ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
ಜನ ಸಮುದಾಯದಲ್ಲಿ ಜೀವನದ ಮೌಲ್ಯಗಳನ್ನು ಜಾಗೃತಗೊಳಿಸಿ ದೈವಶ್ರದ್ದೆ ಮತ್ತು ಕಾರ್ಯನಿಷ್ಠೆಯನ್ನು ಬೆಳೆಸಿದ ಒಂದು ಸಮಾಜೋ-ಧಾರ್ಮಿಕ ಕ್ರಾಂತಿ ಹನ್ನೆರಡನೆಯ ಶತಮಾನದ ಶರಣರಿಂದ ನಡೆಯಿತು. ಅಂತಹ ಶರಣರ ಸಾಹಿತ್ಯದ ಆಳವಾದ ಅಧ್ಯಯನ, ಸಂಶೋಧನೆ, ಚಿಂತನೆ ಮತ್ತು ಬೋಧನೆಗಳಿಂದ ಸಾರಸ್ವತ ಲೋಕದಲ್ಲಿ ಪ್ರಸಿದ್ಧರಾಗಿರುವವರು ಡಾ. ಎಸ್. ವಿದ್ಯಾಶಂಕರ್ ಅವರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿಯಲ್ಲಿ ಶಿವಶಂಕರಪ್ಪ – ವಿಶಾಲಾಕ್ಷಮ್ಮ ದಂಪತಿಗಳ ಪುತ್ರರಾಗಿ ೧೮-೧೧-೧೯೪೨ರಲ್ಲಿ ಜನನ. ತಂದೆ ಕನ್ನಡ ಪಂಡಿತರು. ವಿದ್ಯಾಶಂಕರ್ ಅವರು ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಅನುಕ್ರಮವಾಗಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ‘ವೀರಶೈವ ಪುರಾಣಗಳು – ಒಂದು ಅಧ್ಯಯನ’ ಎಂಬ ಸಂಪ್ರಬಂಧಕ್ಕೆ ಪಿ.ಹೆಚ್ಡಿ. ಪದವಿ ಪಡೆದ ವಿದ್ಯಾಶಂಕರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕ, ಪ್ರಾಧ್ಯಾಪಕ ಹಾಗೂ ನಿರ್ದೆಶಕ ಹೀಗೆ ವಿವಿಧ ಹುದ್ದೆಗಳಲ್ಲಿ ೩೬ ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ; ಅಪಾರವಾದ ಶಿಷ್ಯವೃಂದಕ್ಕೆ ತಮ್ಮ ಜ್ಞಾನ ಭಂಡಾರವನ್ನು ಧಾರೆ ಎರೆದು ಗೌರವಾನ್ವಿತ ಗುರುಗಳೆನಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಸಮಗ್ರ ವಚನ ಸಾಹಿತ್ಯ ಪ್ರಕಟನಾ ಯೋಜನೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಚೀನ ಗ್ರಂಥಗಳ ಪ್ರಕಟಣೆಯ ಆಯ್ಕೆ ಸಮಿತಿ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಶ್ರೀಯುತರ ಕಾರ್ಯವ್ಯಾಪ್ತಿ ವಿಶಾಲವಾದುದು.
ಶಿಕ್ಷಣ ಕ್ಷೇತ್ರದಲ್ಲಿನ ದೀರ್ಘಕಾಲದ ಅನುಭವ ವಿದ್ಯಾಶಂಕರ್ ಅವರನ್ನು ಶ್ರೇಷ್ಠ ಸಾಹಿತಿಗಳನ್ನಾಗಿ, ಸಂಶೋಧಕರನ್ನಾಗಿ ಗುರುತಿಸಲು ಅನುವುಮಾಡಿದೆ. ಬೋಧನೆಯೊಂದಿಗೆ ಬರವಣಿಗೆಯೂ ನಿರಂತರವಾಗಿ ಸಾಗಿದೆ. ವಚನ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಪೂರ್ವವಾದದ್ದು. ವಚನಾನುಶೀಲನ, ನೆಲದ ಮರೆಯ ನಿಧಾನ, ಶಿವಶರಣರು ಹಾಗೂ ವೈಚಾರಿಕತೆ, ಸಮಾಹಿತ, ಶಬ್ದದೊಳಗಣ ನಿಶ್ಯಬ್ದ ಮೊದಲಾದ ಸಂಶೋಧನಾ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಹಲಗೆಯ ದೇವರ ಶೂನ್ಯ ಸಂಪಾದನೆ, ಪ್ರಭುಲಿಂಗಲೀಲೆ, ರಾಘವಾಂಕನ ಸಮಗ್ರ ಕೃತಿಗಳು, ಮೊದಲಾದ ಮಹತ್ವದ ಕೃತಿಗಳ ಸಂಪಾದನೆ ಮಾಡಿದ್ದಾರೆ. ನಂಬಿಯಣ್ಣ – ಒಂದು ಅಧ್ಯಯನ, ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಮದರ್ ತೆರೆಸಾ, ಹೀಗೊಬ್ಬ ಸರ್ವಜ್ಞ, ಅನಕೃ – ಬದುಕು ಬರಹ – ಇವು ಅವರ ಇತರ ಮಹತ್ವದ ಕೃತಿಗಳು.
ಡಾ. ಎಸ್. ವಿದ್ಯಾಶಂಕರ್ ಅವರ ಪ್ರತಿಭೆ, ಪಾಂಡಿತ್ಯ, ಅನುಭವಗಳಿಗೆ ಮನ್ನಣೆಯಾಗಿ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಮೂರು ಸಾವಿರ ಮಠದ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ, ಬಸವಪ್ರಶಸ್ತಿ ಮೊದಲಾದ ಗೌರವಗಳು ಲಭಿಸಿವೆ. ‘ಸ್ವಪ್ನಲೋಕ’ ಮಾಸಿಕದ ಸಂಸ್ಥಾಪಕ ಸಂಪಾದಕರಾಗಿದ್ದ ಶ್ರೀಯುತರು ನಿವೃತ್ತಿಯ ನಂತರವೂ ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ಅನವರತ ತೊಡಗಿಸಿಕೊಂಡಿದ್ದಾರೆ.
ಡಾ. ಎಸ್. ವಿದ್ಯಾಶಂಕರ್ ಅವರು ಶರಣ ಸಾಹಿತ್ಯ ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿರುವ ಮೌಲಿಕ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೦ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಅವರ ಕೀರ್ತಿಗೆ ಮತ್ತೊಂದು ಗರಿಯನ್ನು ತೊಡಿಸಲು ಹೆಮ್ಮೆಯೆನಿಸುತ್ತದೆ.
‘ಸಾಹಿತ್ಯ ರಸಾಸ್ವಾದನಾನಂದ, ನಿರೂಪಣ ನಿಪುಣ, ಹೃದಯ ಸ್ಪರ್ಶಿ ಭಾಷಣ ನಿಪುಣ’ ಎಂದು ಹಿರಿಯ ಕವಿ ಶ್ರೀ ವಾಲಿ ಗಂಗಪ್ಪ ಅವರಿಂದ ಪ್ರಶಂಸಿಸಲ್ಪಟ್ಟ ಡಾ. ಸಂಗಮೇಶ ಹಂಡಿಗಿ ತಮ್ಮ ಅದ್ಭುತವಾದ ಕರ್ತೃತ್ವ ಶಕ್ತಿಯಿಂದ ನಿರಂತರವಾಗಿ ವಚನ ಕೃಷಿಯಲ್ಲಿ ಕಾರ್ಯಪ್ರವೃತ್ತರಾಗಿರುವುದು ಎಲ್ಲರಿಗೂ ವಿದಿತ ವಿಷಯ.
ಡಾ. ಸಂಗಮೇಶ ಹಂಡಿಗಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ತೆಲಗಿಯಲ್ಲಿ ದಿನಾಂಕ ೬-೫-೧೯೩೮ರಂದು ಜನಿಸಿದರು. ತಂದೆ ಶ್ರೀ ಮಲ್ಲೇಶಪ್ಪ, ತಾಯಿ ಶ್ರೀಮತಿ ನೀಲಗಂಗಮ್ಮ, ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಡಿಪ್ಲಮೋ-ಇನ್ ಪಬ್ಲಿಕ್ ಅಡ್ಮಿನಿಸ್ಟೇಷನ್, ಕನ್ನಡ ವಿಭಾಗದಿಂದ ಎಂ.ಎ. ಮತ್ತು “ಶ್ರೀ ಜ.ಚ.ನಿ. ವಚನ ಸಾಹಿತ್ಯ – ಒಂದು ಅಧ್ಯಯನ’ ಎಂಬ ತಮ್ಮ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ನವಿಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೨೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿ.ಹೆಚ್.ಡಿ. ಅಧ್ಯಯನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ವಚನ, ಕಾವ್ಯ, ವಿಮರ್ಶಾತ್ಮಕ ಪ್ರಬಂಧ, ಜೀವನ ಚರಿತ್ರೆ, ಸಂಶೋಧನೆ, ಚಿಂತನ ಇತ್ಯಾದಿ ಪ್ರಕಾರಗಳಲ್ಲದೆ ಸಂಪಾದಿತ ಕೃತಿಗಳೂ ಸೇರಿದಂತೆ ಡಾ. ಸಂಗಮೇಶ ಹಂಡಿಗಿ ಅವರ ೩೬ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿವೆ. ‘ನಿಡುಮಾಮಿಡಿ’, ‘ಶರಣಾನುಭವ’, ‘ವಚನಸ್ತವನ’, ‘ವಚನ ಮಯೂರ’ ಇವರ ಆಧುನಿಕ ವಚನ ಕೃತಿಗಳು. ನಾಡಿನ ಪ್ರಮುಖ ಪತ್ರಿಕೆಗಳಿಗೆ ಗೌರವ ವರದಿಗಾರರಾಗಿ, ‘ಮಾಮಿಡಿ’ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಉತ್ತಮ ಭಾಷಣಕಾರರು, ಜೊತೆಗೆ ಸಮರ್ಥ ಸಂಘಟನಾಕಾರರೂ ಹೌದು. ಅನೇಕ ಕವಿಗೋಷ್ಠಿ, ಸಮ್ಮೇಳನಗಳನ್ನು ಸಂಘಟಿಸಿದ ಶ್ರೇಯಸ್ಸು ಇವರದು.
ಅನೇಕ ವಚನ ಗೋಷ್ಠಿಗಳಲ್ಲಿ ಸ್ವರಚಿತ ವಚನ ವಾಚನ ಮಾಡಿರುವರಲ್ಲದೆ ಪ್ರಬಂಧಗಳನ್ನೂ ಮಂಡಿಸಿದ್ದಾರೆ. ೨೦೦೬ರಲ್ಲಿ ನವದೆಹಲಿಯಲ್ಲಿ ಜರುಗಿದ ಪ್ರಪ್ರಥಮ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದ ಗೋಷ್ಠಿ, ೨೦೦೮ರಲ್ಲಿ ಮುಂಬಯಿಯಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಚರ್ಚಾಗೋಷ್ಠಿ ಮತ್ತು ೨೦೦೯ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಹಳಕಟ್ಟಿ ವಚನೋತ್ಸವ ಮೊದಲಾದವುಗಳ ಅಧ್ಯಕ್ಷತೆ ಅವರಿಗೆ ಸಂದ ಗೌರವ.
ವಚನ ಸಾಹಿತ್ಯಕ್ಕೆ ಗಣನೀಯ ಕಾಣಿಕೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಸಂಗಮೇಶ ಹಂಡಿಗಿ ಅವರು ವಚನ, ವಚನಸಿರಿ, ಕರ್ನಾಟಕ ಜ್ಯೋತಿ, ಡಾ. ಜ.ಚ.ನಿ. ಪ್ರಶಸ್ತಿ, ಪಂಪ, ಸಾಹಿತ್ಯ ರತ್ನ, ಬೇಂದ್ರೆ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ಡಾ. ಸಂಗಮೇಶ ಹಂಡಿಗಿ ಅವರು ವಚನ ಸಾಹಿತ್ಯ ಮತ್ತು ಆಧುನಿಕ ವಚನ ರಚನೆಯ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೦ರ ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನವೆನಿಸುತ್ತದೆ.
ಮಾನವನ ಸಾಂಸ್ಕೃತಿಕ ಬದುಕಿನ ಒಂದು ಸಂಪತ್ತು ಸಂಗೀತ. ಅಂತಹ ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡು, ವಿಶೇಷವಾಗಿ ಹಿಂದೂಸ್ತಾನಿ ಮತ್ತು ವಚನ ಸಂಗೀತದಲ್ಲಿ ಸಾಧನೆಯ ಸಿದ್ದಿ ಪಡೆದವರು ಉಸ್ತಾದ್ ಹುಮಾಯನ್ ಹರಲಾಪುರ . ೨-೩-೧೯೬೩ರಲ್ಲಿ ಶ್ರೀ ಮೌಲಾಸಾಬ್ ಮತ್ತು ಶ್ರೀಮತಿ ಹುಸೇನಬಿ ಅವರ ಸುಪುತ್ರರಾಗಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹರಲಾಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿ, ಪಿ.ಯು.ಸಿ. ಶಿಕ್ಷಣದ ನಂತರ ಗದಗದಲ್ಲಿರುವ ಶ್ರೀ ಗಾನಯೋಗಿ ಪಂಡಿತ ಡಾ. ಪಂಚಾಕ್ಷರ ಗವಾಯಿಗಳವರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತ ಕಲಿಕೆ ಪ್ರಾರಂಭಿಸಿದರು.
ಉಸ್ತಾದ್ ಹುಮಾಯೂನ್ ಅವರ ಪ್ರತಿಭೆ, ಶ್ರದ್ಧೆಯನ್ನು ಗುರುತಿಸಿದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಇವರನ್ನು ಶಿಷ್ಯರಾಗಿ ಸ್ವೀಕರಿಸಿ ಸಂಗೀತ ಶಿಕ್ಷಣದ ಮೊದಲ ಗುರುವಾದರು. ನಂತರ ಗುಲ್ಬರ್ಗಾದ ಪಂಡಿತ ಫಕೀರೇಶ್ ಕಣವಿ ಮತ್ತು ಪಂಡಿತ ಶಿವರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತ ಸಾಧನೆಯನ್ನು ಮುಂದುವರೆಸಿದರು. ಗಾಯನದಲ್ಲಿ ‘ವಿದ್ವತ್’ ಮತ್ತು ಮಧ್ಯಪ್ರದೇಶ ಸರ್ಕಾರದ ‘ಸಂಗೀತ ವಿಶಾರದ’ ಪದವಿ ಗಳಿಸಿರುವ ಹುಮಾಯೂನ್ ಹರಲಾಪುರ ಅವರು ೧೯೮೮ ರಿಂದ ಶಿವಮೊಗ್ಗದ ಶ್ರೀ ಪಂಚಾಕ್ಷರಿ ಸಂಗೀತ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಆಕಾಶವಾಣಿಯ ಬಿ.ಹೈ, ಗ್ರೇಡ್ ಮತ್ತು ದೂರದರ್ಶನ ಕಲಾವಿದರೂ ಆಗಿರುವ ಶ್ರೀ ಹುಮಾಯೂನ್ ಅವರು ಕರ್ನಾಟಕದಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ನೆರೆಯ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ ರಾಜ್ಯಗಳಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿ ಪ್ರಸಿದ್ದಿ ಪಡೆದಿದ್ದಾರೆ. ರಾಜ್ಯದ ಪ್ರತಿಷ್ಠಿತ ಮಠ-ಮಾನ್ಯಗಳಿಂದ, ಸಂಘ-ಸಂಸ್ಥೆಗಳಿಂದ ‘ಸಂಗೀತ ಚತುರ’, ‘ಗಾಯನ ಸಾಮ್ರಾಟ್’, ‘ಸಂಗೀತ ಕಲಾಭೂಣ’, ‘ಪಂಡಿತ್ ಪುಟ್ಟರಾಜ ಕೃಪಾಭೂಷಣ’ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ತರಂಗ ಪತ್ರಿಕೆ ಇವರಿಗೆ ‘ಭಾವೈಕ್ಯ ಗಾನಕೋಗಿಲೆ’ ಎಂಬ ಬಿರುದು ನೀಡಿದೆ.
ಪ್ರಸ್ತುತ ಶಿವಮೊಗ್ಗದಲ್ಲಿ ಶ್ರೀ ಗುರುಕೃವಾ ಗಾನಮಂದಿರದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಉಸ್ತಾದ್ ಹುಮಾಯೂನ್ ಹರಲಾಪುರ ಕಲಾ ಸರಸ್ವತಿಯ ಶ್ರದ್ಧೆಯ ಆರಾಧಕರಾಗಿದ್ದಾರೆ.
ಸದಾ ಸಂಗೀತ ಲೋಕದ ಅಂಗಳದಲ್ಲೇ ಇರುವ ಹುಮಾಯೂನ್ ಹರಲಾಪುರ ಅವರು ಯುವ ಪೀಳಿಗೆಯ ಒಂದು ಆಶಾಕಿರಣವಾಗಿದ್ದಾರೆ. ವೈಯಕ್ತಿಕ ನಡೆ-ನುಡಿಗಳ ಅವರ ಸಭ್ಯತೆ-ಸಜ್ಜನಿಕೆಗಳು, ಸಾಮಾಜಿಕ ಸಂಬಂಧಗಳು ನಿಜಕ್ಕೂ ಅವರ ಕಲಾಸಾಧನೆಗೆ ಒಂದು ಹಿರಿಮೆ ತಂದುಕೊಟ್ಟಿವೆ.
ವಚನ ಸಂಗೀತಕ್ಕೆ ಹುಮಾಯೂನ್ ಹಲಾಪುರ ಅವರಿಂದ ಸಂದಿರುವ ಮತ್ತು ಸಲ್ಲುತ್ತಿರುವ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೦ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನವೆನಿಸಿದೆ.
‘ದಯೆಯೇ ಧರ್ಮದ ಮೂಲ’ ಎಂದು ಸಾರುತ್ತಾ ನಡೆ-ನುಡಿಯ ಸಮನ್ವಯದ ಮೂಲಕ ವಿಶ್ವಮಾನವ ಸಂದೇಶ ನೀಡಿದ ಬಸವಾದಿ ಶರಣರ ತತ್ವ ಸಂದೇಶಗಳನ್ನು ಮನ-ಮನೆಗಳ ಬಾಗಿಲಿಗೆ ತಲುಪಿಸುವ ಸದಾಶಯದ ಸಂಸ್ಥೆ ‘ಬಸವತತ್ವ ಪ್ರಚಾರ ಕೇಂದ್ರ ಮತ್ತು ಸಂಶೋಧನಾ ಗ್ರಂಥ ಭಂಡಾರ’. ಈ ಕೇಂದ್ರವು ಡಾ. ಆರ್. ಶಿವಣ್ಣ ಅವರ ಕನಸಿನ ಕೂಸು. ಮಾರ್ಚ್ ೧, ೨೦೦೬ ರಂದು ವಿದ್ಯುಕ್ತವಾಗಿ ಆರಂಭವಾದ ಈ ಸಂಸ್ಥೆಯ ಸಂಸ್ಥಾಪಕರಾಗಿ, ಅಧ್ಯಕ್ಷರಾಗಿ, ಪ್ರಕಾಶಕರಾಗಿ, ಪ್ರಧಾನ ಸಂಪಾದಕರಾಗಿ ಡಾ. ಶಿವಣ್ಣ ಅವರು ಸ್ತುತ್ಯಾರ್ಹವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಡೆಪ್ಯುಟಿ ಲೈಬ್ರರಿಯನ್ ಆಗಿದ್ದ ಡಾ. ಆರ್. ಶಿವಣ್ಣ ಅವರು ನಿವೃತ್ತರಾದ ನಂತರ ಒಂದು ಸಂಕಲ್ಪದಂತೆ ಸ್ವೀಕರಿಸಿ, ಶರಣರ ಪರಂಪರೆ, ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಅಧಿಕೃತ ಹಾಗೂ ಅಗತ್ಯ ಮಾಹಿತಿಗಳನ್ನು ಒದಗಿಸುವುದು, ಶರಣರ ಸರಳ ಮತ್ತು ಸಮಗ್ರ ಜೀವನ ಚರಿತ್ರೆಗಳನ್ನು ಪ್ರಕಟಿಸುವುದು, ಮಹತ್ವದ ಕೃತಿಗಳನ್ನು ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ಅವನ್ನು ಇಂಗ್ಲೀಷ್ ಮತ್ತು ಹಿಂದಿಗೆ ಅನುವಾದಿಸಿ ಪ್ರಕಟಿಸುವುದು, ವಚನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಪ್ರತಿವರ್ಷ ‘ಬಸವಜ್ಯೋತಿ’ ಪುರಸ್ಕಾರ ನೀಡುವುದು, ವಿವರಣಾತ್ಮಕ ಕನ್ನಡ-ಇಂಗ್ಲಿಷ್ ಪಾರಿಭಾಷಿಕ ನಿಘಂಟನ್ನು ಪ್ರಕಟಿಸುವುದು – ಹೀಗೆ ಬಹುಮುಖ ಸೇವೆಯಲ್ಲಿ ತೊಡಗಿದ್ದಾರೆ.
‘ಶ್ರೀ ಸಾಮಾನ್ಯರ ಮಾಲಿಕೆ’ ಯಡಿ ಕನ್ನಡದಲ್ಲಿ ಶಿವಶರಣರ ಸರಳ ಜೀವನ ಚರಿತ್ರೆ, ಸಾಧನೆ ಮತ್ತು ಪರಂಪರೆಯನ್ನು ಕುರಿತಾದ ೧೬೮ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ೧೮ ಪುಸ್ತಕಗಳನ್ನು ಕನ್ನಡದಿಂದ ಇಂಗ್ಲೀಷ್ಗೆ, ೧೫ ಪುಸ್ತಕಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಎರಡು ಸಂಪುಟಗಳಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖಕರು ಮತ್ತು ಪುಸ್ತಕ ಶೀರ್ಷಿಕೆಗಳ ‘ಗ್ರಂಥ ಸೂಚಿ’ಯನ್ನು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ೧೦೧ ಪ್ರಮುಖ ಶಿವಶರಣರ ಸಂಕ್ಷಿಪ್ತ ಪರಿಚಯ ಹೊಂದಿದ ಮೌಲಿಕ ಸಂಪುಟವನ್ನು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಕಟಿಸಿದ್ದಾರೆ.
ಶರಣ ಸಾಹಿತ್ಯ ಗ್ರಂಥಗಳಿಗೆ ಮೀಸಲಾದ ಸುಮಾರು ೭೦೦೦ಕ್ಕೂ ಹೆಚ್ಚು ಗ್ರಂಥಗಳನ್ನು ಹೊಂದಿರುವ ಡಾ. ಶಿವಣ್ಣ ಅವರ ಗ್ರಂಥ ಭಂಡಾರದ ಅಶ್ರಯದಲ್ಲಿ ಸಂಶೋಧನೆ ನಡೆಸುವವರಿಗೆ, ಪಿ.ಹೆಚ್ಡಿ ಅಧ್ಯಯನಕ್ಕೆ ಉತ್ತೇಜನ, ಸಹಾಯಧನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಡಾ. ಶಿವಣ್ಣ ಅವರು ಏಕವ್ಯಕ್ತಿಯಾಗಿ ಅತ್ಯಲ್ಪ ಅವಧಿಯಲ್ಲೇ ಸ್ವಂತ ಹಣ ವೆಚ್ಚ ಮಾಡಿ ಸಾರ್ವಜನಿಕ ಉಪಯುಕ್ತತೆಯ ಇಂತಹ ಒಂದು ಮಹತ್ವದ ಗ್ರಂಥ ಕೇಂದ್ರವನ್ನು ಸ್ಥಾಪಿಸಿರುವುದು ನಿಜಕ್ಕೂ ಅಭಿನಂದನೀಯ. ಅವರ ಈ ಸಾಹಸ ಅನೇಕ ವಿದ್ವಾಂಸರ ಮೆಚ್ಚುಗೆ ಗಳಿಸಿದೆ.
ಶರಣ ಸಂಸ್ಕೃತಿಯ ಬೆಳಕನ್ನು ಎಲ್ಲೆಡೆ ಪಸರಿಸಲು ಕಂಕಣ ಬದ್ಧವಾಗಿರುವ ‘ಬಸವ ತತ್ವ ಪ್ರಚಾರ ಕೇಂದ್ರ ಮತ್ತು ಸಂಶೋಧನಾ ಗ್ರಂಥ ಭಂಡಾರ’ಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಣಮಶ್ರೀ ಪ್ರತಿಷ್ಠಾನದ ವತಿಯಿಂದ ೨೦೧೦ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನವೆನಿಸಿದೆ.
Copyright © 2024 Ramanashree Awards . All Rights Reserved. Crafted by Pixelsbrew