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
ವಚನ ಪಿತಾಹಮ ಫಗು. ಹಳಕಟ್ಟಿ ಕನ್ನಡ ನಾಡು ಕಂಡ ಅದ್ವಿತೀಯ ವ್ಯಕ್ತಿ-ಶಕ್ತಿ. ಕಾಲಗರ್ಭದ ಕತ್ತಲೆಯಲ್ಲಿ ನಶಿಸಿ ಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ, ಪ್ರಕಟಿಸಿದ ಅಪ್ರತಿಮ ಸಂಶೋಧಕರು. ಅವರ ೬೦ ವರ್ಷಗಳ ನಿರಂತರ ಶ್ರಮದ ಫಲ ಕನ್ನಡ ಸಾಹಿತ್ಯದ ಭಾಗ್ಯ, ಡಾ. ಹಳಕಟ್ಟಿ ಅವರು ೧೯೧೦ರಲ್ಲಿ ಹುಟ್ಟು ಹಾಕಿದ ವಿಜಾಪುರದ ಬಿ.ಎಲ್.ಡಿ.ಇ. ಸಂಸ್ಥೆ ಶತಮಾನೋತ್ಸವ ಆಚರಿಸಿದ ಹಿರಿಯ ಸಂಸ್ಥೆ.
ಪ್ರಾತಃಸ್ಮರಣೀಯರಾದ ಫ.ಗು. ಹಳಕಟ್ಟಿ ಅವರ ತ್ಯಾಗ, ಪರಿಶ್ರಮ, ವಚನ ಸಾಹಿತ್ಯ ಸೇವೆಯ ನಿತ್ಯ ಸ್ಮರಣೆಯ ಸಲುವಾಗಿ ಬಿ.ಎಲ್.ಡಿ.ಇ. ಸಂಸ್ಥೆ ಅವರ ನೆನಪಿನಲ್ಲಿ ಒಂದು ಸ್ಮಾರಕ ಭವನವನ್ನು ನಿರ್ಮಿಸಿದೆ. ಅಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಡಾ. ಎಂ.ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರವು ಲಿಂ. ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ೧೫ ಸಂಪುಟಗಳಲ್ಲಿ (೧೨ ಸಾವಿರ ಪುಟಗಳು) ಪ್ರಕಟಿಸಿರುವುದು ಒಂದು ಮಹತ್ವದ ದಾಖಲೆಯಾಗಿದೆ.
ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯಚಟುವಟಿಕೆಗಳನ್ನು ಗಮನಿಸಿದ ಕನ್ನಡ ವಿಶ್ವವಿದ್ಯಾಲಯವು ೨೦೦೫ರಲ್ಲಿ ಈ ಸಂಸ್ಥೆಯನ್ನು ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರವನ್ನಾಗಿ ಮನ್ನಣೆ ನೀಡಿದೆ. ಈಗಾಗಲೇ ಎಂಟು ಜನ ಅಭ್ಯರ್ಥಿಗಳು ಈ ಕೇಂದ್ರದ ಮೂಲಕ ಹಂಪಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಏಳು ಗ್ರಂಥಗಳನ್ನು ಪ್ರಕಟಿಸಲಾಗಿದೆ.
ಡಾ. ಹಳಕಟ್ಟಿ ಅವರ ಜೀವನ, ಹಾಗು ಸಾಧನೆಯನ್ನು ನಾಡಿನುದ್ದಗಲಕ್ಕೂ ಪರಿಚಯಿಸುವ ಸಲುವಾಗಿ ಸಂಸ್ಥೆಯು ಕೂಡಲ ಸಂಗಮದ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಲ್ಲಿ ೧ ಲಕ್ಷ ರೂ. ದತ್ತಿನಿಧಿಯನ್ನು ಸ್ಥಾಪಿಸಿದೆ. ಸಂಶೋಧನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವ ಅತ್ಯಂತ ಸುಸಜ್ಜಿತ ಗ್ರಂಥಾಲಯ ಸೌಲಭ್ಯ ಕಲ್ಪಿಸಿದೆ. ಹಳಕಟ್ಟಿ ಅವರು ಬಳಸುತ್ತಿದ್ದ ದೈನಂದಿನ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.
ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಬಿ. ಪಾಟೀಲ್, ಕೇಂದ್ರ ಅಧ್ಯಕ್ಷರಾದ ಶ್ರೀ ಶಿವಯೋಗಿ ಎಸ್. ತಂಬಾಕೆ ಮತ್ತು ಕಾರ್ಯದರ್ಶಿಗಳಾದ ಡಾ. ಎಂ.ಎಸ್. ಮದಭಾವಿ ಅವರ ನೇತೃತ್ವದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಪ್ರತಿಷ್ಠಿತ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಡಾ. ಫ.ಗು. ಹಳಕಟ್ಟೆ ಅಧ್ಯಯನ ಕೇಂದ್ರ ಅತ್ಯುತ್ತಮ ಕೇಂದ್ರವೆಂದು ಪ್ರಶಂಸಿದೆ. ಕೇಂದ್ರದ ಅಧ್ಯಕ್ಷರಾದ ಶ್ರೀ ಶಿವಯೋಗಿ ಎಸ್. ತಂಬಾಕೆ ಅವರು ಈ ಅಧ್ಯಯನ ಕೇಂದ್ರದ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲು ಅಹರ್ನಿಶಿ ಪ್ರಯತ್ನಿಸುತ್ತಿದ್ದಾರೆ.
ಸಾಹಿತ್ಯ ನಕ್ಷೆಯಲ್ಲಿ ಈ ಕೇಂದ್ರ ಮತ್ತಷ್ಟು ಹಿರಿಯ ಸ್ಥಾನ ಪಡೆಯಲಿ ಎಂದು ಹಾರೈಸುತ್ತಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೧೩ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.
ಡಾ. ಮೀನಾಕುಮಾರಿ ಪಾಟೀಲ್ ೧೯೭೫ರಲ್ಲಿ ಸುಭಾಷ್ ಪಾಟೀಲ್ ಮತ್ತು ಶ್ರೀಮತಿ ಲಲಿತಾಬಾಯಿ ಪಾಟೀಲ್ ಅವರ ಪುತ್ರಿಯಾಗಿ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಜನಿಸಿದರು. ಬಾಲ್ಯವನ್ನು ಕಡುಬಡತನದಲ್ಲಿ ಕಳೆದ ಮೀನಾಕುಮಾರಿ ಅಪ್ಪಟ ಬಸವತತ್ವಾನುಯಾಯಿಗಳಾಗಿದ್ದ ತಾಯಿಯ ಮಹದಾಶೆಯಂತೆ ವಿದ್ಯಾವಂತ- ರಾದರು. ‘ತಾಯಿಯೇ ಮೊದಲ ಗುರು’ ಎನ್ನುವಂತೆ ತಾಯಿಯು ನೀಡಿದ ಧೈರ್ಯವೇ ಇವರಿಗೆ ಶ್ರೀರಕ್ಷೆಯಾಗಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ‘ಶಿವಶರಣ ಘಟ್ಟಿವಾಳಯ್ಯ’ ವಿಷಯ ಕುರಿತು ಎಂ.ಫಿಲ್. ಪದವಿ ಪಡೆದಿದ್ದಾರೆ. ಡಾ. ಬಸವರಾಜ ಸಬರದ ಅವರ ಮಾರ್ಗದರ್ಶನದಲ್ಲಿ ‘ಆಯ್ಕಕ್ಕಿ ಮಾರಯ್ಯ’ ಲಕ್ಕಮ್ಮ ದಂಪತಿಗಳು – ಒಂದು ಅಧ್ಯಯನ’ ಎಂಬ ಸಂಶೋಧನಾ ವಿಷಯಕ್ಕೆ ಪಿಹೆಚ್.ಡಿ. ಪದವಿಯನ್ನೂ ಗಳಿಸಿದ್ದಾರೆ.
ಮೀನಾಕುಮಾರಿ ಪಾಟೀಲ್ ವಚನಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಲು ಕಾರಣಕರ್ತರು ಅವರ ದೀಕ್ಷಾ ಗುರುಗಳಾದ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಪೀಠಾಧ್ಯಕ್ಷರು, ಹಿರೇಮಠ ಸಂಸ್ಥಾನ ಭಾಲ್ಕಿ ಬಾಲ್ಯದಿಂದಲೇ ಶ್ರೀ ಮಠದ ಸಂಪರ್ಕ ಮತ್ತು ಗುರುಗಳ ಸಹಕಾರದಿಂದ ಶರಣರ ಕುರಿತಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮೀನಾಕುಮಾರಿ ಅವರು ಬರೆದ ಡಾ. ಚನ್ನಬಸವ ಪಟ್ಟದ್ದೇವರು, ಘಟ್ಟಿವಾಳಯ್ಯ, ವಚನ ಸಾಹಿತ್ಯದಲ್ಲಿ ಘಟ್ಟಿವಾಳಯ್ಯ, ಆಯ್ದಕ್ಕಿ ಮಾರಯ್ಯ ಲಕ್ಕಮ್ಮ, ಹೈದ್ರಾಬಾದ್ ಕರ್ನಾಟಕದ ಶಿವಶರಣೆಯರು ಮೊದಲಾದ ಪ್ರಸ್ತಕಗಳು ಅವರ ಶರಣ ಸಾಹಿತ್ಯ ಮತ್ತು ಸಂಶೋಧನಾಸಕ್ತಿಗಳಿಗೆ ಸಾಕ್ಷಿಯಾಗಿವೆ.
ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದವರು ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಭಾಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಡಾ. ಮೀನಾಕುಮಾರಿ ಪಾಟೀಲ್ ಅವರನ್ನು ಸನ್ಮಾನಿಸಿದ್ದಾರೆ.
ಪ್ರಸ್ತುತ ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮೀನಾಕುಮಾರಿ ಪಾಟೀಲ್ ಶಿವಶರಣರ ಬದುಕನ್ನು ಮಾದರಿಯಾಗಿಟ್ಟುಕೊಂಡು, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಶರಣ ಜೀವನ ಸಾಗಿಸುತ್ತಾ ಮುನ್ನಡೆಯುತ್ತಿದ್ದಾರೆ.
ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಡಾ. ಮೀನಾಕುಮಾರಿ ಪಾಟೀಲ್ ಅವರಿಗೆ ೨೦೧೩ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ನೀಡಿ ಗೌರವಿಸಲು ಹರ್ಷಪಡುತ್ತದೆ.
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ’ ಎಂಬಂತೆ ಓದಿದ್ದು ವಿಜ್ಞಾನ, ಸಸ್ಯಶಾಸ್ತ್ರ, ಆದರೆ ಆಸಕ್ತಿ, ಪ್ರತಿಭೆಗಳಿಂದ ಆಧುನಿಕ ವಚನಕಾರ್ತಿಯಾಗಿ ಗಮನ ಸೆಳೆದಿರುವ ಉದಯೋನ್ಮುಖ ವಚನಕಾರ್ತಿ ಕುಮಾರಿ ಶ್ವೇತಾ ಬಸಮಾಜ ಕರ್ಕಿ, ಶ್ರೀ ಬಸವರಾಜ ಕರ್ಕಿ, ಶ್ರೀಮತಿ ಆಶಾ ಕರ್ಕಿ ಅವರ ಸುಪುತ್ರಿಯಾಗಿ ೧೯೮೯ರಲ್ಲಿ ಘಟಪ್ರಭಾದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿಎಸ್ಪಿ. ಮತ್ತು ಎಂ.ಎಸ್.ಸಿ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದ ಪ್ರತಿಭಾವಂತೆ.
ಶ್ವೇತಾ ಅವರ ವಯಸ್ಸು ಕಿರಿದಾದರೂ ಸಾಧನೆ ಹಿರಿದು. ಈಗಾಗಲೇ ವಚನ ಪಲ್ಲವ, ವಚನ ಚಕೋರಿ, ಹಳಕಟ್ಟಿ ತಾತನಿಗೆ ವಚನ ನಮನ, ವಚನಕೋಕಿಲ ಮತ್ತು ವಚನ ಬಸವ ಎಂಬ ಐದು ಆಧುನಿಕ ವಚನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ. ಅನೇಕ ಸಮ್ಮೇಳನಗಳಲ್ಲಿ, ಕವಿಗೋಷ್ಠಿಯಲ್ಲಿ ಸ್ವರಚಿತ ವಚನ ವಾಚನ, ಕವನ ವಾಚನ ಮಾಡಿದ್ದಾರೆ. ವಿಜ್ಞಾನ ಮತ್ತು ಸಸ್ಯಶಾಸ್ತ್ರವನ್ನು ಕುರಿತಾಗಿಯೂ ಅನೇಕ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ, ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಹಿಂದಿ ವಿಶಾರದ ಮತ್ತು ಚಿತ್ರಕಲೆಯಲ್ಲಿ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಸಪ್ರಶ್ನೆ, ಚಿತ್ರಕಲೆ, ಸಾಹಿತ್ಯ, ರಂಗೋಲಿ, ಹೂಜೋಡಣೆ, ಮೊದಲಾದವು ಶ್ವೇತಾ ಅವರ ಆಸಕ್ತಿಯ ಕ್ಷೇತ್ರಗಳು.
ಶ್ವೇತಾ ಬ. ಕರ್ಕಿ ಅವರ ಪ್ರತಿಭೆಗೆ ಮನ್ನಣೆಯಾಗಿ ಸರ್. ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಚೇತನ ಬಾಲ ಸಾಹಿತ್ಯ ಪ್ರಶಸ್ತಿ, ಪುಟಾಣಿ ರತ್ನ, ಅರಳು ಮೊಗ್ಗು ಪ್ರಶಸ್ತಿ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಆಧುನಿಕ ವಚನ ರಚನೆಯಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಉದಯೋನ್ಮುಖ ವಚನಕಾರ್ತಿ ಕುಮಾರಿ ಶ್ವೇತಾ ಬಸವರಾಜ ಕರ್ಕಿ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೧೩ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಲು ಹರ್ಷಪಡುತ್ತದೆ
ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಹಾಗು ಸುಗಮ ಸಂಗೀತ ಗಾಯಕ ಶ್ರೀ ರವೀಂದ್ರ ಸೊರಗಾಂವಿ ಹುಟ್ಟಿ ಬೆಳೆದದ್ದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ, ಇವರದು ಸಂಗೀತ ಪರ೦ಪರೆಯ ಕುಟುಂಬ, ತಾತ ಮುರಿಗೆಪ್ಪ ಸೊರಗಾಂವಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರು. ತಂದೆ ಸುಭಾಷ್ ಸೊರಗಾಂವಿ ಹಾರ್ಮೊನಿಯಂ ಕಲಾವಿದರು. ರವೀಂದ್ರ ಅವರಿಗೆ ಮನೆಯೆ ಮೊದಲ ಪಾಠ ಶಾಲೆ, ತಾತನೆ ಮೊದಲ ಗುರು, ಬಾಲ್ಯದಲ್ಲಿಯೇ ಅಭಿನಯಿಸುತ್ತಾ ಹಾಡುವುದರ ಮೂಲಕ ರಂಗಪ್ರವೇಶ. ಮುಂದೆ ಜಮಖಂಡಿಯ ಪಂ. ಸ್ವಾಮಿ ಸಂಗಮೇಶ್ವರ ಹಿರೇಮಠ ಅವರಲ್ಲಿ ಸಂಗೀತಾಭ್ಯಾಸ ಪ್ರಾರಂಭ, ನಂತರ ಪಂ, ಅರ್ಜುನ್ ಸಾ ನಾಕೋಡ್ ಅವರಲ್ಲಿ ಅಭ್ಯಸಿಸಿ, ವಿದ್ವತ್ ಪರೀಕ್ಷೆಯಲ್ಲಿ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣ. ‘ಬಿ-ಹೈ’ ಶ್ರೇಣಿ ಕಲಾವಿದರಾಗಿ ಆಕಾಶವಾಣಿ ದೂರದರ್ಶನಗಳಲ್ಲಿ ಕಾಠ್ಯಕ್ರಮ ನೀಡುತ್ತಿದ್ದಾರೆ.
ವಿಶೇಷವಾಗಿ ಶರಣರ ವಚನಗಳು, ತತ್ವಪದಗಳು, ದಾಸರ ಪದಗಳು ಹಾಗು ಕವಿಗಳ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡುವುದರ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ‘ತತ್ವರಸಾನುಭವ’, ಕೂಡಲ ಸಂಗಮದಲ್ಲಿ ‘ವಚನ ವೈಭವ’ ಮೊದಲಾದ ಕಾರ್ಯಕ್ರಮಗಳು ದೂರದರ್ಶನದಲ್ಲಿ ನೇರ ಪ್ರಸಾರಗೊಂಡಿವೆ. ಈ ಟಿವಿಯ ‘ಎದೆ ತುಂಬಿ ಹಾಡುವನು’ ಹಾಗು ಝೀ ಟಿವಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ದೇಶವಿದೇಶಗಳ ಹಲವಾರು ಪ್ರತಿಷ್ಠಿತ ಸಂಗೀತ ಕಛೇರಿಗಳಲ್ಲಿ ತಮ್ಮ ಗಾಯನ ಪ್ರಸ್ತುತ ಪಡಿಸಿದ್ದಾರೆ.
‘ವಚನೋತ್ಸವ’, ‘ವಚನಗಾನಾಂಬುಧಿ’, ‘ವಚನತೀರ್ಥ’, ‘ಬಸವಶ್ರೀ’ ಹಿಂದಿ ಭಾಷೆಯಲ್ಲಿ ‘ಬಸವ ವಚನಾಮೃತ’ ಮೊದಲಾದ ಧ್ವನಿ ಸುರಳಿಗಳನ್ನು ಹೊರತಂದಿದ್ದಾರೆ.
‘ಪುಟ್ಟಕ್ಕನ ಹೈವೇ’ ಕನ್ನಡ ಚಿತ್ರದಲ್ಲಿ ಕರ್ನಾಟಕ ಚಲನಚಿತ್ರ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಮಯೂರ ಪ್ರಶಸ್ತಿ, ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿ ಹೀಗೆ ನಾಡಿನ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದ್ದಾರೆ.
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಮೂರು ವರ್ಷ ಸೇವೆ ಸಲ್ಲಿಸಿರುವ ರವೀಂದ್ರ ಸೊರಗಾಂವಿ ಪ್ರಸ್ತುತ ‘ಇಂಡಿಯನ್ ಮ್ಯೂಸಿಕ್ ಅಸೋಸಿಯೇಷನ್ (ರಿ.) ಬೆಂಗಳೂರು ಇದರ ಅಧ್ಯಕ್ಷರಾಗಿ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ, ತಮ್ಮ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ವಚನ ಸಂಗೀತ ಕ್ಷೇತ್ರಕ್ಕೆ ರವೀಂದ್ರ ಸೊರಗಾಂವಿ ಅವರು ನೀಡಿರುವ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ ೨೦೧೩ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಲು ಹರ್ಷಿಸುತ್ತದೆ.
ಸಾಹಿತಿಗಳು, ಕಲಾವಿದರು, ಸಂಘಟಕರು, ವಾಗ್ರಿಗಳು, ಯೋಜಕರು, ಕಾರ್ಯಕರ್ತರು ಎಲ್ಲರನ್ನೂ ಒ೦ದುಗೂಡಿಸಿಕೊಂಡು ಸದ್ದುಗದ್ದಲವಿಲ್ಲದೆ, ಪ್ರಾಮಾಣಿಕವಾಗಿ ಶ್ರಮಿಸುತ್ತಾ, ಅಚ್ಚರಿ ಹುಟ್ಟುವಷ್ಟು ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ಬೆಂಗಳೂರಿನ ವಚನ ಜ್ಯೋತಿ ಬಳಗ, ಯುವ ಪೀಳಿಗೆಗೆ ಮತ್ತು ಎಳೆಯರಿಗೆ ನಮ್ಮ ಸಂಸ್ಕೃತಿಯ ಸಂದೇಶವನ್ನು ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ವಚನ ಜ್ಯೋತಿ ಬಳಗದ ಕಾರ್ಯ ವಿನೂತನವಾದದ್ದು.
ಪಂಡಿತ ಕೆ.ಪಿ. ಶಿವಲಿಂಗಯ್ಯನವರ ಕನಸಿನ ಕೂಸಾದ ‘ವಚನ ಜ್ಯೋತಿ’ ಪತ್ರಿಕೆ ಅವರ ನಂತರ ಅವರ ಪುತ್ರ, ವಾಕ್ಯ, ವಚನ ಚಿಂತಕ, ಬಸವಣ್ಣನ ಕಟ್ಟಾ ಅನುಯಾಯಿ ಎಸ್. ಪಿನಾಕಪಾಣಿ ಅವರಿಂದ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ರೂಪುಗೊಂಡಿತು. ಪಿನಾಕಪಾಣಿ ಅವರು ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ
ಕಾರ್ಯದರ್ಶಿಗಳೂ ಹೌದು.
ವಚನ ಜ್ಯೋತಿ ಬಳಗ ಕಳೆದ ಹದಿನೇಳು ವರ್ಷಗಳಿಂದ ಶರಣ ಹಣತೆಯೊಂದಿಗೆ ಕನ್ನಡದ ಕಂಪನ್ನು ಹರಡುತ್ತಿದೆ. ಮನೆ-ಮನೆಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಹರಡುವ ‘ವಚನ ಸಂಜೆ’ ಬಳಗದ ವಿಶಿಷ್ಟ ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ಬಳಗ ನಡೆಸುತ್ತಿರುವ ಆದಿಕವಿ ಪಂಪನಿಂದ ಮಹಾಕವಿ ಕುವೆಂಪುವರೆಗೆ ‘ಕವಿ ಕಾವ್ಯ ಶ್ರಾವಣ’ ಕಾರ್ಯಕ್ರಮ ಸಾಹಿತ್ಯಾಸಕ್ತರನ್ನು ಆಕರ್ಷಿಸಿದೆ. ‘ಶಾಲೆಯಿಂದ ಶಾಲೆಗೆ ವಚನ ಜ್ಯೋತಿ ಕನ್ನಡ ಸಂಸ್ಕೃತಿ ಸಂಚಾರ’ ನೂರಾರು ಶಾಲೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ತಲುಪಿದೆ. ‘ವಚನಾಮೃತ ವರ್ಷಿಣಿ’ ಮಹೋತ್ಸವವಂತೂ ಹಿರಿ-ಕಿರಿಯರಿಗೆ ಸಂಸ್ಕೃತಿಯ ಹಬ್ಬವಾಗಿದೆ.
ಲಿಂಗೈಕ್ಯ ಶಿವಲಿಂಗಯ್ಯನವರ ಹೆಸರಿನಲ್ಲಿ ಬಳಗವು ಪ್ರತಿವರ್ಷ ಒಬ್ಬ ವಿದ್ವಾಂಸರಿಗೆ ‘ಶಿವಲಿಂಗ ಪ್ರಶಸ್ತಿ’ ಪ್ರದಾನ ಮಾಡುತ್ತಿದೆ.
೨೪ ಗಾಯಕರುಗಳನ್ನು ಸೇರಿಸಿ, ೧೫ ಸಾವಿರಕ್ಕೂ ಹೆಚ್ಚು. ಅಭಿಮಾನಿಗಳನ್ನು ಕೂಡಿಸಿ ಸಿದ್ಧಗಂಗೆಯ ಸಿದ್ಧಪುರುಷ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಿಗೆ ಪ್ರಿಯವಾದ ವಚನಗಳ ಗಾಯನದ ಮೂಲಕ ‘ವಚನ ಗುರುವಂದನೆ’ಯನ್ನು ಅರ್ಪಿಸಿದ್ದು ನಿಜಕ್ಕೂ ಬಳಗದ ಒಂದು ಸ್ಮರಣೀಯ ಕಾರ್ಯಕ್ರಮ.
‘ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿ’ ಕರೆಯೊಂದಿಗೆ ಪ್ರತಿವರ್ಷ ನಡೆಸುವ ‘ಬಸವ ಉತ್ಸವ’ ಬಳಗದ ಮತ್ತೊಂದು ವಿಶಿಷ್ಟ ಕಾರ್ಯಕ್ರಮ.
ಯಾವುದೇ ಆರ್ಥಿಕ ಅನುಕೂಲವಿಲ್ಲದಿದ್ದರೂ ಕೇವಲ ಸಂಕಲ್ಪಶಕ್ತಿ ಮಾತ್ರದಿಂದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಸೇವೆಯಲ್ಲಿ ತೊಡಗಿರುವ ‘ವಚನ ಜ್ಯೋತಿ ಬಳಗ’ಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೩ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಹರ್ಷಪಡುತ್ತದೆ.
Copyright © 2024 Ramanashree Awards . All Rights Reserved. Crafted by Pixelsbrew