ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2021

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಡಾ. ಗುರುರಾಜ ಕರಜಗಿ

ಸ್ಪುಟತೆ, ನಿಖರತೆ, ನಿಚ್ಚಳತೆ ಡಾ. ಗುರುರಾಜ ಕರಜಗಿ ಅವರ ಮಾತಿನ ವೈಖರಿ, ಅವರದು ಲಘುವಾದ ಮಾತಲ್ಲ. ಹದಗೊಂಡ ಪಕ್ವತೆ ತುಂಬಿದ ಚಿಂತನೆಯ ಅಭಿವ್ಯಕ್ತಿ. ಆಲೋಚನೆಯ ಕ್ರಿಯೆ ಅರ್ಥದ ಸ್ಪುರಣೆಗಳು ಒಡಗೊಂಡು ಹೊರಹೊಮ್ಮುವ ನಾದದ ಅಲೆಯಂತೆ.

ಮಾತಿನ ಗೆಜ್ಜೆನುಡಿಗಳು, ತಂತಿಯ ಝೇಂಕಾರದಂತೆ, ‘ಸೃಜನಶೀಲತೆ ಹಾಗೂ ವಿಮರ್ಶಾತ್ಮಕತೆ’, ‘ಸಮಸ್ಯಾ ಪರಿಹಾರ’, ‘ಕೌಶಲಗಳು’, ‘ಸಂವಹನ-ಕೌಶಲ’, ‘ಪ್ರೇರಣೆ’, ‘ವೃತ್ತಿಯಲ್ಲಿ ನೈತಿಕತೆ’, ‘ಮೌಲ್ಯಗಳು’ ಇವರು ಮಂಡಿಸುವ ವಿಷಯಗಳು.

ಡಾ. ಗುರುರಾಜ ಕರಜಗಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಮಹತ್ವದ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ಪ್ರತಿಷ್ಠಿತ ಶೈಕ್ಷಣಿಕ, ಸರ್ಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ವಿ.ವಿ.ಎಸ್. ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸೃಜನಶೀಲ ಅಧ್ಯಾಪನಾ ಕೇಂದ್ರದ ಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ‘ಪ್ರಜಾವಾಣಿ’ಯಲ್ಲಿ 1800ಕ್ಕೂ ಹೆಚ್ಚು ಅಂಕಣಗಳನ್ನು ಬರೆದು, ‘ಕರುಣಾಳು ಬಾ ಬೆಳಕೆ’ ಪುಸ್ತಕ ಹೊರತಂದಿದ್ದಾರೆ. ಅನೇಕ ಕಥೆಗಳು, ಲೇಖನಗಳನ್ನು ಬರೆದಿದ್ದಾರೆ. ಸೃಜನಶೀಲತೆಗೆ ತುಡಿಯುವ ಮನಸ್ಸಿನ, ಸದಾ ತಮ್ಮೆಲ್ಲ ಗ್ರಹಿಕೆಯ ಹೊಳಹುಗಳನ್ನು ಹೊಸಜನರಿಗೆ ಬಿತ್ತುತ್ತಾ ಸಾಗುವ ಸಹೃದಯರು ಇವರು. ವಚನ ಸಾಹಿತ್ಯ ವಿಚಾರಧಾರೆ ಇವರದು. ಇಂತಹ ಮಹನೀಯರು ಸಾರ್ವಜನಿಕ ಶಿಕ್ಷಣಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ನೆಯ ಸಾಲಿನ ‘ರಮಣಶ್ರೀ ಶರಣ ಜೀವಮಾನ ಸಾಧಕ’ ಸನ್ಮಾನ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಶಾಂತಾ ಇಮ್ರಾಪುರ

ಸಂಶೋಧನೆ, ವಿಮರ್ಶೆ, ಅನುಭಾವ ಸಾಹಿತ್ಯ, ಮಹಿಳಾ ಅಧ್ಯಯನ, ಆಧುನಿಕ ಸಾಹಿತ್ಯ, ಜನಪದ ಸಾಹಿತ್ಯ – ಹೀಗೆ ಹಲವು ಸಾಹಿತ್ಯ ಸಂಬಂಧಿ ಕ್ಷೇತ್ರಗಳಲ್ಲಿ ಅನುಪಮವಾಗಿ, ಅಪಾರವಾಗಿ ದುಡಿದವರು ಡಾ. ಶಾಂತಾ ಇಮ್ರಾಪುರ ಅವರು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಹುಟ್ಟಿದ ಇವರು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ದುಡಿದವರು. ‘ಆಯ್ದಕ್ಕಿ ಲಕ್ಕಮ್ಮ’, ‘ಮುಕ್ತಾಯಕ್ಕ’, ‘ಮರುಳ ಶಂಕರದೇವ’ ಮೊದಲಾದವರನ್ನು ಕುರಿತ ಕೃತಿಗಳನ್ನೇ ಅಲ್ಲದೆ “ಅಕ್ಕಮಹಾದೇವಿ ಜೀವನ -ಸಾಹಿತ್ಯ’ ಕುರಿತು ಪಿಎಚ್.ಡಿ. ಅಧ್ಯಯನದ ಮಹಾಪ್ರಬಂಧ ರಚಿಸಿದ್ದಾರೆ.

ಮಹಿಳಾ ಸಾಹಿತ್ಯ ಸಂಶೋಧನೆ, ಜನಪದರ ಗಾದೆ, ಒಡಪು, ತ್ರಿಪದಿ, ವೈದ್ಯ, ಸಣ್ಣಾಟ, ವಿಷಯಗಳನ್ನು ಕುರಿತ ಬಹುಮುಖ್ಯ ಕೃತಿಗಳನ್ನು ಹೊರತಂದಿದ್ದಾರೆ. ಬೇರೆ ಬೇರೆ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ವ್ಯಕ್ತಿಚರಿತ್ರೆಗಳನ್ನು ಬರೆದಿದ್ದಾರೆ. ಸಂಪಾದನೆಯ ಕೃತಿಗಳ ಸಂಖ್ಯೆಯು ಗಣನೀಯವಾಗಿದೆ.

ತಮ್ಮ ವೃತ್ತಿ, ಸಂಶೋಧನೆಯ ನೋಟಗಳ ಭಿತ್ತಿ, ವಿಸ್ತಾರವಾದ ಪರಿಶ್ರಮದ ಆವೃತ್ತಿಗಳ ಮೂಲಕ, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಟ್ಟಿಯಾದ ಹೆಸರುಳ್ಳುವರಾಗಿ ಉಳಿದಿದ್ದಾರೆ. ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ಸಾಲಿನ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.

ಆಧುನಿಕ ವಚನ ರಚನೆ

ಡಾ. ಪ್ರದೀಪಕುಮಾರ ಹೆಬ್ರಿ

ಬಹುಮುಖಿ ಪ್ರತಿಭಾ ಸಂಪನ್ನತೆ ಹಲವರದು. ಅದು ಒಂದೆರಡು ಕ್ಷೇತ್ರಗಳಲ್ಲಿ ಅಲ್ಲ. ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರು ಡಾ. ಪ್ರದೀಪ್ ಕುಮಾರ ಹೆಬ್ರಿ ಅವರು.

ಇವರು ಕವನ, ಶಿಶುಗೀತೆ, ಅಂಕಣ ಬರಹ, ಆರೋಗ್ಯ, ಲಲಿತ ಪ್ರಬಂಧ, ವಚನಗಳು, ವಿಜ್ಞಾನ, ಸಣ್ಣಕಥೆ, ಜೀವನ ಚರಿತ್ರೆ, ಮಹಾಕಾವ್ಯ ಹೀಗೆ 400ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೆಬ್ರಿಯಲ್ಲಿ ಹುಟ್ಟಿದವರು. ಹೆಬ್ರಿ, ಉಡುಪಿ, ಮಣಿಪಾಲದಲ್ಲಿ ವಿದ್ಯಾಭ್ಯಾಸ, ಆರೋಗ್ಯ ಪದವಿ ಪಡೆದ ಇವರು, ತಬಲಾ, ಯಕ್ಷಗಾನ, ನಾಟಕ ಹೀಗೆ ಅವರು ತೊಡಗಿಕೊಂಡ ಕ್ಷೇತ್ರಗಳನ್ನು ಕಂಡರೆ ಅಚ್ಚರಿ ಎನಿಸುತ್ತದೆ. ಪ್ರಸ್ತುತ ಮಂಡ್ಯದಲ್ಲಿ ವೈದ್ಯಕೀಯ ಪ್ರಯೋಗಾಲಯ ನಡೆಸಿದ್ದಾರೆ.

”ಯುಗಾವತಾರಿ’ ಬಸವದರ್ಶನ ಕಾವ್ಯ, 35 ಕವನ ಸಂಕಲನಗಳು, 9 ಹನಿಗವನ ಸಂಕಲನಗಳು, 4 ಶಿಶುಸಾಹಿತ್ಯ, ನೃತ್ಯ ರೂಪಕಗಳು, ನವಸಾಕ್ಷರರಿಗಾಗಿ 27 ಕೃತಿಗಳು, ಆರೋಗ್ಯ ಕುರಿತ 34 ಕೃತಿಗಳು, ಶರಣರನ್ನು ಕುರಿತ 66 ಕೃತಿಗಳು- ಹೀಗೆ ಅವರ ಸಾಹಿತ್ಯ ಕ್ಷೇತ್ರದ ಸಾಧನೆ ವಿಸ್ತಾರವಾದುದು.

ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಸೃಜನಶೀಲ ಲೇಖಕರಗಿರುವಂತೆ ಕ್ರಿಯಾಶೀಲ ಸಮಾಜ ಸೇವಕರು ಆಗಿದ್ದಾರೆ. ಸಾಹಿತ್ಯ ಸೇವೆಗಾಗಿ ನಾಡಿನ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇವರು ಶ – ಶರಣ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಸಂತೋಷವೆನಿಸುತ್ತದೆ.

ವಚನ ಸಂಗೀತ ಕ್ಷೇತ್ರ

ಡಾ. ನಂದಾ ಪಾಟೀಲ

‘ಎದೆಯಂತೆ ಕರಕರಗಿ ಮಳಲಂತೆ ಜರಿ ಜರಿದು’, ಅಕ್ಕನ ವಚನಗಳ “ಅಕ್ಕ ಕೇಳವ್ವಾ’ ಹಾಡಿನ ದನಿಯ ಮೂಲಕ ಪಲ್ಲವಿಸಿ, ಹೊರಹೊಮ್ಮಿಸಿ ಸೊಗಸು ಹರಡುವ ಶಾಸ್ತ್ರೀಯ ಸಂಗೀತದ ಹಾಡುಗಾರರು ಡಾ. ನಂದಾ ಪಾಟೀಲ ಅವರು. ಸಂಗೀತದ ಅಭ್ಯಾಸ, ಅಧ್ಯಯನ, ಹಾಡುಗಾರಿಕೆ ಎಲ್ಲವುಗಳನ್ನೂ ತಬ್ಬಿ ತಮ್ಮದೇ ಛಾಪು ಮೂಡಿಸಿರುವವರು. ಡಾ. ನಂದಾ ಪಾಟೀಲ ಅವರು ಹಾಡಿದ ಅಕ್ಕ ಕೇಳವ್ವಾ, ಎನ್ನೊಡೆಯ ಸಂಗಮನಾಥ, ಸಲಹು
ಕೂಡಲಸಂಗಮದೇವಾ ಧ್ವನಿಮುದ್ರಿಕೆಗಳು ಅತ್ಯಂತ ಜನಪ್ರಿಯವಾಗಿವೆ. ನಾಡಿನ ಉದ್ದಗಲಕ್ಕೂ ಹಾಡು ಹರಿಸಿದ್ದಾರೆ. ಅಣ್ಣಾಮಲೈ ಮುಂಬಯಿಗಳಲ್ಲಿ ಸಂಗೀತ ಕಛೇರಿ ನಡೆಸಿ ಹೆಸರಾಗಿದ್ದಾರೆ. ಡಾ. ನಂದಾ ಪಾಟೀಲ ವಚನ ಸಂಗೀತ ಸಂಸ್ಥೆ ಸ್ಥಾಪಿಸಿದ್ದಾರೆ.

ಡಾ. ನಂದಾ ಪಾಟೀಲ ಅವರ ಶಿಷ್ಯತ್ವ ಪಡೆದ ನೂರಾರು ಕಲಾವಿದರು ನಾಡಿನ ನಾನಾ ಸಂಗೀತ ವೇದಿಕೆಗಳಲ್ಲಿ ಕಛೇರಿ ನಡೆಸಿದ್ದಾರೆ. ಇವರು ಸಂಗೀತ ಕಲೆಯಂತೆಯೇ ಸಾಹಿತ್ಯ ಕೃಷಿಯನ್ನೂ ನಡೆಸಿದ್ದಾರೆ.

ಜಾನಪದ ಗಾಯಕ ಹುಕ್ಕೇರಿ ಬಾಳಪ್ಪ, ಪಂ. ಬಸವರಾಜ ರಾಜಗುರು, ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ ಅವರುಗಳನ್ನು ಕುರಿತ ಕೃತಿ ರಚಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯ 2019ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸಂಗೀತ ಕ್ಷೇತ್ರದ ಇವರ ಸಾಧನೆಯನ್ನು ಗುರುತಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಗ್ರಾಮೀಣ ಆರೋಗ್ಯ ಕೇಂದ್ರ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಶ್ರೀ ಸ್ವಾಮಿ ಜಪಾನಂದ ಸ್ವಾಮಿಗಳವರು ಸ್ಥಾಪಿಸಿ ನಡೆಸಿಕೊಂಡು ಬರುತ್ತಿರುವ ಶ್ರೀ ರಾಮಕೃಷ್ಣಾಶ್ರಮವು ಕಡುಬಡವರಿಗೆ ಪೂರಕ ಸೌಲಭ್ಯಗಳನ್ನು ನೀಡುತ್ತಿದೆ. ಬರಗಾಲದ ಕಷ್ಟಕ್ಕೆ ಈಡಾದಾಗ ಆ ಭಾಗದ ಹಳ್ಳಿಗಳ ಸಂತ್ರಸ್ಥರ ನೆರವಿಗೆ ನಿಂತವರು ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಗ್ರಾಮೀಣ ಆರೋಗ್ಯ ಕೇಂದ್ರದ ಶ್ರೀ ಜಪಾನಂದ ಸ್ವಾಮಿಗಳು. ಗೋಶಾಲೆ ತೆರೆದು ವೈದ್ಯಕೀಯ ಸೇವೆ ಒದಗಿಸಿದರು. ಈ ಸಂಸ್ಥೆ ಕುಷ್ಠರೋಗ, ಕ್ಷಯರೋಗ, ಹೆಚ್.ಐ.ವಿ., ಏಡ್ಸ್, ಹೃದ್ರೋಗಗಳ ನಿವಾರಣೆಗೆ ಶ್ರಮಿಸುತ್ತಿದೆ. ತಪಾಸಣೆ, ಚಿಕಿತ್ಸೆಗಳ ಮೂಲಕ ಅಸಂಖ್ಯಾತರ ಅಂಧತ್ವ ನಿವಾರಣೆ ಮತ್ತು ಹೃದ್ರೋಗ ತಪಾಸಣೆ ಶಿಬಿರಗಳನ್ನು ಸಂಘಟಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದೆ. ಚಿಕಿತ್ಸೆಗೆ ಬರುವವರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ನೆರೆಹಾವಳಿಗೆ ಒಳಗಾದ ಗುಜರಾತಿನ ಭೂಕಂಪ ಸಂತ್ರಸ್ಥರಿಗೆ ಆಹಾರ, ಬಟ್ಟೆ, ಔಷೋಧಾಪಾಚಾರ ಒದಗಿಸಿರುತ್ತದೆ. ಚೆನ್ನೈನಲ್ಲಿ ಮಹಾಮಳೆಗೆ ತೊಂದರೆಗೀಡಾದವರಿಗೆ ನೆರವಾಗಿದೆ.

ಕಷ್ಟಕ್ಕೆ ಮರಗುವ, ಜೀವಪರವಾದ ಮಹತ್ಕಾರ್ಯಕ್ಕೆ ತೊಡಗುವ, ಮಾನವೀಯತೆಗೆ ದುಡಿಯುವ ಈ ಸಂಸ್ಥೆಯನ್ನು ನಿರ್ವಹಿಸುತ್ತಿರುವ ಶ್ರೀ ಸ್ವಾಮಿ ಜಪಾನಂದರ ಪರಿಶ್ರಮ ಅಪರಿಮಿತವಾದುದು. ಈ ಸಂಸ್ಥೆ ಶರಣರ ಇವ ನಮ್ಮವ, ಇವ ನಮ್ಮವ’ ಎಂಬ ವಾಣಿಯಂತೆ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಭಾಗ್ಯಮ್ಮ ಜಿ.

ರಂಗಭೂಮಿ, ಯಕ್ಷಗಾನ, ಸಾಹಿತ್ಯ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಡಾ. ಭಾಗ್ಯಮ್ಮ ಜಿ. ಬಹುಮುಖ ಪ್ರತಿಭೆ, ಪ್ರಸ್ತುತ ಬೆಂಗಳೂರು ರಾಜಾನುಕುಂಟೆಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

‘ವಚನ ಸಾಹಿತ್ಯದಲ್ಲಿ ಯೋಗದ ವಿನ್ಯಾಸಗಳು’ ಇವರ ಪಿಹೆಚ್.ಡಿ. ಮಹಾಪ್ರಬಂಧ, ಜಾನಪದ, ಶಾಸನ, ನಾಟಕ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದ್ದಾರೆ. ಇವರ ಕವನ ಸಂಕಲನ ‘ಚಿರಂತನ’, ಹಾಗೆಯೇ ‘ಶೂನ್ಯ ಸಂವಾದ’ ಎಂಬ ನಾಟಕ ಕೃತಿ ಈಗಾಗಲೇ ಪ್ರಕಟಗೊಂಡಿವೆ.

ಡಾ. ಜಿ. ಭಾಗ್ಯಮ್ಮ ಅವರ ಸಂಶೋಧನ ಗ್ರಂಥದಲ್ಲಿ ವಚನ ಸಾಹಿತ್ಯದಲ್ಲಿ ಯೋಗಕ್ಕೆ ಸಂಬಂಧಿಸಿರುವ ವಿಚಾರಗಳನ್ನು ಆಳವಾಗಿ ಅಧ್ಯಯನಮಾಡಿ ದೈಹಿಕ ಮಾನಸಿಕ ರೋಗದ ರೂಪರೇಖೆಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. ಇವರು ಸಂಶೋಧನಾಸಕ್ತರಾಗಿರುವಂತೆ ಸಮರ್ಥ ಸಂವಹನಕಾರರು ಮತ್ತು ವಾಗಿಗಳೂ ಆಗಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ ಇವರಿಗೆ 2021ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಿವೆ.

ವಚನ ಸಂಗೀತ ಕ್ಷೇತ್ರ

ಶ್ರೀಮತಿ ಸ್ಮಿತಾರಾವ್ ಬೆಳ್ಳೂರ್

ಹಿಂದೂಸ್ಥಾನಿ ಪದ್ಧತಿ ಭಾರತೀಯ ಸಂಗೀತದಲ್ಲಿ ಅಭಿಜಾತ ಸಂಗೀತವಾಗಿ ಹೆಸರಾದುದು. ಇಂತಹ ಸಂಗೀತವನ್ನು ಪ್ರೌಢವಾಗಿ ಪಕ್ವವಾಗಿ ದಕ್ಕಿಸಿಕೊಂಡವರು ಶ್ರೀಮತಿ ಸ್ಮಿತಾರಾವ್ ಬೆಳ್ಳೂರ್ ಅವರು.

ಭಾರತದ ಸಂಗೀತ ಪ್ರಧಾನವಾದ ಬಹುಮುಖ್ಯ ಕೇಂದ್ರಗಳಲ್ಲಿ ಹಾಡಿ ಹೆಸರಾದವರು ಶ್ರೀಮತಿ ಸ್ಮಿತಾರಾವ್ ಬೆಳ್ಳೂರ್ ಅವರು. ಹಿಂದೂಸ್ಥಾನಿ ಸಂಗೀತದ ಕಾಲ್ಸ್, ಸಾಂಪ್ರದಾಯಿಕ ಸೂಫಿ, ತುಮಿ, ಚಾತಿ, ಸಿನೆಮಾ ಸಂಗೀತ- ಹೀಗೆ ಹಲವು ಮಹತ್ವದ ಸಂಗೀತದ ಧಾರೆಗಳಲ್ಲಿ ಪರಿಶ್ರಮಿಸುತ್ತಿರುವವರು.

ಅನೇಕ ಪ್ರಮುಖ ಸಂಗೀತ ವೇದಿಕೆಗಳಲ್ಲಿ ವಚನಗಳನ್ನು ಹಾಡಿದ್ದಾರೆ. ‘ಸಂಗೀತಸಿರಿ’, ಡಾ. ಪಂಡಿತ್ ಗವಾಯಿ ಕೃಪಾ ಭಾಷಣ ಪ್ರಶಸ್ತಿಗಳು ಸಂದಿವೆ. ಎಂ.ಎಸ್. ಪದವೀಧರೆಯಾದ ಇವರು ಕಂಪನಿಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಗಾಯನದಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸಿರುವ ಸ್ಮಿತಾರಾವ್ ಬೆಳ್ಳೂರ್ ಅವರು ಅನೇಕ ಹಿರಿಯ ಸಂಗೀತ ವಿದ್ವಾಂಸರ ಮೆಚ್ಚುಗೆ ಪಡೆದಿದ್ದಾರೆ.

ಆಕಾಶವಾಣಿ, ಟಿ.ವಿ. ಚಾನೆಲ್‌ಗಳು ಇವರ ಸಂಗೀತವನ್ನು ಬಿತ್ತರಿಸಿವೆ. ಶಂಕರ ಮಹದೇವನ್ ಅಕಾಡೆಮಿಯ ಸೀನಿಯರ್ ಫ್ಯಾಕಲ್ಟಿ ಆಗಿದ್ದಾರೆ. ಸಂಗೀತದ ವಿಶೇಷ ಅಧ್ಯಯನದಲ್ಲಿಯೂ ತೊಡಗಿದ್ದಾರೆ.

ಶ್ರೀಮತಿ ಸ್ಮಿತಾರಾವ್ ಬೆಳ್ಳೂ‌ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ

ಚಾಮರಾಜನಗರ ತಾಲ್ಲೂಕಿನ ಉಡಿಗಾಲದ ಶ್ರೀ ಪ್ರಕಾಶ್ ಅವರು ಸ್ಥಾಪಿಸಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಿರಂತರವಾಗಿ ಯೋಗ ಶಿಕ್ಷಣವನ್ನು ನೀಡುತ್ತಿದೆ. ಈ ಸಂಸ್ಥೆಯು ಕಳೆದ 30 ವರ್ಷಗಳಿಂದ ಯೋಗ, ಆಧ್ಯಾತ್ಮಜ್ಞಾನ ಮತ್ತು ಧ್ಯಾನದ ಕುರಿತ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ.

ಸಂಸ್ಥೆಯ ಮುಖ್ಯಸ್ಥರಾದ ಯೋಗಗುರು ಶ್ರೀ ಪ್ರಕಾಶ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಯೋಗಶಿಬಿರ, ಪ್ರೌಢಶಿಬಿರ, ಧ್ಯಾನಶಿಬಿರಗಳಲ್ಲಿ ಸಕ್ರಿಯವಾಗಿದ್ದಾರೆ ಮತ್ತು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸಂಸ್ಥೆಯಿಂದ ‘ದಿನಕರ ದರ್ಶನ’ ‘ಶ್ರೀ ರಾಜೇಂದ್ರ ನುಡಿ ತೀರ್ಥ’ ಹೊತ್ತಿಗೆಗಳು ಪ್ರಕಟವಾಗಿವೆ.

ಈ ಯೋಗ ಶಿಕ್ಷಣ ಸಮಿತಿಯ ವಿಶೇಷವೆಂದರೆ ಗ್ರಾಮಾಂತರ ಪ್ರದೇಶದ ಮಕ್ಕಳು, ಯುವಜನರಲ್ಲಿ ಯೋಗಾಭ್ಯಾಸದ ಆಸಕ್ತಿ ಬೆಳೆಸಿರುವದು. ಯೋಗಾಭ್ಯಾಸ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡಕ್ಕೂ ಅಗತ್ಯ ಎನ್ನುವುದನ್ನು ಗ್ರಾಮೀಣರಿಗೆ ಮನವರಿಕೆ ಮಾಡಿಕೊಟ್ಟಿರುವುದು.

ಯೋಗದೊಂದಿಗೆ ನಿರಂತರವಾಗಿ ಪಾಲ್ಗೊಳ್ಳುವಂತೆ ಜನಮನವನ್ನು ತೊಡಗಿಸಿಕೊಳ್ಳುವಲ್ಲಿ ಸಕ್ತಿಯವಾಗಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಸ್ಥೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದಿಂದ 2021ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.