ಬೀದರ ಜಿಲ್ಲಾ ಔರಾದ ತಾಲ್ಲೂಕಿನ ಬೆಲ್ದಾಳ ಗ್ರಾಮದಲ್ಲಿ ೧೯೪೮ರಲ್ಲಿ ಶ್ರೀ ಲಾಲಪ್ಪ ಮತ್ತು ಶ್ರೀಮತಿ ಲಕ್ಷ್ಮೀದೇವಿ ಅವರ ಪುತ್ರರಾಗಿ ದಲಿತ ಶೋಷಿತ ಬಡ ಶಿವಭಕ್ತ ಕುಟುಂಬದಲ್ಲಿ ಜನಿಸಿದರು.
ತಂದೆಯವರು ಮಾಡುತ್ತಿದ್ದ ಭಜನೆ, ಭಕ್ತಿ ಬದುಕು ಇವರ ಆಧ್ಯಾತ್ಮಿಕ ಬದುಕಿಗೆ ಮೂಲ ಪ್ರಭಾವ ಬೀರಿತು. ೧೫ನೇ ವಯಸ್ಸಿಗೆ ಬಾಲ್ಯವಿವಾಹ, ಬದುಕಿಗೆ ಹೊಲಿಗೆ ಕಾಯಕ, ಮುಂದೆ ನಿಜಗುಣ ಶಿವಯೋಗಿಗಳ ವೇದಾಂತ, ಬಸವಾದಿ ಶರಣರ ತತ್ವಗಳತ್ತ ಒಲವು, ಅದೇ ಉಸಿರು. ಪ್ರತಿ ರಾತ್ರಿ ೩ ರಿಂದ ದೀರ್ಘಕಾಲ ಶಿವಯೋಗ ಸಾಧನೆ. ೧೯೭೫ರಲ್ಲಿ ಬಸವ ಕಲ್ಯಾಣ ಅನುಭವ ಮಂಟಪದಲ್ಲಿ ಪೂಜ್ಯ ಚನ್ನಬಸವ ಅಪ್ಪಗಳವರಿಂದ ಲಿಂಗದೀಕ್ಷೆ; ಜಂಗಮದೀಕ್ಷೆ
ಮೊದಲಿಗೆ ೨೦ ದಲಿತ ಬಡ ಮಕ್ಕಳನ್ನು ದತ್ತು ಪಡೆದು ಸಾಕಿ ಊಟ ವಸತಿ, ಬಟ್ಟೆ, ವಿದ್ಯಾಭ್ಯಾಸ ಪೋಷಣೆ. ತಮ್ಮ ಕಾಯಕ ಹಾಗೂ ತಮ್ಮ ಅಲ್ಪ ಭೂಮಿಯ ಆದಾಯವೇ ಆಶ್ರಯ. ಮುಂದೆ ಬಸವ ಯೋಗಾಶ್ರಮ, ಮಾದರ ಚನ್ನಯ್ಯನವರ ಪ್ರಸಾದ ನಿಲಯ, ಹರಳಯ್ಯ ಪ್ರೌಢಶಾಲೆ, ಬಸವ ಕಲ್ಯಾಣದಲ್ಲಿ ಬಸವ ಮಹಾಮನೆ ಸಂಸ್ಥೆ, ನೀಲಾಂಬಿಕಾ ಶಿವಯೋಗ ಕೇಂದ್ರ ಶಿವಯೋಗ ಪರಿಷತ್ತು, ಧ್ಯಾನ ಯೋಗ ಪರಿಷತ್ತು, ಬಸವ ಕೇಂದ್ರ ಶರಣ ಸಂಸತ್ತು, ಏಕತಾ ಪರಿಷತ್ತು ಇವು ಸಿದ್ಧರಾಮ ಬೆಲ್ದಾಳರು ಹುಟ್ಟು ಹಾಕಿದ ಸಂಸ್ಥೆಗಳು, ‘ವಚನ ತತ್ವಸಾರ’, ‘ವಚನ ತತ್ವಾನುಭವ’ ಮೊದಲಾದ ೧೩ ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ‘ಬಸವಶ್ರೀ ಪ್ರಶಸ್ತಿ’, ‘ಹಳಕಟ್ಟಿ ಪ್ರಶಸ್ತಿ’, ‘ಏಸುಕ್ರಿಸ್ತ ಪ್ರಶಸ್ತಿ’ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಹಣದಿಂದ ಕೌರಾ ಮತ್ತು ಬೆಲ್ದಾಳ ಗ್ರಾಮಗಳಲ್ಲಿ ಉಚಿತವಾಗಿ ಬಸವಶ್ರೀ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.
ಬಸವತತ್ವ ಪ್ರಚಾರಕರಾಗಿ ದೇಶ ವಿದೇಶಗಳಲ್ಲಿ ಸಭೆ, ಸಮ್ಮೇಳನ, ಪ್ರವಚನಗಳ ಮೂಲಕ ಜನಜಾಗೃತಿಯಲ್ಲಿ ನಿರತರಾಗಿದ್ದಾರೆ. ಅನೇಕ ಸಂಘ-ಸಂಸ್ಥೆಗಳ ನೇತೃತ್ವ ವಹಿಸಿಕೊಂಡು, ಶರಣತತ್ವ ಪ್ರಸಾರ ಮತ್ತು ಜನಸೇವೆ ಕೈಗೊಂಡಿದ್ದಾರೆ. ‘ಮಾನವಕುಲದ ಅಮೂಲ್ಯ ಆಸ್ತಿ’, ‘ಯೋಗದ ಒಳ ಹೊರಗನರಿತ ಶಿವಯೋಗಿ, ‘ನಮ್ಮ ನಾಡಿನ ಭಾಗ್ಯದೇವತೆ’ ಎಂಬುದಾಗಿ ನೂರಾರು ಮಹನೀಯರಿಂದ ಪ್ರಶಂಸಿಸಲ್ಪಟ್ಟಿದ್ದಾರೆ. ಬೆಲ್ದಾಳ ಶರಣರ ಜೀವನ ಮತ್ತು ಸಾಹಿತ್ಯ ಎಂ.ಫಿಲ್. ಮತ್ತು ಎಚ್.ಡಿ ಪದವಿಗಳ ವಿಷಯಗಳಾಗಿವೆ.
ಶ್ರೀ ಸಿದ್ಧರಾಮ ಬೆಲ್ದಾಳರು ನಿಜೈಕ್ಯ ಲಿಂಗನಿಷ್ಠರು, ಶಿವಯೋಗಿಗಳು, ಭೌತಿಕ ಜಂಗಮರಾಗದೆ, ಅನುಭಾವಿ ಜಂಗಮರಾಗಿ ನಿಜವಾದ ಅರ್ಥದಲ್ಲಿ ಮಜಂಗಮ ಚೇತನರಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಪೂಜ್ಯ ಸಿದ್ಧರಾಮ ಬೆಲ್ದಾಳರ ಶರಣರ ಸಾಹಿತ್ಯ-ಸಂಸ್ಕೃತಿಗಳ ವಿಸ್ಕೃತ ಸೇವೆಯ ಮನ್ನಣೆಯಾಗಿ ‘ವಿಶೇಷ ಸನ್ಮಾನ’ ನೀಡಲು ಅಭಿಮಾನಪಡುತ್ತವೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
ಡಾ. ಸಂಗಮೇಶ ದಂಡಯ್ಯ ಸವದತ್ತಿ ಮಠ ೧೯೪೩ರಲ್ಲಿ ಮುರಗೋಡದಲ್ಲಿ ಜನಿಸಿದರು. ಕನ್ನಡ ಮತ್ತು ಭಾಷ ವಿಜ್ಞಾನದಲ್ಲಿ ಎಂ.ಎ. ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ, ಅನೇಕ ಸಂಘ- ಸಂಸ್ಥೆಗಳ ಅಧ್ಯಕ್ಷರಾಗಿ, ಸಂಸ್ಥಾಪಕರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸ್ಥೆಗಳ ಆಜೀವ ಸದಸ್ಯತ್ವ, ಶೈಕ್ಷಣಿಕ ಸದಸ್ಯತ್ವ ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳ ಆಯ್ಕೆ ಸಮಿತಿ ಪರಿಣತ ಮಂಡಲಿಯಲ್ಲಿಯೂ ಕೆಲಸ ಮಾಡಿದ್ದಾರೆ. ಅನೇಕ ಸಂಶೋಧನ, ಸಾಂಸ್ಕೃತಿಕ ಸಂಸ್ಥೆಗಳಿಗೆ, ಅಭಿನಂದನ ಸಮಿತಿಗಳಿಗೆ, ರಾಷ್ಟ್ರ ರಾಜ್ಯ ವಿಚಾರ ಸಂಕಿರಣಗಳಿಗೆ, ಕಮ್ಮಟ ತರಬೇತಿ ಶಿಬಿರಗಳಿಗೆ ಸಂಚಾಲಕ, ನಿರ್ದೇಶಕ, ಸಂಯೋಜಕರಾಗಿ ಹೊಣೆಗಾರಿಕೆ ನಿರ್ವಹಿಸಿದ್ದಾರೆ.
ಇವರ ಪಾಂಡಿತ್ಯಕ್ಕೆ ಮನ್ನಣೆಯಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಂತಾರಾಷ್ಟ್ರೀಯ ‘ಹರ್ಮನ್ ಗುಂಡರ್ಟಿ’ ಪ್ರಶಸ್ತಿ, ಹೀಗೆ ೨೫ ಪ್ರಶಸ್ತಿಗಳು ಲಭಿಸಿವೆ. ಯು.ಜಿ.ಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರ, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಪುರಸ್ಕಾರ ನೀಡಿ ಗೌರವಿಸಿವೆ. ಶ್ರೀಯುತರು ೧೦೪ ಗ್ರಂಥಗಳನ್ನು, ೨೦೦ಕ್ಕೂ ಹೆಚ್ಚಿನ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ೧೨ ಪಿಎಚ್.ಡಿ., ೧೫ ಎಂ.ಫಿಲ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಕನ್ನಡದ ಏಕೈಕ ಎನಿಸಿದ ಸಂಶೋಧನ ಕ್ಷೇತ್ರದ ‘ಸಂಶೋಧನ ವ್ಯಾಸಂಗ ದೈಮಾನಿಕ ಪತ್ರಿಕೆ ಪ್ರಕಟಣೆ, ಉತ್ತರ ಕರ್ನಾಟಕದ ಮೊಟ್ಟಮೊದಲ ಕನ್ನಡ ಎಮರಿಟಸ್ ಪ್ರೊಫೆಸರ್ ಗೌರವ, ‘ವಚನ ಸಾಹಿತ್ಯದ ಸಂಕ್ಷಿಪ್ತ ವಿಶ್ವಕೋಶಾತ್ಮಕ ನಿಘಂಟು’, ‘ವರ್ಣನಾತ್ಮಕ ವಚನ ಪದಕೋಶ’ ಮತ್ತು ‘ವಿಷಯ ವಚನ ಸಂಪುಟ’ – ಇವು ಇವರ ಪ್ರಮುಖ ‘ಪ್ರಥಮ’ ಸಾಧನೆಗಳಾಗಿವೆ. ಇವರ ‘ಸಂಶೋಧನ ವ್ಯಾಸಂಗ’ ದೈಮಾಸಿಕ ಪತ್ರಿಕೆ American Library of Congress ಅಂರ್ತಜಾಲದಲ್ಲೂ ಜಗತ್ತಿನಾದ್ಯಂತ ಲಭ್ಯವಾಗುತ್ತಿದೆ.
ಡಾ. ಸಂಗಮೇಶ ಸವದತ್ತಿ ಮಠ ಅವರ ಸಂಶೋಧನ ಕ್ಷೇತ್ರದ ಗಣನೀಯ ಸಾಧನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೦೫ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನ ಪಡುತ್ತವೆ.
ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮವೇ ಆಗಿರುವ ಶ್ರೀ ಮ.ನಿ.ಪು, ನಾಡೋಜ ಡಾ. ಜಗದ್ಗುರು ಅನ್ನದಾನೀಶ್ವರ ಮಹಾ ಶಿವಯೋಗಿಗಳವರದು ಬಹುಮುಖ ವ್ಯಕ್ತಿತ್ವ ಸಾಹಿತ್ಯಾಧ್ಯಯನ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಜನಪರ ಕಾಳಜಿಗಳ ಮೂಲಕ ಅಪಾರ ಸಾಧನೆಗೈದ ಆಧುನಿಕ ಅನುಭಾವಿಗಳು, ಶ್ರೀಗಳು ಅನ್ನದಾನ, ಜ್ಞಾನದಾನ, ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ವಿವಾಹ, ಕೃಷಿ ಅಭಿವೃದ್ಧಿ, ದೀನ ದುರ್ಬಲರಿಗೆ ನೆರವು ಇತ್ಯಾದಿ ಸೇವೆಗಳ ಮೂಲಕ ಅಪರೂಪದ ಧರ್ಮಗುರುಗಳೆನಿಸಿದ್ದಾರೆ.
ಶರಣ ಸಾಹಿತ್ಯಕ್ಕೆ ಪೂಜ್ಯರ ಕೊಡುಗೆ ಅದ್ವಿತೀಯ. ಶರಣರ ಕುರಿತ ವಿಚಾರ ಸಂಕಿರಣಗಳು, ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳು, ಸಂಶೋಧನಾತ್ಮಕ ಲೇಖನಗಳ ಪ್ರಕಟಣೆ. ಶ್ರೀಮಠದಿಂದ ೨೦೯ ಗ್ರಂಥಗಳ ಪ್ರಕಟಣೆ – ಇವು ಶ್ರೀಗಳವರ ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿವೆ.
ಪೂಜ್ಯರ ಸಾಹಿತ್ಯದ ಮೇಲೆ ನಾಲ್ಕು ಸಂಶೋಧನಾತ್ಮಕ ಪಿಎಚ್.ಡಿ., ಕೃತಿಗಳು ಹಾಗೂ ಎರಡು ಎಂ.ಫಿಲ್ ಪ್ರಬಂಧಗಳೂ ರೂಪುಗೊಂಡಿವೆ.
ಪೂಜ್ಯ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಕನ್ನಡ ವಿಶ್ವವಿದ್ಯಾಲಯದ ನಾಡೋಜ, ‘ಧರ್ಮ ಭಾಸ್ಕರ ಮೊದಲಾದ ಗೌರವ ಪದವಿ- ಪುರಸ್ಕಾರಗಳು ಸಂದಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನವು ವಚನ ರಚನೆಯಲ್ಲಿ ಪೂಜ್ಯರ ಗಣನೀಯ ಸೇವೆಗಾಗಿ ೨೦೧೫ರ ‘ರಮಣಶ್ರೀ ಪ್ರಶಸ್ತಿ’ಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲು ಅಭಿಮಾನಪಡುತ್ತವೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ೧೯೫೧ರಲ್ಲಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಪುಟ್ಟಹಳ್ಳಿ ಹಾಸಣಗಿಯಲ್ಲಿ ಜನಿಸಿದರು. ಧಾರವಾಡದಲ್ಲಿ ಸಂಗೀತರತ್ನ, ಪದ್ಮಭೂಷಣ ಪಂ. ಬಸವರಾಜ ರಾಜಗುರುಗಳ ಶಿಷ್ಯರಾಗಿ ೨೫ ವರ್ಷಗಳ ಕಾಲ ಮತ್ತು ಮುಂದೆ ಕೆಲವು ವರ್ಷ ಮುಂಬೈ ಪದ್ಮಭೂಷಣ ಪಂ. ಸಿ.ಆರ್. ವ್ಯಾಸ್ ಅವರ ಬಳಿ ಸಂಗೀತಾಭ್ಯಾಸ ಮಾಡಿದರು.
ಪಂ. ಗಣಪತಿ ಭಟ್ ಪುಣೆಯ ಪ್ರತಿಷ್ಠಿತ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ, ದೇಶದಾದ್ಯಂತ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ, ವಿದೇಶಗಳಲ್ಲಿ ಗಾಯನ ಪ್ರಸ್ತುತ ಪಡಿಸಿ ಪ್ರಸಿದ್ಧರಾಗಿದ್ದಾರೆ. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿರುವ ಇವರು ಶಿಷ್ಯಂದಿರಿಗೆ ಇಂದಿಗೂ ಉಚಿತವಾಗಿ ಸಂಗೀತ ವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಶಾಸ್ತ್ರೀಯ ಸಂಗೀತ ಗುರುಕುಲದ ಪ್ರಮುಖ ಗುರುಗಳಲ್ಲೊಬ್ಬರಾಗಿದ್ದಾರೆ.
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ವತ್ಸಲಾಬಾಯಿ ಭೀಮಸೇನ ಜೋಶಿ ಪ್ರಶಸ್ತಿ ಹಾಗೂ ದೇಶ-ವಿದೇಶಗಳ ಅನೇಕ ಸಂಘ-ಸಂಸ್ಥೆಗಳಿಂದ ವಿವಿಧ ಪ್ರಶಸ್ತಿಗಳು ಹಾಗೂ ಸಮ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ಕಿರಾಣಾ-ಗ್ವಾಲಿಯರ್-ಘರಾಣಗಳ ಶೈಲಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜರಾದ ಪಂ. ಹಾಸಣಗಿ ಅವರು ತಮ್ಮದೇ ವಿಶಿಷ್ಟ ನಿರೂಪಣಾ ಶೈಲಿಯನ್ನು ರೂಪಿಸಿಕೊಂಡು ಪ್ರೋತೃಗಳ ಮನಗೆದಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನವು ಪಂ. ಗಣಪತಿ ಭಟ್ ಹಾಸಣಗಿ ಅವರು ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗಾಗಿ ೨೦೧೫ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನ ಪಡುತ್ತವೆ.
ಗದಗದಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮವು ಗುರುಕುಲ ಪದ್ಧತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ. ಅಂಧ-ಅನಾಥ-ವಿಕಲಾಂಗ ವಿದ್ಯಾರ್ಥಿಗಳಿಗೆ ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಪ್ರವಚನ, ಕನ್ನಡ, ಹಿಂದಿ, ಸಂಸ್ಕೃತ, ತರ್ಕಶಾಸ್ತ್ರಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬಡ ಮಕ್ಕಳಿಗೆ ಊಟ, ಬಟ್ಟೆ, ವಸತಿಯನ್ನು ಕಲ್ಪಿಸಿ, ಅಸಂಖ್ಯಾತ ಸಂಗೀತ ಕಲಾವಿದರು ಪ್ರವಚನಕಾರರು ಕೀರ್ತನಕಾರರು, ಕವಿಗಳು, ರಂಗಭೂಮಿ ಮತ್ತು ಚಲನಚಿತ್ರ ನಟರನ್ನು ನೀಡಿದ ರಾಷ್ಟ್ರದ ಏಕೈಕ ಆಶ್ರಮವಾಗಿದೆ.
ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ದೂರದೃಷ್ಟಿಯಿಂದ ಸರ್ವಜಾತಿಯ ಅಸಹಾಯಕರ ಬದುಕಿನ ದಾರಿದೀಪವಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಲಿಂ. ಪಂ. ಪಂಚಾಕ್ಷರ ಗವಾಯಿಗಳವರಿಂದ ೧೯೪೨ರಲ್ಲಿ ಸ್ಥಾಪನೆಯಾಯಿತು. ಹೆಸರಿಗೆ ತಕ್ಕಂತೆ ಪುಣ್ಯಕಾರ್ಯಗಳನ್ನು ಮಾಡುತ್ತಿರುವ ಪುಣ್ಯಾಶ್ರಮವು ರಾಷ್ಟ್ರದಾದ್ಯಂತ ಹೆಸರಾಗಿದೆ. ಅಸಂಖ್ಯಾತ ಬಡಮಕ್ಕಳಿಗೆ ಬದುಕು ಕಲ್ಪಿಸಿ ಕಾಮಧೇನು, ಕಲ್ಪವೃಕ್ಷವಾಗಿದೆ, ಅಕ್ಷರ ದಾಸೋಹ, ಅನ್ನ ದಾಸೋಹ, ಸಂಗೀತ ದಾಸೋಹ ಹೀಗೆ ತ್ರಿವಿಧ ದಾಸೋಹದ ಮಹಾ ಮನೆಯಾಗಿದೆ.
‘ಸಂಗೀತಕಾಶಿ’ ಎಂದು ಹೆಸರಾಗಿರುವ ಈ ಸಂಸ್ಥೆಯನ್ನು ದೇಶದಲ್ಲಿಯೇ ವಿಶೇಷ ಮಾದರಿಯ ಆಶ್ರಮವಾಗಿ, ದಿವ್ಯತಾಣವನ್ನಾಗಿ ರೂಪಿಸಿದವರು, ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು. ಇಲ್ಲಿ ಅನಕ್ಷರಸ್ಥರೂ ಸಹ ಲಲಿತ ಕಲೆಗಳ ಶಿಕ್ಷಣ ಪಡೆದು ಅವುಗಳ ಜ್ಞಾನದಿಂದಲೇ ಭರವಸೆಯ ಜೀವನ ನಡೆಸಿ ಜನಮನ್ನಣೆ ಪಡೆಯುವಂತಾಗಿದೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಸಂಸ್ಥೆಗೆ ೨೦೧೫ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತವೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.
೧೯೭೧ರಲ್ಲಿ ಜನಿಸಿದ ರುದ್ರೇಶ ಗಂಗಾಧರ ಕಿತ್ತೂರ ಎಂ.ಎಸ್ಸಿ., ಎಂ.ಇಡಿ., ಪದವಿ ಗಳಿಸಿ, ಪ್ರಸ್ತುತ ಮುದ್ದೇಬಿಹಾಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶಿಕ್ಷಣ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಚನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆ, ಕಥೆ, ಕವನ, ಪ್ರಬಂಧ ರಚನೆಯಲ್ಲದೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡುವುದು ಇವರ ಹವ್ಯಾಸ.
‘ವಚನ ವಿಜ್ಞಾನ’ ಎಂಬ ಬ್ಲಾಗ್ ಮೂಲಕ ಜಗತ್ತಿನಾದ್ಯಂತ ಶರಣರ ವೈಜ್ಞಾನಿಕ ವಿಚಾರಗಳನ್ನು ಪ್ರಚುರ ಪಡಿಸುತ್ತಿದ್ದಾರೆ. ಅನೇಕ ಸಂಸ್ಥೆಗಳ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ‘ವಚನ ಸಂಗಮ’, ‘ಶರಣರ ವಿಜ್ಞಾನ’, ‘ವಚನ ಜ್ಞಾನ ವಿಜ್ಞಾನ’ ಎಂಬ ಕೃತಿಗಳೇ ಅಲ್ಲದೆ ಅನೇಕ ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ. ವಚನ ಸಾಹಿತ್ಯ ಕುರಿತ ಅನೇಕ ಲೇಖನಗಳು, ಶೈಕ್ಷಣಿಕ ಲೇಖನಗಳು, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪರಿಷತ್ತಿನ ‘ಮಹಾಮನೆ’ ಪತ್ರಿಕೆಯಲ್ಲಿ ರುದ್ರೇಶ್ ಗಂಗಾಧರ ಕಿತ್ತೂರ ಅವರು ವಚನ ಸಾಹಿತ್ಯದಲ್ಲಿ ವಿಜ್ಞಾನದ ಅಂಶಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ‘ವಚನ ಜ್ಞಾನ-ವಿಜ್ಞಾನ’ ಎಂಬ ಅವರ ಕೃತಿಯನ್ನು ಪರಿಷತ್ತೇ ಪ್ರಕಟಿಸಿದೆ. ಆಧುನಿಕ ವಿಜ್ಞಾನದ ಆವಿಷ್ಕಾರಕ್ಕೆ ಮುನ್ನವೇ ವಚನಕಾರರು ವಿಜ್ಞಾನ ಬಲ್ಲಿದರಾಗಿದ್ದಾರೆಂದು ನಿದರ್ಶನಗಳೊಂದಿಗೆ ಪ್ರತಿಪಾದಿಸಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ರುದ್ರೇಶ್ ಗಂಗಾಧರ ಕಿತ್ತೂರ ಅವರ ಸಂಶೋಧನ ಕಾರ್ಯಕ್ಕೆ ಮನ್ನಣೆಯಾಗಿ ೨೦೧೫ರ ‘ರಮಣಶ್ರೀ ಪ್ರಶಸ್ತಿ’ ನೀಡಿ ಗೌರವಿಸಲು ಹರ್ಷಪಡುತ್ತವೆ.
ಮಕ್ತುಂಬಿ ಎಂ. ಮುಲ್ಲಾ ಅವರು ಮೆಹಬೂಬ್ ಸಾಬ್ ಮತ್ತು ಮಹೆಬೂಬ್ಬಿ ದಂಪತಿಗಳ ಪುತ್ರಿಯಾಗಿ ೧೯೭೯ರಲ್ಲಿ ಭಾಲ್ಕಿಯಲ್ಲಿ ಜನಿಸಿದರು. ಎಂ.ಎ. ಕನ್ನಡ ಮತ್ತು ಬಿ.ಎಡ್. ಪದವಿ ಗಳಿಸಿ ‘ವಚನಕಾರರ ಸೌಂದರ್ಯ ಮೀಮಾಂಸೆ’ ವಿಷಯ ಕುರಿತು ಮಹಾಪ್ರಬಂಧ ರಚಿಸುತ್ತಿದ್ದಾರೆ. ‘ಹತ್ತಿರಣಗಳು’, ‘ನನ್ನ ಶಿವಾ’, ‘ಗೌರಿಯ ಕನಸು’, ‘ಆಧುನಿಕ ವಚನಗಳಲ್ಲಿ ಭಾಲ್ಕಿ ಚಂದ್ರನ ಮಹಾ ಬೆಳಗು’ ಮತ್ತುಂಬಿ ಅವರು ಬರೆದ ಪುಸ್ತಕಗಳು. ‘ಭಾಲ್ಕಿ ತಾಲ್ಲೂಕಿನ ಚುಟುಕು ಸಾಹಿತ್ಯ ‘ಸಿಂಚನ’ ಇವರ ಸಂಪಾದಿತ ಕೃತಿ. ‘ಅಂತರಂಗದಾಳ, ‘ಶಿವಗಾಂಗೇಯ’ ಕೃತಿಗಳಲ್ಲಿ ಇವರ ಅನೇಕ ಕವನಗಳು ಪ್ರಕಟಗೊಂಡಿವೆ.
ಮೊದಲ ಮುಸ್ಲಿಂ ಆಧುನಿಕ ವಚನಕಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಕ್ತುಂಬಿ ಅವರಿಗೆ ‘ಸುವರ್ಣ ಕನ್ನಡಿಗ ಪ್ರಶಸ್ತಿ, ಬೆಂಗಳೂರು ಸಿರಿಗನ್ನಡ ವೇದಿಕೆ ವತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ, ‘ಆಧುನಿಕ ವಚನ ವಿದ್ರುಮ’ ಪ್ರಶಸ್ತಿ ಲಭಿಸಿವೆ. ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಅಷ್ಟೇ ಅಲ್ಲದೆ ಮಕ್ಕುಂಬಿ ಅವರು ವಿವಿಧ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಮಹಿಳಾ ಪ್ರತಿನಿಧಿಯಾಗಿ ಕೋಶಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ತುಂಬಿ ಅವರು ಬರೆದ ಕವನಗಳು, ಲೇಖನಗಳು ‘ಬಸವ ಪಥ’, ‘ಕನ್ನಡ ನುಡಿ’, ‘ಬಸವ ಮಾರ್ಗ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕವನಗಳು ಧ್ವನಿ ಸುರುಳಿಗಳಲ್ಲೂ ಮುದ್ರಿತಗೊಂಡಿವೆ. ಸಂಘಟನಾ ಚತುರರಾದ ಮಕ್ಕುಂಬಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕವನವಾಚನ, ವಚನವಾಚನ, ಉಪನ್ಯಾಸ ನೀಡಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಎಂ. ಮಕ್ತುಂಬಿ ಅವರಿಗೆ ವಚನ ರಚನೆಗಾಗಿ ೨೦೧೫ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿಯನ್ನು ನೀಡಿ ಗೌರವಿಸಲು ಹರ್ಷಿಸುತ್ತವೆ.
ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕಿ ಸವಿತಾ ಅಮರೇಶ್ ನುಗಡೋಣಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಗೈದಿದ್ದಾರೆ. ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್, ವಿದ್ವತ್ನಲ್ಲಿ ತೃತೀಯ ಬ್ಯಾಂಕ್ ಮತ್ತು ವಿಶಾರದದಲ್ಲಿ ಪ್ರಥಮ ದರ್ಜೆ ಗಳಿಸಿದ್ದಾರೆ. ಬಿ.ಎ. ಪದವೀಧರೆಯಾದ ಇವರು ಆಕಾಶವಾಣಿಯಲ್ಲಿ ಸುಗಮ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ‘ಬಿ ಹೈ ಗ್ರೇಡ್’ ಕಲಾವಿದೆ. ಅಂತಾರಾಷ್ಟ್ರೀಯ ಖ್ಯಾತ ಕ್ಲಾರಿಯೋನೆಟ್ ವಾದಕರಾದ ಶ್ರೀ ನರಸಿಂಹಲು ವಡವಾಟಿ ಅವರ ಬಳಿ ಆರು ವರ್ಷಗಳ ಕಾಲ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕರಾದ ಶ್ರೀ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರ ಬಳಿ ಜೈಪುರ ಗ್ವಾಲಿಯರ ಶೈಲಿಯಲ್ಲಿ ೫ ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ಬೆಳಗಾವಿಯ ಶ್ರೀಮತಿ ಜಯಶ್ರೀ ಪಾಟೇಕರ ಅವರ ಬಳಿ ಸಂಗೀತಾಭ್ಯಾಸ ಮುಂದುವರೆಸಿದ್ದಾರೆ.
ಸವಿತಾ ಅವರು ರಾಜ್ಯದ ವಿವಿಧೆಡೆ ಹಾಗೂ ರಾಜ್ಯದ ಹೊರಗೆ ಅನೇಕ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ದಸರಾ ಉತ್ಸವ, ಹಂಪಿ ಉತ್ಸವ ಮೊದಲಾದ ನಾಡ ಉತ್ಸವಗಳಲ್ಲಿ, ರಾಷ್ಟ್ರೀಯ ಸಂಗೀತೋತ್ಸವ, ಯುವಜನ ಸಂಗೀತೋತ್ಸವ, ಸಮ್ಮೇಳನಗಳು, ಯುಗಾದಿ ಸಂಗೀತ ಕಾರ್ಯಕ್ರಮ, ಶರಣ ಸಂಸ್ಕೃತಿ ಉತ್ಸವ, ಸುಗಮ ಸಂಗೀತ ಮೇಳ, ‘ವಚನ ವೈಭವ’ದಲ್ಲೂ ಹಾಡಿದ್ದಾರೆ. ಗುಲಬರ್ಗ ಮತ್ತು ಧಾರವಾಡ ಆಕಾಶವಾಣಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ.
ವಚನಗಾನ ನಮನ, ವಚನ ಸಂಗೀತ ಸೌರಭ, ವಚನಾರಾಧನ, ಉದಯಾಸ, ಶ್ಯಾಮ ಸವೇರಾ – ಇವು ಸವಿತಾ ಅವರು ಹಾಡಿ ಬಿಡುಗಡೆಗೊಳಿಸಿರುವ ಧ್ವನಿ ಮುದ್ರಿಕೆಗಳು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಇವರ ಸೇವೆಗೆ ಮನ್ನಣೆಯಾಗಿ ೨೦೧೫ರ ‘ರಮಣಶ್ರೀ ಪ್ರಶಸ್ತಿ’ ನೀಡಿ ಗೌರವಿಸಲು ಅಭಿಮಾನ ಪಡುತ್ತವೆ.
Copyright © 2024 Ramanashree Awards . All Rights Reserved. Crafted by Pixelsbrew