ಶ್ರೀ ಶಿವಪ್ಪಾರಾಧ್ಯ ಹಾಗೂ ಶ್ರೀಮತಿ ನಂಜಮ್ಮ ಅವರ ಸಂಜಾತರಾಗಿ ದಿನಾಂಕ: 03.03.1948 ರಲ್ಲಿ ಪೂಜ್ಯ ಶ್ರೀಗಳವರ ಜನನ. ಶ್ರೀ ಬೇಲಿಮಠ ಮಹಾಸಂಸ್ಥಾನವು ದಕ್ಷಿಣ ಭಾರತದ ಒಂದು ಅತ್ಯಂತ ಪುರಾತನ ಮಠವಾಗಿರುತ್ತದೆ.
ಶ್ರೀಮಠವು 12ನೇ ಶತಮಾನದ ಶೂನ್ಯ ಪೀಠಾಧೀಶ್ವರರಾದ ಪೂಜ್ಯ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗಳವರಿಂದ ಸ್ಥಾಪಿಸಲ್ಪಟ್ಟಿದ್ದು 1640ರಿಂದೀಚೆಗೆ ಹೆಚ್ಚು ಜೀರ್ಣೋದ್ಧಾರವಾಗಿರುವುದಕ್ಕೆ ದಾಖಲೆಗಳಿವೆ. ಪ್ರಾರಂಭದಲ್ಲಿ ಶ್ರೀಮಠವು ಬೆಂಗಳೂರು ನಗರದ ಹೊರವಲಯದಲ್ಲಿದ್ದ ಉಲ್ಲೇಖವಿದೆ. ಸದ್ಯ ಬೆಂಗಳೂರು ನಗರದ ಮಧ್ಯ ಭಾಗದಲ್ಲಿ ಸೇರಿರುವುದು ಇಂದಿನ ಬೆಂಗಳೂರು ನಗರ ಬೆಳೆದಿರುವುದಕ್ಕೆ ಸಾಕ್ಷಿ,
ವೀರಶೈವ-ಲಿಂಗಾಯತ ಮಠಗಳಂತೆ ಈ ಮಠವೂ ಸಹ ದಕ್ಷಿಣ ಭಾರತದಲ್ಲಿ ಹಲವಾರು ಶಾಖಾ ಮಠಗಳನ್ನು ಹೊಂದಿರುವುದು ಒಂದು ವಿಶೇಷ. ಬಡ ಹಾಗೂ ದೀನ ದಲಿತ ವಿದ್ಯಾ ವಂಚಿತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ವಸತಿ ನಿಲಯಗಳನ್ನು ಒದಗಿಸುವುದು ಶ್ರೀಮಠದ ಪರಂಪರೆ.
ಪೂಜ್ಯ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿಗಳವರು ಹಿರಿಯ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳವರಿಂದ 1961ರಲ್ಲಿ 13ನೆಯ ವಯಸ್ಸಿಗೆ ದೀಕ್ಷೆಯನ್ನು ಪಡೆದು ಪೀಠಾಧಿಪತಿಗಳಾಗಿ ಅಧಿಕಾರಿ ಸ್ವೀಕರಿಸಿರುತ್ತಾರೆ. ಬಸವಧರ್ಮ ಹಾಗೂ ವಚನ ಸಾಹಿತ್ಯಗಳನ್ನು 50 ವರ್ಷಗಳಿಂದ ಪಸರಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಶ್ರೀ ಬೇಲಿಮಠ ಮಹಾಸಂಸ್ಥಾನದ 13ನೇ ಪೀಠಾಧ್ಯಕ್ಷರಾಗಿರುತ್ತಾರೆ.
ಶ್ರೀಗಳವರು ಕೇರಳ ರಾಜ್ಯದಲ್ಲಿ ಸಾವಿರಾರು ಬಸವ ಅನುಯಾಯಿಗಳಿಗೆ ಬಸವ ದೀಕ್ಷೆ ಕೊಟ್ಟು ಬಸವ ಸಮುದಾಯವನ್ನು ಪುನರಜೀವನಗೊಳಿಸಿರುತ್ತಾರೆ. ಕರ್ನಾಟಕದ ಬಸವ ಸಮಿತಿಯ ಶ್ರೀ ಅರವಿಂದ ಜತ್ತಿ ಅವರ ಜೊತೆ ಶ್ರೀಗಳವರ ಮುಂದಾಳತ್ವದಲ್ಲಿ ಭಾರತದಾದ್ಯಂತ ಬಸವ ತತ್ವ ಪ್ರಚಾರವನ್ನು ಪಸರಿಸುವುದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ ಎಂಬುದಾಗಿ ತಿಳಿಸಲು ಹರ್ಷವಾಗುತ್ತದೆ.
ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳವರಿಗೆ “2022ನೇ ಸಾಲಿನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
1941 ಮಾರ್ಚ 2 ರಂದು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಆಡೂರು ಗ್ರಾಮದಲ್ಲಿ ಜನನ. ತಂದೆ ಶಿರೂರ ವೀರಭದ್ರಪ್ಪನವರು ನ್ಯಾಯನಿಷ್ಠುರಿ, ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಶಾಸಕರು.
1963ರಲ್ಲಿ ಬಿ.ಎ., 1965ರಲ್ಲಿ ಎಂ.ಎ., 1973ರಲ್ಲಿ ಪಿಎಚ್.ಡಿ. ಪದವಿ. 1966 ರಿಂದ 1985ರ ವರೆಗೆ ಶ್ರೀ ಅನ್ನದಾನೀಶ್ವರ ಮಹಾಹಾವಿದ್ಯಾಲಯ ನರೇಗಲ್ಲದಲ್ಲಿ ಅಧ್ಯಾಪಕ, ಪ್ರವಾಚಕ, ಪ್ರಾಚಾರ್ಯ 1985ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯದ ಪ್ರವಾಚಕ, 1994ರಲ್ಲಿ ಪ್ರಾಧ್ಯಾಪಕ. 2001ರಲ್ಲಿ ನಿವೃತ್ತಿ. ಹಳಗನ್ನಡ, ವಚನ ಸಾಹಿತ್ಯ, ಶಾಸನ, ಸಂಸ್ಕೃತಿ, ಇತಿಹಾಸ, ಸಂಶೋಧನೆ, ಗ್ರಂಥ ಸಂಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತಿ, 200 ಸಂಶೋಧನ ಲೇಖನಗಳು ಮತ್ತು 65 ಗ್ರಂಥಗಳ ಪ್ರಕಟಣೆ.
ಶರಣ ಸಾಹಿತ್ಯಕ್ಕೆ ಸಂಬಂಧಿಸಿ: ವಚನ ಸಂಪಾದನೆ – ಪಟಲ ಜ್ಞಾನಸಾರಾಮೃತ ಬೆಡಗಿನ ವಚನದಟೀಕೆ, ಜಕ್ಕಣ್ಣಯ್ಯನ ನಿರಾಳ ಮಂತ್ರಗೋಪ್ಯ, ಉರಿಲಿಂಗಪೆದ್ದಿಯ ನೂರೊಂದು ವಚನಗಳು, ಶರಣ ಮುಖ ಮಂಡನ, ಸರ್ವಾಚಾರ ಸಾರಾಮೃತಸುಧೆ ಪ್ರಕಟ. ವಿವಿಧ ಆಯಾಮಗಳ 18 ಕಾವ್ಯಗಳ ಪ್ರಕಟಣೆ ಹೊಂದಿದ್ದು – ಭಕ್ತಿರಸ ಸೋನೆ ಎಂಬ ಕೃತಿಯು, 2003ರಲ್ಲಿ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಕೃತಿಯಾಗಿರುತ್ತದೆ.
15 ವೈಚಾರಿಕ ಸಂಶೋಧನಾತ್ಮಕ ಗಂಥಗಳು ಪ್ರಕಟವಾಗಿದ್ದು ಡಾ. ಬಿ.ವಿ. ಶಿರೂರ ಅವರ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿವೆ. ಒಟ್ಟು 11ಕ್ಕೂ ಹೆಚ್ಚು ಅಭಿನಂದನ ಗ್ರಂಥಗಳ ಪ್ರಕಟ ಹೊಂದಿರುವ ಹೆಗ್ಗಳಿಕೆ. ಶರಣರನ್ನು, ಲಿಂಗಾಯತ ಧರ್ಮವನ್ನು ಕುರಿತ ಸುಮಾರು 100ಕ್ಕೂ ಹೆಚ್ಚು ಲೇಖನಗಳು ಪ್ರಕಟ. ಇವಲ್ಲದೆ ಜೈನ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿ ಸುಮಾರು 30 ಪುಸ್ತಕಗಳು ಬಂದಿವೆ.
ಗೌರವ ಪ್ರಶಸ್ತಿಗಳು: ಶ್ರವಣಬೆಳಗೊಳ – ಬಾಹುಬಲಿ ಪ್ರತಿಷ್ಠಾನದ ಪ್ರಶಸ್ತಿ, ಮೈಸೂರು ವಿಶ್ವದ್ಯಾಲಯದ ತೀನಂಶ್ರೀ ಪ್ರತಿಷ್ಠಾನ, ಕರ್ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ಹಸ್ತಪ್ರತಿ ವಿಭಾಗದ ದಶಮಾನೋತ್ಸವದ ಅಂಗವಾಗಿ ಸನ್ಮಾನ ಹಾಗು ಪ್ರಭುದೇವರ ಸಂಸ್ಥಾನಮಠ, ಸೊಂಡೂರು ಇವರಿಂದ “ಬಸವಬೆಳಗು’ ಪ್ರಶಸ್ತಿ, 2015ರಲ್ಲಿ ಹಲಸಂಗಿ ಗೆಳೆಯರ ಪ್ರಶಸ್ತಿ, 2018ರಲ್ಲಿ ಮೂಜಗಂ ಪ್ರಶಸ್ತಿ.
2001ರಲ್ಲಿ ವಿದ್ಯಾರ್ಥಿಗಳು, ಅಭಿಮಾನಿಗಳು ಸೇರಿ ಸುಮಾರು 850 ಹುಟದ “ಸಿರಿಸಂಪದ” ಎಂಬ ಅಭಿನಂದನ ಗ್ರಂಥದ ಸಮರ್ಪಣೆ.
ಡಾ. ಬಿ.ವಿ. ಶಿರೂರ ಅವರಿಗೆ “2022ನೇ ಸಾಅನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಸಾರಸ್ವತ ಲೋಕದಲ್ಲಿ ಪ.ಗು. ಸಿದ್ಧಾಪುರ ಎಂದರೆ ತುಂಬಾ ಚಿರಪರಿಚಿತರು. ಇವರ ಪೂರ್ಣ ಹೆಸರು ಪರಗೊಂಡ ಗುರುಪಾದಪ್ಪ ಸಿದ್ಧಾಪುರ ತಂದೆ ಗುರುಪಾದಪ್ಪ ತಾಯಿಯ ಮುನಾಬಾಯಿಯವರ ಮಣ್ಯಗರ್ಭದಲ್ಲಿ 1958 ಜೂನ್ 1 ರಂದು ಬಸವನ ಬಾಗೇವಾಡಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ, ಪ್ರೌಢಶಿಕ್ಷಣವನ್ನು ಬಬಲೇಶ್ವರದ ಶ್ರೀ ಶಾಂತವೀರ ಕಿರಿಯ ಮಹಾವಿದ್ಯಾಲಯದಲ್ಲಿ ಪೂರೈಸಿದರು. ಚಿತ್ರಕಲೆಯಲ್ಲಿ ಪದವಿ ಪಡೆದ ಕೆಲವೇ ತಿಂಗಳುಗಳಲ್ಲಿ ಬಸವನ ಬಾಗೇವಾಡಿಯ ಮುಳವಾಡದ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ 1978 ನವೆಂಬರ್ 20ರಂದು ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದರು.
ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ರೇಖೆಗೆ ಬಣ್ಣ ತುಂಬುವುದರೊಂದಿಗೆ ಇವರು ಶಬ್ದಗಳೊಂದಿಗೆ ಆಟವಾಡುತ್ತ ಒಳ್ಳೆ ಕೃತಿಗಳನ್ನು ವಚನಗಳನ್ನು ಬರೆದು ಓದುಗರ ಮನಸೂರೆಗೊಳಿಸಿದ್ದಾರೆ. ಅನುಭವ ದೀಪ್ತಿ ಭಾಗ 1, 2, ಮಕರಂದ ಭಾಗ 1-2 ಅತ್ಯುತ್ತಮ ವಚನ ಕೃತಿಗಳಾಗಿವೆ. ಆಧುನಿಕ ವಚನದೊಂದಿಗೆ ಮಕ್ಕಳಿಗಾಗಿ ಒಳ್ಳೆ ಕತೆ- ಕವನಗಳನ್ನು ರಚಿಸಿದ್ದಾರೆ. ಇವರ ಹಲವಾರು ಕವಿತೆಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿವೆ. ಇವರು ಸುಮಾರು 32 ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸುವುದರೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇವರು ಕೊಡ ಮಾಡುವ ಪ್ರಶಸ್ತಿ- ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅಲ್ಲದೆ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡು ವೃತ್ತಿ-ಪ್ರವೃತ್ತಿ ಎರಡರಲ್ಲೂ ಜನ ಮೆಚ್ಚುಗೆ ಪಡೆದು ಕೊಂಡಿದ್ದಾರೆ.
ಶ್ರೀ ಪ.ಗು. ಸಿದ್ಧಾಪುರ ಮುಳವಾಡ ಅವರಿಗೆ “2022ನೇ ಸಾಲಿನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಶ್ರೀ ಮೃತ್ಯುಂಜಯ ದೊಡ್ಡವಾಡ, ದಿನಾಂಕ: 24-12-1973 ರಂದು ಶ್ರೀ ಚಂದ್ರಶೇಖರಪ್ಪ ಹಾಗೂ ಶ್ರೀಮತಿ ಸುಶೀಲ ಇವರ ಮಗನಾಗಿ ಧಾರವಾಡ ಜಿಲ್ಲೆ ಕರ್ಲವಾಡ ಗ್ರಾಮದಲ್ಲಿ ಜನನ.
ವೃತ್ತಿ: ಗಾಯಕ, ಸಂಗೀತ ನಿರ್ದೆಶಕ. 1993ರಲ್ಲಿ ಚಲನಚಿತ್ರ ಹಿನ್ನೆಲೆಗಾಯನದಲ್ಲಿ ಪದವಿ. 1994 ಸುಗಮ ಸಂಗೀತ ಅಧ್ಯಯನ, ಸಂಗೀತಾಭ್ಯಾಸ, ಹಿಂದೂಸ್ಥಾನಿ ಗಾಯನ.
1995 ರಿಂದ ಶಾಲೆಗಳಲ್ಲಿ ಸಂಗೀತ ಶಿಕ್ಷಕನಾಗಿ ಸೇವೆ, 2001ರಲ್ಲಿ ಉದಯ ಟಿವಿ ಪ್ರಸ್ತುತಪಡಿಸಿದ ಜನಪ್ರಿಯ “ಕುಹೂ ಕುಹೂ” ಕಾರ್ಯಕ್ರಮದಲ್ಲಿ ಸಹಾಯಕ ಸಂಗೀತ ಸಂಯೋಜಕರಾಗಿ ಹಾಗೂ ಗಾಯಕರಾಗಿ ಕಾರ್ಯನಿರ್ವಹಣೆ. “ಈ” ಟಿವಿಯ ವಿಜಯೋತ್ಸವ, ನೂರೊಂದು ಸವಿ ನೆನಪು ಕಾರ್ಯಕ್ರಮದಲ್ಲಿ ಗಾಯನ. 2003ರಲ್ಲಿ ಸಂಗೀತಧಾಮ ಮ್ಯೂಜಿಕ್ ಅಕಾಡೆಮಿ ಸ್ಥಾಪನೆ. 2004ರಲ್ಲಿ ಪ್ರಥಮ ಧ್ವನಿಸುರಳಿ ‘ದುರ್ಗದ ಸೊಬಗು’ ಬಿಡುಗಡೆ. 2005ರಿಂದ ನಾಡಿನ ಖ್ಯಾತ ಕವಿಗಳ ಭಾವಗೀತೆಗಳಿಗೆ ನಿರಂತರ ಸ್ವರ ಸಂಯೋಜನೆ.
ಮೈಸೂರು ದಸರಾ, ಹಂಪಿ, ಚಾಲುಕ್ಯ, ಕೆಳದಿ, ಕಿತ್ತೂರು, ರನ್ನ ಉತ್ಸವಗಳಲ್ಲಿ ಭಾಗಿ, ದೇಶದ ಪ್ರಮುಖ ನಗರಗಳಲ್ಲಿ ಹಾಗೂ ದೇಶದ ಉದ್ದಗಲಕ್ಕೂ ಕನ್ನಡದ ಕಂಪು ಹರಿಸಿದ ಹಿರಿಮೆ, 2009ರ ಹಾಗೂ 2014ರ ಹಂಪಿ ಉತ್ಸವದಲ್ಲಿ ಕವಿ-ಕಾವ್ಯ ಗಾಯನ, ಸಂಗೀತ ನಿರ್ದೇಶನ. 2011-12ರ ಸಾಲಿನ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ
2012ರ ಅಟ್ಲಾಂಟದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ ಹೆಮ್ಮೆ. ಸ್ವರಸುರಭಿ ಟ್ರಸ್ಟ್ ಹಾಗೂ ಡಾ|| ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಸಹಯೋಗದೊಂದಿಗೆ ನಾಡಿನಾದ್ಯಾಂತ ಸುಗಮಸಂಗೀತ ಕಾರ್ಯಗಾರಗಳನ್ನು ನಡೆಸಿ ಗ್ರಾಮೀಣ ಪ್ರತಿಭೆಗಳಿಗೆ ಕಾವ್ಯ ಗಾಯನ ತರಬೇತಿ.
2007ರಿಂದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸದಸ್ಯತ್ವದಿಂದ – ಪ್ರಧಾನ ಸಂಚಾಲಕರಾಗಿ ಸಮ್ಮೇಳನಗಳಲ್ಲಿ ಅಪ್ರತಿಮ ಸೇವೆ. ಅಮೇರಿಕಾದ ಹಲವಾರು ಕಡೆಗಳಲ್ಲಿ ಸುಗಮ ಸಂಗೀತದ ರಸಧಾರೆ. ಝೀ ಕನ್ನಡದ ಸರಿಗಮಪದಲ್ಲಿ ಜೂರಿಯಾಗಿ ಸೇವೆ.
ಕರುಡನಾಡ ಸಿರಿ, ಕರ್ನಾಟಕ ವಿಕಾಸ ರತ್ನ, ಗಾನಕುಶಲ, ಬೆಂಗಳೂರು ರತ್ನ, ಸಂಭ್ರಮ ಪುರಸ್ಕಾರ. 2015ರ ಕನ್ನಡ ಇಂಟರ್ನ್ಯಾಷನಲ್ ಮ್ಯೂಸಿಕ್ (KIMA Award) ಪ್ರಶಸ್ತಿ, ಡಾ|| ಸಾ.ಶಿ.ಮರುಳಯ್ಯ ವಿರಚಿತ ‘ಭಾವಗೀತೆಯಾಗುವ ಹಾಡಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ. 2015ರ ಡಾ|| ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಪ್ರಶಸ್ತಿ. ಅತ್ಯುತ್ತಮ ಸ್ವರಸಂಯೋಜಕ ಪ್ರಶಸ್ತಿ. 2017ರಲ್ಲಿ ಇಂಚರ ಸುಗಮ ಸಂಗೀತ ವಾರ್ಷಿಕ ಪ್ರಶಸ್ತಿ. ಹುಟ್ಟೂರಿನ ತಾಲ್ಲೂಕು ನವಲಗುಂದದ ಯುಗಾದಿ ಉತ್ಸವ ಸಮಿತಿಯಿಂದ ಯುಗಾದಿ ಪುರಸ್ಕಾರ. 2018ರಲ್ಲಿ ಗಾನ ಗಂಗ ಪ್ರಶಸ್ತಿ – ರಂಗ ಮಂಡಲ ಸಾಂಸ್ಕೃತಿಕ ಸಂಘದಿಂದ 2019ರಲ್ಲಿ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನದಿಂದ “ಕುವೆಂಪು ಪುರಸ್ಕಾರ”, “2020ರಲ್ಲಿ ಭಾವನಾಂತರಂಗ ಟ್ರಸ್ಟ್ ವತಿಯಿಂದ ಡಾ. ಸಿ. ಅಶ್ವಥ್ ಪ್ರಶಸ್ತಿ”.
ಶ್ರೀ ಮೃತ್ಯುಂಜಯ ದೊಡ್ಡವಾಡ ಅವರಿಗೆ “2022ನೇ ಸಾಲನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲ, ಹುನಗುಂದ ತಾಲ್ಲೂಕು, ಬಾಗಲಕೋಟ ಜಿಲ್ಲೆಯಲ್ಲಿದೆ. ‘ಜೋಳಿಗೆ’ ಎಂದು ಖ್ಯಾತಿ ಪಡೆದ ಮಠವು 33 ವರ್ಷಗಳಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 3500ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ನೆರೆಯ ರಾಜ್ಯಗಳಲ್ಲದೆ ವಿದೇಶಗಳಲ್ಲಿಯೂ ಮಹಾಂತ ಜೋಳಿಗೆ ಸಂಚರಿಸಿದೆ. ಲಕ್ಷಾಂತರ ಕುಟುಂಬಗಳನ್ನು ಆರ್ಥಿಕ ಸಂಕಷ್ಟದಿಂದ ಹಾಗೂ ಮಾನಸಿಕ ಹಿಂಸೆಯಿಂದ ಮುಕ್ತಗೊಳಿಸಿದೆ. ದೇವದಾಸಿ ವಿಮೋಚನೆಗಾಗಿ ಹೋರಾಟವು ಮಹಾಂತ ಜೋಳಿಗೆಯ ಭಾಗವಾಗಿ ನಡೆಯಿತು. ವೇಶ್ಯಾವೃತ್ತಿ ಮಾಡುವ ಅನೇಕ ಮಹಿಳೆಯರು ಆ ವೃತ್ತಿ ಬಿಟ್ಟು ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕಲು ದಾರಿದೀಪವಾಯಿತು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕತೆ, ಕರ್ತವ್ಯ ಪ್ರಜ್ಞೆ ಆರೋಗ್ಯಪ್ರಜ್ಞೆ ನೂರಾರು ಶಿಬಿರಗಳನ್ನು ಆಯೋಜಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಇಲಕಲ್ಲ ಹುನಗುಂದ, ಸೂಳಿಬಾವಿ ಹಾಗೂ ಸವದಿಯಲ್ಲಿ ಬರಗಾಲ ಇದ್ದಾಗ, ಶ್ರೀಮಠದಿಂದ ನೂರಾರು ಚೀಲ ಧಾನ್ಯ ಪೂರೈಸಿ ತಿಂಗಳುಗಟ್ಟಲೆ ಗಂಜಿ ಕೇಂದ್ರ ನಡೆಸಲಾಗಿತ್ತು.
ಇಳಕಲ್ಲ ಸುತ್ತ-ಮುತ್ತ ಪ್ರದೇಶಗಳಲ್ಲಿ ನೆರೆಹಾವಳಿ ಬಂದಾಗ ಅಲ್ಲಿನ ಗ್ರಾಮಸ್ಥರಿಗೆ ಅನ್ನದಾಸೋಹಕ್ಕೆ ಸಹಾಯ ಹಸ್ತ ನೀಡಲಾಗಿದ್ದು, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಭೀಮಾ ನದಿ ದಂಡೆಗಿರುವ ಗ್ರಾಮಗಳಾದ ಹಿಂಗಣಿ, ಧೂಳಕೇಡ, ಉಮ್ರಾಣಿ ಮತ್ತು ಸಂಕ ಗ್ರಾಮಗಳು 1993ರಲ್ಲಿ ಭೂಕಂಪ ಪೀಡಿತವಾದಾಗ ಆ ಗ್ರಾಮಗಳ ಸಂತ್ರಸ್ತರಿಗೆ ಶ್ರೀಮಠದಿಂದ 3,50,000 ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗಿದೆ. ಶ್ರೀ ಮಠ 60 ವರ್ಷದಿಂದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ಮತ್ತು ವಸತಿ ಕಲ್ಪಿಸಿದೆ. ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಹಾಗೂ ವರದಕ್ಷಿಣೆ ಪದ್ಧತಿ ವಿರುದ್ಧ ಕಳೆದ 35 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವುದು ಒಂದು ಉತ್ತಮ ಸೇವೆಯಾಗಿ ಪರಿಗಣಿಸಲ್ಪಟ್ಟಿದೆ.
ಭಾರತೀಯ ಸಮಾಜಕ್ಕೆ ಜಾತಿಪದ್ಧತಿ ಒಂದು ಶಾಪವೆಂದು ಭಾವಿಸಿ, ಎಲ್ಲಾ ಕೆಳವರ್ಗದವರಿಗೆ ಮಠದಲ್ಲಿ ಮುಕ್ತ ಪ್ರವೇಶ ನೀಡಿದ್ದು, ಲಂಬಾಣಿ, ಮಾದಿಗ ಮತ್ತು ಭೋವಿ ಸಮಾಜದ ವಟುಗಳನ್ನು ಶಾಖಾಮಠಗಳಿಗೆ ದೀಕ್ಷೆ ನೀಡಿ ಪೀಠಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶ್ರೀಮಠದ ಶಾಖಾ ಮಠಗಳಲ್ಲಿ ತಿಂಗಳಿಗೊಮ್ಮೆ ಶಿವಾನುಭವ, ವಾರಕ್ಕೊಮ್ಮೆ ಭಕ್ತರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಏರ್ಪಡಿಸಿ ಆಧ್ಯಾತ್ಮಿಕ ಮತ್ತು ನೈತಿಕ ಪ್ರಜ್ಞೆ ಮೂಡಿಸಿ ಸಾತ್ವಿಕ ಸಮಾಜ ನಿರ್ಮಾಣಕ್ಕೆ ನಾಂದಿಹಾಡಲಾಗಿದೆ. 25 ವರ್ಷಗಳಿಂದ ಉದಯೋನ್ಮುಖ ಬರಹಗಾರರ ಪ್ರೋತ್ಸಾಹಕ್ಕಾಗಿ ಹಾಗೂ ಶರಣ ಸಂಸ್ಕೃತಿ ಪ್ರಚಾರಕ್ಕಾಗಿ ಬಸವ ಬೆಳಗು ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ.
ಶ್ರೀಮಠವು ಹಲವು ವಿದ್ಯಾಸಂಸ್ಥೆಗಳನ್ನು ಹೊಂದಿದ್ದು, 113 ಶಾಲಾ-ಕಾಲೇಜುಗಳು, 16 ಹಾಸ್ಟೆಲ್ಗಳಿವೆ. ಶ್ರೀಮಠದ ಪೂಜ್ಯರಿಗೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ಸರ್ಕಾರದ ಮದ್ಯಪಾನ ಸಂಯಮ ಮಂಡಳಿಯಿಂದ ಮಧ್ಯಪಾನ ವಿರೋಧಿ ಹೋರಾಟ ಮಾಡಿದವರಿಗೆ ಕೊಡಮಾಡುವ “ಸಂಯಮ ಪ್ರಶಸ್ತಿಯೂ ಕೂಡ ಶ್ರೀಮಠಕ್ಕೆ ಸಂದಿದ್ದು ತುಂಬಾ ಹೆಮ್ಮೆಯ ವಿಷಯ.
ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಕ್ಕೆ “2022ನೇ ರಮಣ ಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.
ಬೆಳಗಾವಿ ಕಾರಂಜಿಮಠದ ನೂತನ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಶಿವಯೋಗಿ ದೇವರು ನಮ್ಮ ನಾಡಿನ ಭರವಸೆಯ ಯುವಯತಿಗಳಾಗಿದ್ದಾರೆ. ಗಡಿಭಾಗದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಗಳ ಪುನರುತ್ಥಾನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೂಜ್ಯರು ಅಪ್ರತಿಮ ವಾಗಳೂ ಚಿಂತಕರೂ ಆಗಿದ್ದಾರೆ.
ಪೂಜ್ಯ ಶ್ರೀ ಶಿವಯೋಗಿ ದೇವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಶ್ರೀ ಗುರುಸಿದ್ಧಯ್ಯ ಮತ್ತು ನಾಗರತ್ನಮ್ಮ ಶರಣ ದಂಪತಿಗಳ ಪುಣ್ಯ ಉದರದಲ್ಲಿ (5.71989) ಜನಿಸಿದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳ ಆಶ್ರಯದಲ್ಲಿ ಪ್ರಾಥಮಿಕ ಶಿಕ್ಷಣ, ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಸಂಸ್ಥಾಪಿಸಿದ ಶಿವಯೋಗಮಂದಿರದಲ್ಲಿ ಅಧ್ಯಾತ್ಮ ಶಿಕ್ಷಣ ಪಡೆದರು. ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದಲ್ಲಿದ್ದು ಕೊಂಡು ಪ್ರತಿಷ್ಠಿತ ಲಿಂಗರಾಜ
ಕಾಲೇಜಿನಿಂದ ಬಿ.ಎ. ಪದವಿ ಅಧ್ಯಯನ ಮಾಡಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿ ಕನ್ನಡ (2013) ಮತ್ತು ತತ್ವಶಾಸ್ತ್ರ(2015) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಶಿವಯೋಗಿ ದೇವರು ಸಾಮಾಜಿಕ-ಧಾರ್ಮಿಕ ರಂಗದಲ್ಲಿ ಸೇವೆಯ ಹಂಬಲವುಳ್ಳವರಾಗಿದ್ದಾರೆ.
ಹಿತ-ಮಿತ ಭಾಷೆ, ಲಿಂಗಪೂಜಾನಿಷ್ಠೆ, ನಿರ್ಮಲ ಚಾರಿತ್ರ್ಯ, ಸೃಜನಶೀಲ ಮನಸ್ಸು, ಕಾಯಕದ ಹುಮ್ಮಸ್ಸು ಮುಂತಾದ ಗುಣಗಳ ಸಾಕಾರ ರೂಪವಾಗಿದ್ದಾರೆ. ವಿದ್ಯಾವಿನಯ ಸಂಪನ್ನರಾಗಿರುವ ಶಿವಯೋಗಿ ದೇವರು ಗದಗ ತೋಂಟದಾರ್ಯಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ‘ಅಲ್ಲಮನ ಅನುಭಾವ ಮತ್ತು ಶೂನ್ಯತತ್ವ’ ಎಂಬ ವಿಷಯ ಕುರಿತು ಮಹಾಪ್ರಬಂಧ ರಚಿಸಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಸಂಪಾದಿಸಿದ್ದಾರೆ. ಬಸವ ಬೆಳಗು (2014), ನೆಲದ ನಿಧಾನ (2019), ಯುಗಾವತಾರಿ(2022) ಮೊದಲಾದ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ. ನಾಡಿನ ಪ್ರತಿಷ್ಠಿತ ‘ಮಹಾಮನೆ’, ‘ಲಿಂಗಾಯತ ದರ್ಶನ’, ‘ಬಸವ ಪಥ’, ‘ಶರಣ ಕಿರಣ’ ಮೊದಲಾದ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನ ಕವನ-ಆಧುನಿಕ ವಚನಗಳನ್ನು ಬರೆದು ಪ್ರಕಟಿಸಿದ್ದಾರೆ. ಆಶುಕವಿಗಳಾಗಿರುವ ಶ್ರೀಗಳು ಉದಯೋನ್ಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆ.
ಸಮಾಜ ಸೇವೆಯ ಹಂಬಲವುಳ್ಳ ಶ್ರೀಗಳು ಇತ್ತೀಚೆಗೆ ಚಿಕ್ಕೋಡಿ ಪಟ್ಟಣದಲ್ಲಿ ಜರುಗಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ 155ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ. ಚಿಕ್ಕೋಡಿ ತಾಲೂಕಿನ 23 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಲಿಂಗದೀಕ್ಷೆ-ರುದ್ರಾಕ್ಷಿಧಾರಣೆ-ವಚನ ಕೃತಿಗಳ ನೀಡುವ ಮೂಲಕ ಧರ್ಮಜಾಗೃತಿ ಸಮಾಜ ಸಂಘಟನೆ ಮಾಡಿದ್ದಾರೆ. ನಾಡಿನ ಅನೇಕ ನಗರ-ಪಟ್ಟಣಗಳಲ್ಲಿ ತಮ್ಮ ಪ್ರವಚನಗಳ ಮೂಲಕ ವಚನ ಸಾಹಿತ್ಯವನ್ನು ಜನಸಮುದಾಯಕ್ಕೆ ಮುಟ್ಟಿಸುವ ಮಹಾಮಣಿಹವನ್ನು ಪೂರೈಸಿದ್ದಾರೆ. ಖ್ಯಾತ ಪ್ರವಚನ ಪಟುಗಳೂ ಅಪರೂಪದ ವಾಗ್ನಿಗಳೂ ಆಗಿರುವ ಶ್ರೀಗಳು ಸಾಹಿತ್ಯ ಸಂಸ್ಕೃತಿಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿರುವ ಒಬ್ಬ ಪ್ರಜ್ಞಾವಂತ ಸ್ವಾಮೀಜಿ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ.
ಪೂಜ್ಯ ಡಾ. ಶ್ರೀ ಶಿವಯೋಗಿ ದೇವರು ಅವರಿಗೆ “2022ನೇ ರಮಣ ಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ಶ್ರೀಮತಿ ದಾಕ್ಷಾಯಿಣಿ ಜಯದೇವಪ್ಪ ಅವರು ಶ್ರೀ ಎಂ.ವಿ. ಚನ್ನಪ್ಪ ಶೆಟ್ಟಿ ಹಾಗೂ ಶ್ರೀಮತಿ ಶಿವಮ್ಮ ಇವರ ಸುಪುತ್ರಿಯಾಗಿ ದಿನಾಂಕ: 29ನೇ ಅಕ್ಟೋಬರ್ 1952ರಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ ಎಂಬ ಮಲೆನಾಡಿನ ಗ್ರಾಮದಲ್ಲಿ ಜನ್ಮವೆತ್ತು ಬೆಳೆದ ಸಂಜಾತೆ.
ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಮೂಗ್ತಿಹಳ್ಳಿಯಲ್ಲೂ ಹಾಗೂ ಪ್ರೌಢ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲೂ ಪೂರೈಸಿರುತ್ತಾರೆ. ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸದ ನಂತರ ತರೀಕೆರೆ ತಾಲ್ಲೂಕಿನ ಮಾಜಿ ಶಾಸಕರಾದ ಶ್ರೀ ಮಲ್ಲಿಕಾರ್ಜುನಪ್ಪ ಅವರ ಸುಪುತ್ರರಾದ ಶ್ರೀ ಹೆಚ್.ಎಂ. ಜಯದೇವಪ್ಪ ಅವರ ಜೊತೆ ವಿವಾಹವಾಗಿ ತದ ನಂತರ ಶಿವಮೊಗ್ಗ ನಗರದಲ್ಲಿ ತಮ್ಮ ತುಂಬು ಜೀವನವನ್ನು ಸವೆಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.
ಶ್ರೀಮತಿ ದಾಕ್ಷಾಯಿಣಿ ಜಯದೇವಪ್ಪ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಆಧ್ಯಾತ್ಮಿಕ ಚಿಂತನೆಗಳೆಡೆಗೆ ಒಲವು ಇದ್ದುದರಿಂದ ಹೆಚ್ಚು ಹೆಚ್ಚು ಬಸವ ತತ್ವಗಳೆಡೆಗೆ ಆಕರ್ಷಿತರಾಗಿ ಆಧ್ಯಾತ್ಮಿಕ ಕೃತಿಗಳ ಸಂಗ್ರಹಗಳನ್ನು ಮಾಡುವುದಲ್ಲದೆ ಅವುಗಳ ಅಧ್ಯಯನ ಮಾಡಲು ಪ್ರೇರೆಪಣೆಗೊಂಡು, ಹೆಚ್ಚು ಹೆಚ್ಚು ವಚನಗಳ ಅಧ್ಯಯನಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು, ಆಧ್ಯಾತ್ಮಿಕ ಕೃತಿಗಳ ಸಂಗ್ರಹಕ್ಕೆ ಇದ್ದ ಒಲವು “ಒಟ್ಟು ಮೂರು ವಚನಗಳ ಅಧ್ಯಯನ* ಕೃತಿಗಳನ್ನು ಪ್ರಕಟಿಸಲು ದಾರಿದೀಪವಾಗುತ್ತದೆ ಎಂಬುದು ಗಮನಾರ್ಹ. ಇದುವರೆವಿಗೂ ಅವರ ಒಟ್ಟು 720 ವಚನಗಳು ಪ್ರಕಟಿತಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಶ್ರೀಮತಿ ದಾಕ್ಷಾಯಿಣಿ ಜಯದೇವಪ್ಪ ಅವರು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲು ತುಂಬಾ ಹರ್ಷವೆನಿಸುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸಾಣೆಹಳ್ಳಿ ಶ್ರೀಮಠದಿಂದ ಹಾಗೂ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂಬುದನ್ನು ತಿಳಿಸಬಹುದಾಗಿದೆ.
ಶ್ರೀಮತಿ ದಾಕ್ಷಾಯಿಣಿ ಜಯದೇವಪ್ಪ ಅವರಿಗೆ “2022ನೇ ರಮಣ ಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು, ಮಡಿಕೇಶ್ವರ ಗ್ರಾಮದ ಸುರೇಶ ಕೇಸಾಪುರ ಮತ್ತು ಶಾರದಾ ದಂಪತಿಗಳ ಮಗನಾಗಿ 17-08-1982 ರಲ್ಲಿ ಹುಟ್ಟಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢಶಾಲಾ ವ್ಯಾಸಂಗವನ್ನು ಮೈಸೂರಿನ ಜೆ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ. ಚಿಕ್ಕಂದಿನಲ್ಲೇ ಸಂಗೀತದ ಆಸಕ್ತಿಯನ್ನು ಬೆಳೆಸಿಕೊಂಡ ಇವರ ಮೊದಲ ಗುರು ರಂಗಭೂಮಿ ಮತ್ತು ಗಾಯಕರಾಗಿ ಹೆಸರಾಗಿದ್ದ ತಂದೆ ಸುರೇಶ್ ರವರು.
ತಮ್ಮ ಮೂರನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ತಮ್ಮ ಕಾಲುಗಳಿಗೆ ತೊಂದರೆಯಾದರೂ, ಸಂಗೀತದ ಸಾಧನೆಗೆ ಇದೊಂದು ಅಡ್ಡಿ ಎಂಬುದನ್ನು ಎಂದು ಭಾವಿಸದೆ ನಿರಂತರ ಪರಿಶ್ರಮಕ್ಕೆ ಮುಂದಾದ ಸಿದ್ದರಾಮ ಕೇಸಾಪುರ ಅವರು ಕಡಿಮೆ ಅವಧಿಯಲ್ಲಿಯೇ ನಾಡಿನ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿರುವುದು ಅಂತಿಂಥ ಸಾಧನೆಯಲ್ಲ. ಐದನೇ ವಯಸ್ಸಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡಲು ಶುರು ಮಾಡಿದ ಇವರಿಗೆ ನಾಡಿನ ಪ್ರತಿಷ್ಠಿತ ಶ್ರೀಮಠಗಳು ಅವಕಾಶವಿತ್ತು ಹರಸಿ ಪ್ರೋತ್ಸಾಹಿಸಿದೆ. ಅನೇಕ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ ಇವರು ಸುಮಾರು 150 ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಅವುಗಳಲ್ಲಿ ಸೋರುತಿಹುದು ಮನೆಯ ಮಾಳಿಗೆ, ಆಮ್ರಪಾಲಿ, ಕಳವು, ಮುಂತಾದವುಗಳು.
ರಾಜ್ಯದ ಪ್ರಸಿದ್ಧ ಉತ್ಸವಗಳಾದ ರನ್ನ, ಚಾಲುಕ್ಯ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಗಾಯಕರಾಗಿ ಭಾವಗೀತೆ, ದಾಸ ಸಾಹಿತ್ಯ, ವಚನ ಸಾಹಿತ್ಯ, ರಂಗಗೀತೆ, ತತ್ವಪದ ಮತ್ತು ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಜನಮನ ಸೂರೆಗೊಂಡಿರುವುದು ಒಂದು ದಾಖಲೆಯೇ ಸರಿ. ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿರುವ ಸಾಮಾಜಿಕ ಅರಿವು, ಮತ್ತು ಪರಿಸರ ಜಾಗೃತಿ ಗೀತೆಗಳನ್ನು ಕೇಳುಗರ ಮನಮುಟ್ಟುವಂತೆ ಹಾಡಿದ್ದಾರೆ. ಭೂಮಾಯಿ ಬಳಗ ತಂಡದ ಮುಖಾಂತರ ನಾಡಿನಾದ್ಯಂತ ನೆಲ, ಜಲ, ಜನಗೀತೆಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಸಿದ್ದರಾಮ ಕೇಸಾಪುರ ಅವರ ಎರಡು ದಶಕಗಳ ಸಂಗೀತ ನಾಟಕ ಕ್ಷೇತ್ರದ ವಿಶಿಷ್ಟ ಸಾಧನೆಗೆ ಸತ್ಯಪ್ಪ ಶರಣ ಪ್ರಶಸ್ತಿ, ಗಾನ ಕಲಾ ಕುಸುಮ, ಗಾನಕೋಗಿಲೆ, ಗಾನ ಗಾರುಡಿಗ, ಮೊದಲಾದ ಬಿರುದುಗಳು ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಸಿದ್ದರಾಮ ಕೇಸಾಪುರರವರಿಗೆ “2022ನೇ ಸಾಅನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನಪಡುತ್ತವೆ.
ಬಸವಾದಿ ಶರಣರ ತತ್ವಗಳನ್ನು ಪಾಲಿಸುತ್ತಿರುವ ಅಪರೂಪದ ಸಂಘಟನೆ ವಿಶ್ವ ಬಸವ ಸೇನೆ. ಭಕ್ತಿ ಸುಭಾಷೆಯ ನುಡಿಯುವೆ, ನಡೆಯೊಳಗೆ ನುಡಿಯ ಪೂರೈಸುವೆ, ಎನ್ನುವ ಬಸವಣ್ಣನವರ ವಾಣಿಯಂತೆ ಕೇವಲ ಉಪದೇಶಗಳಿಗೆ ಸೀಮಿತವಾಗದೆ ಬದುಕಿನಲ್ಲಿಯೂ ವಚನ ಧರ್ಮವನ್ನು ಅನುಸರಿಸುತ್ತಿರುವುದು ವಿಶ್ವ ಬಸವ ಸೇನೆ ವೈಶಿಷ್ಟ್ಯ
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಎಲ್ಲಾ ತಾಲೂಕುಗಳ ಸರಿಸುಮಾರು 300ಕ್ಕೂ ಹೆಚ್ಚು ಯುವಕರು ಮದ್ಯ, ಮಾಂಸ, ಧೂಮಪಾನಗಳಂತಹ ಅನಿಷ್ಟಗಳನ್ನು ಅಂಟಿಸಿಕೊಳ್ಳದೆ ಸತ್ಯ ಶುದ್ಧ ಕಾಯಕಶೀಲರಾಗಿ ಬದುಕು ಕಟ್ಟಿಕೊಳ್ಳುತ್ತಾ ಸಮಾಜಮುಖಿಗಳಾಗಿ ದಾಸೋಹ ಭಾವವನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವುದು ಬಸವ ಸೇನೆಯ ವಿಶೇಷ.
ಬಸವಾದಿ ಪ್ರಮಥರ ತತ್ವಾನುಸಾರವಾಗಿ ಗುರು ಪ್ರವೇಶ, ವಚನ ಕಲ್ಯಾಣ ಮಹೋತ್ಸವಗಳನ್ನು ನಡೆಸುವ ವಿಶ್ವ ಬಸವ ಸೇನೆಯ ಸದಸ್ಯರುಗಳು ಹೆಚ್ಚು ಓದಿಲ್ಲವಾದರೂ ಥಟ್ ಎಂದು ಕನಿಷ್ಠ ನೂರು ವಚನಗಳನ್ನು ವಾಚನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಶ್ರೀ ಬಸವಯೋಗೇಶ್ ಬಸವಸೇನೆಯ ಕ್ರಿಯಾಶೀಲ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಶ್ರೀ ಎ.ಎಂ. ಬಸವಣ್ಣ ಮತ್ತು ಬಸಮ್ಮಣ್ಣಿಯವರ ಪುತ್ರನಾಗಿ 19-08-1991ರಂದು ನಂಜನಗೂಡಿನಲ್ಲಿ ಜನಿಸಿದರು. ಬಸವ ಯೋಗೇಶ್ ಓದಿರುವುದು ಮೆಕ್ಯಾನಿಕಲ್ ಡಿಪ್ಲೋಮಾ, ಬಸವಾದಿ ಪ್ರಮಥರ ವಿಚಾರಗಳಿಂದ ಪ್ರಭಾವಿತರಾದ ಇವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಳ್ಳಿ ಹಳ್ಳಿಗಳನ್ನು ವರ್ಷಾನುಗಟ್ಟಲೆ ಸುತ್ತಿದ್ದಾರೆ, ಯುವಕರನ್ನು ಸಂಘಟಿಸಿದ್ದಾರೆ. ನೂರಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಮಾನವ ಸಂಪನ್ಮೂಲ ಪೂರೈಕೆಯ ಕಾಯಕವನ್ನು ನಡೆಸುತ್ತಿರುವ ಇವರು ಸದಾ ಹಸನ್ಮುಖರು. ಎಲ್ಲರನ್ನೂ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡಿಸಿ, ಆತ್ಮವಿಶ್ವಾಸ ಮೂಡಿಸಿ ತಮ್ಮ ಜೊತೆಗೆ ಕರೆದೊಯ್ಯುತ್ತಾರೆ.
ನಂಜನಗೂಡು ಪಟ್ಟಣದ ಹಲವಾರು ವೃತ್ತಗಳು ಮತ್ತು ಉದ್ಯಾನವನಗಳಿಗೆ ಶರಣರ ಹೆಸರುಗಳನ್ನು ನಾಮಕರಣ ಮಾಡಿಸಿದ್ದಾರೆ. ತಾಲೂಕಿನ ಹತ್ತಾರು ಕಡೆ ಬಸವ ಮತ್ಥಳಿಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಯುವೋತ್ಸಾಹಿ, ಕಾಯಕಶೀಲ ದಾಸೋಹ ಪ್ರೇಮಿ ಹಾಗೂ ತಮ್ಮ ಬದುಕನ್ನೇ ಬಸವ ತತ್ವ ಪ್ರಚಾರ ಮತ್ತು ಅನುಷ್ಠಾನಕ್ಕೆ ಮುಡುಪಿಟ್ಟಿರುವ ಶ್ರೀ ವಿಶ್ವ ಬಸವ ಸೇನೆಗೆ “2022ನೇ ಸಾಱನ ರಮಣಶ್ರೀ ಶರಣ ಪ್ರಶಸ್ತಿ” ನೀಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನಗಳು ಅಭಿಮಾನ ಪಡುತ್ತವೆ.
Copyright © 2024 Ramanashree Awards . All Rights Reserved. Crafted by Pixelsbrew