ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2018

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಡಾ. ಗೊ.ರು.ಚನ್ನಬಸಪ್ಪ,

‘ಕನ್ನಡ ನಾಡಿನ ಹಿರಿಯ ಚಿಂತಕರಾದ ಶ್ರೀ ಗೊ.ರು.ಚ. ಅವರದು ಸರಳ ಸುಂದರ ಶರಣ ಜೀವನ. ಮನ-ಮಾತುಗಳಲ್ಲಿ ಸಾತ್ವಿಕತೆ, ನೋಟದಲ್ಲಿ ಶೋಧನೆಯ ತೀಕ್ಷ್ಯತೆ, ನಡತೆಯಲ್ಲಿ ಅವಧಾನ.

ನಾಡು-ನುಡಿ ಹಾಗೂ ನಾಡಿಗಳಲ್ಲಿ ಅವಿಕಂಪಿತ ಪ್ರೇಮ’- ಡಾ. ಗೊ.ರು.ಚನ್ನಬಸಪ್ಪ ಅವರನ್ನು ಕುರಿತು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ನುಡಿದ ಈ ಅವರ ವ್ಯಕ್ತಿತ್ವದ ಸಮಗ್ರ ದರ್ಶನಕ್ಕೆ ಸಾಕ್ಷಿಯಾಗಿವೆ. ೧೮.೦೫.೧೯೩೦ರಂದು ಚಿಕ್ಕಮಗಳೂರು ಜಿಲ್ಲಾ ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ ಜನಿಸಿದ ಗೊ.ರು.ಚ. ಅವರ ಶಿಕ್ಷಣವು ಬಡತನದ ಕಾರಣಕ್ಕೆ ಶಾಲಾ ಹಂತಕ್ಕೇ ಸ್ಥಗಿತವಾಯಿತು. ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲು. ಸ್ವಾತಂತ್ರ್ಯದ ನಂತರ ೧೯೪೮ರಲ್ಲಿ ಶಾಲಾ ಶಿಕ್ಷಕರಾಗಿ ಸೇರಿ ೧೫ ವರ್ಷ ಸೇವೆ, ಸಮಾಜಶಿಕ್ಷಣ ವಿಸ್ತರಣಾಧಿಕಾರಿಯಾಗಿ ೨ ವರ್ಷ, ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಉಪಸಂಪಾದಕರಾಗಿ ೮ ವರ್ಷ, ವಿಶ್ವಬ್ಯಾಂಕಿನ ಜನಸಂಖ್ಯಾ ಯೋಜನೆಯ ಪ್ರಕಟಣಾ ವಿಭಾಗದ ಸಂಪಾದಕ, ಉಪನಿರ್ದೇಶಕರಾಗಿ ೧೫ ವರ್ಷ-ಹೀಗೆ ೪೦ ವರ್ಷಗಳ ಸರ್ಕಾರಿ ಸೇವೆ ಅವರದು.

ಸರ್ಕಾರಿ ಸೇವೆಯಲ್ಲಿದ್ದಾಗ ಮತ್ತು ನಿವೃತ್ತಿಯ ನಂತರ ನಾಡು, ನುಡಿ, ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಪ್ರಮುಖ ಸಂಸ್ಥೆಗಳ ಮೂಲಕ ಡಾ. ಗೊ.ರು.ಚ. ಅವರು ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯದ ಆಡಳಿತ ಸಮಿತಿ, ಪಂಪ ಪ್ರಶಸ್ತಿ, ಬಸವ ಪುರಸ್ಕಾರಗಳ ಆಯ್ಕೆ ಸಮಿತಿ, ಕನ್ನಡ ನಿಘಂಟು ಸಮಿತಿ, ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣ ಸಮಿತಿ-ಹೀಗೆ ಹಲವು-ಹತ್ತು ಸರ್ಕಾರಿ ಸಮಿತಿಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಅವರು ಮೌಲಿಕವಾದ ಸಲಹೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನೇಕ ಹೊಸತನಗಳನ್ನು ತಂದ ಶ್ರಮ, ಪ್ರತಿಭೆ ಅವರದು. ಈ ಸಂಸ್ಥೆಗಳ ಮೂಲಕ ಅಸಂಖ್ಯ ಗ್ರಂಥಗಳ ಪ್ರಕಟನೆಯನ್ನು ಮಾಡಿದವರು ಅವರು. ದೇಶ-ವಿದೇಶಗಳಲ್ಲಿ ನಡೆದ ಅನೇಕ ಸಮ್ಮೇಳನಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಪಾಲ್ಗೊಂಡು ತಮ್ಮದೇ ಆದ ವಿಚಾರಗಳನ್ನು ಪ್ರಸ್ತತಪಡಿಸಿದವರು. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ, ಗೊಂಡೇದಹಳ್ಳಿ ಸ್ವಚ್ಛ, ಸಮೃದ್ಧ.ಸುಶಾಂತ ಗ್ರಾಮವಾದದ್ದು ಅವರ ನನಸಾದ ಕನಸುಗಳು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಥಮ ಗೌರವ ಡಾಕ್ಟರೇಟ್, ಕರ್ನಾಟಕ ಸರ್ಕಾರದ ೧೦ ಲಕ್ಷ ರೂ.ಗಳ ‘ಬಸವ ರಾಷ್ಟ್ರೀಯ ಪುರಸ್ಕಾರ’, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಭಾರತ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಿಲ್ವರ್ ಎಲಿಫೆಂಟ್ ಪದಕ. ಕರ್ನಾಟಕ ನಾಟಕ ಮತ್ತು ಜಾನಪದ ಅಕಾಡೆಮಿಗಳ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಇಂಗ್ಲೆಂಡ್ ಕನ್ನಡ ಕೂಟ ಪ್ರಶಸ್ತಿ, ರೋಟರಿ ಗೌರವ, ಸಂಸ್ಕೃತಿ ಸಂಗಮ, ಸಿದ್ಧಗಂಗಾ ಶ್ರೀ. ಶಿವಕುಮಾರ ಪ್ರಶಸ್ತಿ ಮೊದಲಾದ ೩೬ಕ್ಕೂ ಮಿಕ್ಕಿದ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದವರು ಅವರು.

ತಮಗೆ ಬಂದ ಪ್ರಶಸ್ತಿಗಳ ಹಣವೇ ಅಲ್ಲದೆ, ಸಭಾಭತ್ಯೆ, ಗೌರವಧನ, ಸಂಭಾವನೆ ಇತ್ಯಾದಿ ಎಲ್ಲ ಹಣವನ್ನೂ ಗೊ.ರು.ಚ. ಅವರು ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ನೀಡಿದ್ದಾರೆ. ೮೪ ತುಂಬಿದಾಗ ಅವರ ಅಭಿಮಾನಿಗಳು ಅರ್ಪಿಸಿದ ೧೧,೧೧,೧೧೧ರೂ.ಗಳ ಗೌರವ ನಿಧಿಗೆ ತಾವೂ ಮತ್ತಷ್ಟು ಸೇರಿಸಿ, ೧೩ಲಕ್ಷ ರೂಪಾಯಿಗಳ ದತ್ತಿಯನ್ನು ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಅಲ್ಲದೆ, ತಮ್ಮ ಗ್ರಂಥಗಳ ಮಾರಾಟದ ಹಣವನ್ನೂ ಪರಿಷತ್ತಿಗೆ ನೀಡಿದ್ದಾರೆ. ಆ ಹಣದಿಂದಲೇ “ರಮಣಶ್ರೀ ಶರಣ ಪ್ರಶಸ್ತಿ”ಗಳಂತೆ ಪ್ರತಿವರ್ಷವೂ “ಗೊ.ರು.ಚ ದತ್ತಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಶರಣಸಾಹಿತ್ಯ, ಜಾನಪದ, ಆತ್ಮಕಥೆ, ಅನುಭಾವ-ಅಂಕಣ- ನಾಟಕಸಾಹಿತ್ಯ, ಸಂಪಾದನೆ, ಅನುವಾದ-ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗೊ.ರು.ಚ ಅವರು ೬೦ಕ್ಕೂ ಹೆಚ್ಚಿನ ಸಂಖ್ಯೆಯ ಗ್ರಂಥಗಳನ್ನು ರಚಿಸಿದ್ದಾರೆ. ಕೌಟುಂಬಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಶುದ್ಧ ಮತ್ತು ಪ್ರಾಮಾಣಿಕ ಬದುಕನ್ನು ನಿರ್ವಹಿಸಿದ ಡಾ. ಗೊ.ರು.ಚನ್ನಬಸಪ್ಪ ಅವರು ವರ್ತಮಾನದ “ಶರಣಶ್ರೇಷ್ಠರು” ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ನಾಡಿಗೇ ಮಾದರಿಯಾಗಿರುವ ಡಾ. ಗೊ.ರು.ಚನ್ನಬಸಪ್ಪ ಅವರು ಶರಣ ಸಂಸ್ಕೃತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಮಾಡಿರುವ ಜೀವಮಾನದ ಸಾಧನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ೨೦೧೮ರ ಸಾಲಿನ “ರಮಣಶ್ರೀ ಶರಣ ಜೀವಮಾನದ ಸಾಧಕ ಸನ್ಮಾನ”ವನ್ನು ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಅಮರೇಶ ನುಗಡೋಣಿ

‘ತಮಂಧದ ಕೇಡು’, ‘ಕೊರಡು ಕೊನರುವ ಪರಿ’, ‘ಧರೆ ಉರಿದರೆ’, ‘ನೆಲದ ಮರೆಯ ನಿಧಾನ’, ‘ಒಡಲುಗೊಂಡವರು’, ‘ಜೋಗುಳ ನಿಂದಲ್ಲದೆ, ‘ಮೀರುವ ಘನ’, ‘ಪಕ್ವಕ್ಲಲ್ಲದೆ ಪರಿಣಾಮ ಕಾಣಿಸದು’, ‘ಒಡಲ ಹಂಗು’- ಇಂಥ ಮತ್ತು ಇನ್ನಿತರ ನೂರಾರು ಶ್ರೇಷ್ಠ ಸಣ್ಣಕತೆಗಳನ್ನು ರಚಿಸಿರುವ ಕನ್ನಡದ ಹೆಸರಾಂತ ಲೇಖಕ ಡಾ. ಅಮರೇಶ ನುಗಡೋಣಿಯವರ ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸಿದ್ದು ಶರಣರ ಕ್ರಾಂತಿ ಮತ್ತು ವಚನ ಸಾಹಿತ್ಯದ ಪ್ರಭಾವ, ರಾಯಚೂರು ಜಿಲ್ಲೆಯ ನುಗಡೋಣಿಯವರಾದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಶೂನ್ಯ ಸಂಪಾದನೆಗಳು, ಬಸವಣ್ಣನ ವಚನಗಳು, ಅಲ್ಲಮಪ್ರಭು ವಚನಗಳು-ಈ ವಿಷಯ ಕುರಿತ ಸಾಂಸ್ಕೃತಿಕ ಮುಖಾಮುಖಿಯ ಕಮ್ಮಟಗಳನ್ನು ನಡೆಸಿ, ಅವುಗಳ ಫಲಿತಗಳನ್ನು ಸಂಪಾದಿಸಿ ಪ್ರಕಟಿಸಿರುವ ಡಾ. ಅಮರೇಶ ಅವರು ವಚನ ಸಾಹಿತ್ಯ ಕುರಿತ ಹಲವಾರು ಸಂಶೋಧನಾತ್ಮ ಲೇಖನಗಳನ್ನೂ ಬರೆದಿದ್ದಾರೆ. ಅವರ “ಜೇಡರ ದಾಸಿಮಯ್ಯ” ಎಂಬ ಮಹತ್ವದ ಮಹತ್ವದ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ಶರಣ ಚಳವಳಿ ಕುರಿತ
ಹಲವಾರು ವಿದ್ಯಾರ್ಥಿಗಳ ಸಂಶೋಧನ ಅಧ್ಯಯನಗಳಗೂ ಡಾ. ಅಮರೇಶ ನುಗಡೋಣಿ ಅವರು ಮಾರ್ಗದರ್ಶಕರಾಗಿದ್ದಾರೆ.

ಸೃಜನಶೀಲ ಮತ್ತು ಸೃಜನೇತರ-ಹೀಗೆ ಎರಡೂ ನೆಲೆಯಲ್ಲಿ ವಚನಸಾಹಿತ್ಯದ ಬೆರಗು-ಬೆಡಗು-ವೈಚಾರಿಕತೆಗಳ ಬಗೆಗೆ ಡಾ. ಅಮರೇಶ ನುಗಡೋಣಿ ಅವರು ನಡೆಸಿದ ಅಧ್ಯಯನ ಮತ್ತು ಸಂಶೋಧನೆಗಳನ್ನು ಪರಿಗಣಿಸಿ ಅವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ಆಧುನಿಕ ವಚನ ರಚನೆ

ಪರಮಪೂಜ್ಯ ಶ್ರೀ ಡಾ. ವಿಜಯಕುಮಾರ ಮಹಾನುಭಾವಿಗಳು

ಹೂವು ಅರಳುವ ತೆರದಿ ಮನವು ಅರಳಿರಲಿ,
ಹಣ್ಣು ತುಂಬಿದ ತೆರದಿ ನಮ್ಮ ಬಾಳರಲಿ.
ಹೊಳೆ ತುಂಬಿ ಬಂದಂತೆ ಬಾಳು ತುಂಬಿರಲಿ,
ಸುಗ್ಗಿ ಬೆಳೆ ಬಂದಂತೆ ಅನುಭಾವ ಇರಲಿ.
ಅರುಣೋದಯದ ತೆರದಿ ಶಿವನೊಲುಮೆ ಬರಲಿ,
ಎನ್ನಾತ್ಮದಾನಂದ ಎಂದೆಂದೂ ಇರಲಿ-ಬಯಲಮಾನಸ ದೇವಾ..

ಇಂಥ ಮೃದುಮನದ ಹಾಗೂ ಸದಾಶಯದ ಸಾವಿರಾರು  ವಚನಗಳನ್ನು ರಚಿಸಿರುವ ಪ.ಪೂ.ಶ್ರೀ ವಿಜಯಕುಮಾರ ಮಹಾನುಭಾವಿಗಳು   ಇದುವರೆಗೆ ನಾಲ್ಕು ವಚನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಿ. ಎ. ಆನರ್ ಓದುತ್ತಿದ್ದ ದಿನಗಳಿಂದಲೇ ವಚನಗಳನ್ನು ರಚಿಸತೊಡಗಿದ ಅವರು, ಮೊದಮೊದಲು ವಿವಿಧ ಶರಣರ ವ್ಯಕ್ತಿತ್ವಗಳನ್ನು ಕಟ್ಟಿಕೊಡುವ ೬೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದರು. ಅಧ್ಯಾತ್ಮದ ಹಂಬಲ ಮತ್ತು ಕಾಣದೇ ಇರುವ ದಿವ್ಯಶಕ್ತಿಯನ್ನು ಕಾಣಬೇಕೆಂಬ ತುಡಿತವು ತಮ್ಮಿಂದ ವಚನಗಳನ್ನು ಬರೆಸಿದವು ಎನ್ನುವ ಅವರು, ಮುಂದೆ ಸಾಮಾಜಿಕ ಕಾಳಜಿಯ ಇತರ ವಸ್ತುಗಳಿರುವ ವಚನಗಳನ್ನೂ ರಚಿಸಿದರು.

ಪ.ಪೂ.ಶ್ರೀ ಡಾ.ವಿಜಯಕುಮಾರ ಮಹಾನುಭಾವಿಗಳು ಈವರೆಗೆ ಎರಡೂವರೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಚನಗಳನ್ನು, ರಚಿಸಿದ್ದು, ಅವುಗಳೆಲ್ಲ ನಾಡಿನ ಹಲವಾರು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಹಾಗೂ ಬೇರೆ ಬೇರೆ ಕೃತಿಗಳಲ್ಲಿ ಪ್ರಕಟವಾಗಿವೆ. ಈ ಎಲ್ಲ ವಚನಗಳನ್ನು ಒಂದೆಡೆ ಸಂಕಲಿಸಿ ಒಂದು ಬೃಹತ ಬೃಹತ ವಚನ ಸಂಪುಟವನ್ನು ಪ್ರಕಟಿಸುವ ಆಲೋಚನೆಯಲ್ಲಿ ಅವರಿದ್ದಾರೆ.

“ಬಯಲಮಾನಸ ದೇವಾ” ಅಂಕಿತದೊಂದಿಗೆ ಹೀಗೆ ನಿರಂತರ
ವಚನಗಳನ್ನು ರಚಿಸುತ್ತ ಬಂದಿರುವ ಪ.ಪೂ.ಶ್ರೀ ಡಾ. ವಿಜಯಕುಮಾರ ಮಹಾನುಭಾವಿಗಳು ಆಧುನಿಕ ವಚನ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ, ಅವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ

ವಚನ ಸಂಗೀತ ಕ್ಷೇತ್ರ

ಶ್ರೀ ಫಕ್ಕೀರೇಶ ಕಣವಿ

‘ಹಿಂದುಸ್ತಾನಿ ಸಂಗೀತ ಮತ್ತು ವಚನಗಾಯನ ಕ್ಷೇತ್ರದಲ್ಲ ಗಮನಾರ್ಹ ಸಾಧನೆ ಮಾಡಿರುವ ಶ್ರೀ ಫಕ್ಕೀರೇಶ ಕಣವಿ ಅವರು, ಗದಗ ಜಿಲ್ಲೆಯ ಕಣವಿಯವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಉಭಯಗಾಯನ ವಿಶಾರದ ಅಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯತ್ವದಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ ಅವರು, ಅಲ್ಲಿಯೇ ವಚನಗಳನ್ನು ಅರ್ಥಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಹಾಡುವ ಪರಿಣತಿ ಪಡೆದರು. ಆಕಾಶವಾಣಿ ಕಲಬುರ್ಗಿ ಕೇಂದ್ರದ ನಿಲಯದ ಕಲಾವಿದರಾಗಿ ೨೯ ವರ್ಷ ಸೇವೆ ಸಲ್ಲಿಸಿ, ೨೦೧೫ರಲ್ಲಿ ನಿವೃತ್ತಿ ಹೊಂದಿದ್ದಾರೆ. ವಚನ ಸಂಗೀತವೇ ಉಸಿರಾದ ಶ್ರೀ ಫಕ್ಕೀರೇಶ ಕಣವಿಯವರು ತಮ್ಮ ಇಡೀ ಪರಿವಾರವನ್ನೇ ಸಂಗೀತಮಯ ಮಾಡಿದ್ದಾರಷ್ಟೇ ಅಲ್ಲ: ಕೇಳಿ ಬಂದವರಿಗೆಲ್ಲ ವಚನ ಸಂಗೀತದ ಧಾರೆ ಎರೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಚನಗಳ ನಿನಾದ ಕೇಳಬರಲು ಕಾರಣರಾದವರಲ್ಲಿ ಶ್ರೀ ಕಣವಿ ಅವರೂ ಪ್ರಮುಖರು.

ತಮ್ಮ ಎಲ್ಲ ಸಂಗೀತ ಕಛೇರಿಗಳಲ್ಲೂ ಶರಣರ ವಚನಗಳ ಸುಧೆಯನ್ನು ಹರಿಸುತ್ತ, ವಚನಗಾಯನ ಪರಂಪರೆಯ ನಿರಂತರ ಹರಿವಿಗೆ ಕಾರಣರಾದ ಶ್ರೀ ಫಕೀರೇಶ ಕಣವಿ ಅವರ ಅಪೂರ್ವ ಸಾಧನೆಯನ್ನು ಮನಗಂಡು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ೨೦೧೮ ನೆಯ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ”ಯನ್ನು ಅವರಿಗೆ ಅತ್ಯಂತ ಸಂತೋಷದಿಂದ ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಶ್ರೀ ಮುರುಘಾಮಠ, ಧಾರವಾಡ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಧಾರವಾಡದ ಮುರುಘಾಮಠದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳಿಂದ ೧೯೪೩ರಲ್ಲಿ ಆರಂಭವಾದ ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯು, ಬಸವಾದಿ ಶರಣರ ವಚನ ಸಾಹಿತ್ಯ, ನಿಜಗುಣರ ತತ್ವಸಾಹಿತ್ಯ, ಹರಿಹರ- ಭೀಮಕವಿಯಾದಿ ಪ್ರಾಚೀನ ಕವಿಗಳ ಸಾಹಿತ್ಯವನ್ನು ಕುರಿತ ೩೫೦ಕ್ಕೂ ಹೆಚ್ಚಿನ ಸಂಖ್ಯೆಯ ಗ್ರಂಥಗಳನ್ನು ಈವರೆಗೆ ಪ್ರಕಟಿಸಿದೆ.

ಬಸವ ಜಯಂತಿಯಾಚರಣೆಯ ಶತಮಾನೋತ್ಸವ ಸಂದರ್ಭದ ‘ಯುಗಯುಗದ ಉತ್ಸವ’ ಎಂಬ ಬೃಹತ್ ಸಂಪುಟ, ‘ಜಾಗತಿಕ ಚಿಂತಕರು’ ಮಾಲಿಕೆಯ ೨೫ ಕೃತಿಗಳು. ‘ಮಹಾಂತ ಬೆಳಗು’ ಮತ್ತು ‘ಪ್ರಸಾದ ಪ್ರಭೆ’ ಸ್ಮರಣ ಸಂಪುಟಗಳು, ಮುರುಘಾಮಠದ ಪ್ರಸಾದ ನಿಲಯದ ಶತಮಾನೋತ್ಸವ ಸಂದರ್ಭದಲ್ಲಿ ಇದೇ ವರ್ಷ ಪ್ರಕಟಿಸಿದ ೧೧೨ ಮೌಲಿಕ ಗ್ರಂಥಗಳು-ಇವೆಲ್ಲವೂ ಶ್ರೀ ಶಿವಯೋಗೀಶ್ವರ ಗ್ರಂಥಮಾಲೆಯ ಅವಿಸ್ಮರಣೀಯ ಕೊಡುಗೆಗಳು, ಹರ್ಡೇಕರ ಮಂಜಪ್ಪ, ಫ.ಗು.ಹಳಕಟ್ಟಿ, ಎಸ್.ಸಿ.ನಂದೀಮಠ, ಸ.ಸ. ಮಾಳವಾಡ, ಸಂ.ಶಿ.ಭೂಸನೂರಮಠ, ಆರ್. ಸಿ. ಹಿರೇಮಠ, ಉತ್ತಂಗಿ ಚೆನ್ನಪ್ಪ, ಚನ್ನವೀರ ಕಣವಿ, ಡಿ.ಎಸ್.ಕರ್ಕಿ, ಜಿ.ಎಸ್. ಶಿವರುದ್ರಪ್ಪ, ದೇ.ಜವರೇಗೌಡ, ಎಂ.ಎಂ. ಕಲಬುರ್ಗಿ, ಎಚ್.ತಿಪ್ಪೇರುದ್ರಸ್ವಾಮಿ-ಈ ಎಲ್ಲ ಮೇರು ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ.

ಹೀಗೆ ೭೫ ವರ್ಷಗಳಷ್ಟು ದೀರ್ಘಕಾಲದಿಂದ ಶರಣ ಸಾಹಿತ್ಯದ ಪ್ರಕಟನೆ ಮತ್ತು ಪ್ರಸಾರದ ಕೈಂಕರ್ಯದಲ್ಲಿ ನಿರತವಾಗಿರುವ ಧಾರವಾಡದ ಮುರುಘಾಮಠದ ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಅನುಪಮ ಸೇವೆಯನ್ನು ಪರಿಗಣಿಸಿ, ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಶ್ರೀ ಪ್ರಕಾಶ ಗಿರಿಮಲ್ಲನವರ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಕೃಷಿಕ ಕುಟುಂಬದಲ್ಲಿ ಜನಿಸಿದ ಶ್ರೀ ಪ್ರಕಾಶ ಗಿರಿಮಲ್ಲನವರ ಅವರು ಶರಣ ಸಾಹಿತ್ಯ-ಸಂಸ್ಕೃತಿಯ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಉಚಿತ ಪ್ರಸಾದ ನಿಲಯದ ಆಶ್ರಯಲ್ಲಿ ಬೆಳೆದಿರುವ ಅವರು, ಅದೇ ಸಂಸ್ಥೆಯ ‘ಅಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ದಲ್ಲಿ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.

‘ವಚನ ಧರ್ಮ:ವೈಚಾರಿಕ ವಿವೇಚನೆ’, ‘ವಚನ ಸಂಸ್ಕೃತಿ, ‘ಬಸವಣ್ಣನವರು ಕಟ್ಟ ಬಯಸಿದ ಸಮಾಜ’, ‘ವಚನ ಸಾಹಿತ್ಯ:ಸಾಂಸ್ಕೃತಿಕ ಮುಖಾಮುಖಿ’ ಇವೇ ಮೊದಲಾದ ಕೃತಿಗಳನ್ನು ಒಳಗೊಂಡಂತೆ, ಶರಣ ಸಾಹಿತ್ಯವನ್ನು ವೈಚಾರಿಕವಾಗಿ ವಿಶ್ಲೇಷಿಸುವ ೩೦ಕ್ಕೂ ಹೆಚ್ಚು ಸಂಖ್ಯೆಯ ಕೃತಿಗಳನ್ನೂ ಶ್ರೀ ಪ್ರಕಾಶ ಗಿರಿಮಲ್ಲನವರ ಅವರು ಹೊರತಂದಿದ್ದಾರೆ. ಮಹಾತ್ಮರ, ಸಮಾಜ ಸೇವಕರ ಹಾಗೂ ಸಾಹಿತ್ಯ ಸಾಧಕರ ಜೀವನ ಚರಿತ್ರೆಗಳ ಲೇಖಕರೂ, ಅನೇಕ ಅಭಿನಂದನ ಗ್ರಂಥ, ಸ್ಮರಣ ಸಂಪುಟಗಳ ಸಂಪಾದಕರು ಆಗಿರುವ ಇವರ ಕೃತಿಗಳನ್ನು ನಾಡಿನ ಪ್ರತಿಷ್ಠಿತ ಮಠ-ಪೀಠ, ಸಂಸ್ಥೆಗಳು ಪ್ರಕಟಿಸಿವೆ.

ಡಾ. ಎಂ. ಎಂ, ಕಲಬುರ್ಗಿ ಹಾಗೂ ಡಾ. ಎಸ್.ಆರ್.ಗುಂಜಾಳ
ಅವರ ಗರಡಿಯಲ್ಲಿ ಬೆಳೆದಿರುವ ಶ್ರೀ ಪ್ರಕಾಶ ಅವರು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಲೇಖನ ಸೂಚಿಗಳನ್ನು ಸಿದ್ಧಪಡಿಸಿ ಸಂಶೋಧಕರಿಗೆ ಆಕರ ಸಾಮಗ್ರಿಯನ್ನು ಒದಗಿಸಿದ್ದಾರೆ. ಹೀಗೆ ಶರಣ ಸಾಹಿತ್ಯ ಕುರಿತು ಕಿರಿವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಿರುವ ಶ್ರೀ ಪ್ರಕಾಶ ಗಿರಿಮಲ್ಲನವರ ಅವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಅನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ” ಯನ್ನು ನೀಡಿ ಗೌರವಿಸುತ್ತಿವೆ.

ಆಧುನಿಕ ವಚನ ರಚನೆ

ಶ್ರೀ ಎಂ. ಎಸ್. ಬಸವೇಶ

ಹೂವು ಸ್ಥಾವರವಾಗಿದ್ದಲ್ಲಿ ಪರಿಮಳವು ಜಂಗಮವಾಯಿತ್ತಯ್ಯ !
ಫಲವು ಸ್ಥಾವರವಾಗಿದ್ದಲ್ಲಿ ಮಧುರತೆಯು ಜಂಗಮವಾಯಿತ್ತಯ್ಯ !
ತಂತು ಸ್ಥಾವರವಾಗಿದ್ದಲ್ಲಿ ವಿದ್ಯುತ್ ಜಂಗಮವಾಯಿತ್ತಯ್ಯ !
ತಂದೆ ಬಸವೇಶ ನಿಮ್ಮಿರವು ಎಮ್ಮಲ್ಲಿ ನೆಲೆಯಾಗಿತ್ತಾಗಿ
ಜಗವೇ ಜಂಗಮವಾಗಿತ್ತು ಕಾಣಾ ಭಕ್ತಾದೀನ !

ಇಂಥ ವೈಚಾರಿಕ ನೆಲೆಯ ಆಧುನಿಕ ವಚನಗಳನ್ನು ರಚಿಸುತ್ತಿರುವ ಶ್ರೀ ಎಂ.ಎಸ್. ಬಸವೇಶ ಅವರು ಮೂಲತಃ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದವರು.. ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಧರರಾಗಿರುವ ಇವರು ಸದ್ಯ ಕಷ್ಟ ಗ್ರಾಮೀಣ ಬ್ಯಾಂಕಿನ ಸಾಣೇಹಳ್ಳಿ ಶಾಖೆಯ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಮ್ಮನ್ನು ಸಾಹಿತ್ಯದ ಪರಿಚಾರಕರೆಂದೇ ಕರೆದುಕೊಳ್ಳುವ ಶ್ರೀ ಎಂ.ಎಸ್. ಬಸವೇಶ ಅವರದು ಮೂಲತಃ ಕವಿಹೃದಯ.. ಕಾವ್ಯವನ್ನು ತಮ್ಮ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಆಯ್ದುಕೊಂಡಿರುವ ಅವರು, “ಬಿಕ್ಕುತಿವೆ ಚುಕ್ಕಿ” ಹಾಗೂ “ಅನುಸಂಧಾನ” ಎಂಬ ಎರಡು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕ್ರಮೇಣ ಆಧುನಿಕ ವಚನಗಳ ರಚನೆಗೆ ಹೆಚ್ಚು ಗಮನ ಹರಿಸಿರುವ ಶ್ರೀ ಬಸವೇಶ ಅವರು “ಕಿಚ್ಚಿಲ್ಲದ ಬೇಗೆ” ಎಂಬ ವಚನಗಳ ಸಂಗ್ರಹವನ್ನೂ ಹೊರತಂದಿದ್ದಾರೆ. ಶರಣರ ವೈಚಾರಿಕತೆ ಮತ್ತು ತಾತ್ವಿಕತೆಯನ್ನು ತಮ್ಮ ವಚನಗಳ ರಚನೆಯ ಮೂಲ ಆಶಯವನ್ನಾಗಿ ಮಾಡಿಕೊಂಡಿರುವ ಶ್ರೀ ಬಸವೇಶ ಬಸವೇಶ ಅವರು ಜಾನಪದ ತ್ರಿಪದಿಗಳ ಶೈಲಿಯಲ್ಲೂ ವಚನಗಳನ್ನು ರಚಿಸಿರುವುದು ವಿಶೇಷ.

ವೈಚಾರಿಕತೆಯೇ ಆಧಾರವಾದ ಅರ್ಥಪೂರ್ಣ ಆಧುನಿಕ ವಚನಗಳನ್ನು ರಚಿಸುತ್ತಿರುವ ಶ್ರೀ ಎಂ.ಎಸ್. ಬಸವೇಶ ಅವರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ, ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ” ಯನ್ನು ನೀಡಿ ಗೌರವಿಸುತ್ತಿವೆ.

ವಚನ ಸಂಗೀತ ಕ್ಷೇತ್ರ

ಶ್ರೀಮತಿ ಶಶಿಕಲಾ ಶ್ರೀಶಾಂತ ಕುಲಹಳ್ಳಿ

ಹೆಸರಾಂತ ಹಿಂದುಸ್ತಾನಿ ಗಾಯಕಿ ಶ್ರೀಮತಿ ಶಶಿಕಲಾ ಕುಲಹಳ್ಳಿ ಅವರ ಜನಿಸಿದ್ದು ಸಂಗೀತದ ಮನೆತನದಲ್ಲಿ. ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ ಸಂಗಮೇಶ್ವರ ಗುರವ, ತಾಯಿ ಶ್ರೀಮತಿ ಲೀಲಾವತಿ, ಸಹೋದರರಾದ ಶ್ರೀ ನಂದಿಕೇಶ್ವರ ಗುರವ ಮತ್ತು ಪಂಡಿತ ಕೈವಲ್ಯಕುಮಾರ ಗುರವ ಅವರೂ ಉನ್ನತ ಮಟ್ಟದ ಸಂಗೀತಗಾರರು, ಇಂಥ ಪರಿಸರದಲ್ಲಿ ಬೆಳೆದ ಶ್ರೀಮತಿ ಶಶಿಕಲಾ ಅವರಿಗೆ ಬಾಲ್ಯದಿಂದಲೇ ಸಂಗೀತದ ದೀಕ್ಷೆಯಾಯಿತು. ಸಂಗೀತ ಕ್ಷೇತ್ರದಲ್ಲೇ ಸ್ನಾತಕೋತ್ತರ ಶಿಕ್ಷಣವನ್ನು ಪಡೆದ ಅವರು, ಆಕಾಶವಾಣಿ ಹಾಗೂ ದೂರದರ್ಶನದ ಎ ದರ್ಜೆಯ ಗಾಯಕಿ ಕೂಡ, ‘ಮೇರಿ ಆವಾಜ್ ಸುನೋ’, ಎದೆತುಂಬಿ ಹಾಡುವೆನು’ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು.

ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಸುಗಮ ಸಂಗೀತದ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಶ್ರೀಮತಿ ಶಶಿಕಲಾ ಅವರು ವಚನಗಾಯನದಲ್ಲೂ ಮುಂಚೂಣಿಯ ಗಾಯಕಿ, ಬಸವ ಟಿ.ವಿ ಹಾಗೂ ಇನ್ನಿತರ ವಾಹಿನಿಗಳ ಮೂಲಕ ಅವರು ಶರಣರ ವಚನಗಳನ್ನು ಪ್ರಸ್ತುತ ಪಡಿಸಿದ್ದಾರೆ. ವಚನಸಂಗೀತದ “ವಚನ ಸಮೃದ್ಧಿ’ ಎಂಬ ಧ್ವನಿ ಸುರಳಿ ಹಾಗೂ ಸಿ.ಡಿ.ಯನ್ನೂ ಹೊರತಂದಿರುವುದು ಅವರ ಗಮನಾರ್ಹ ಸಾಧನೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಮಹತ್ವದ ಕಛೇರಿಗಳಲ್ಲಿ ಶ್ರೀಮತಿ ಶಶಿಕಲಾ ಕುಲಹಳ್ಳಿ ಅವರು ಪ್ರೋತೃಗಳಿಗೆ ವಚನಗಳ ಸುಶ್ರಾವ್ಯ ಗಾಯನವನ್ನು ಉಣಬಡಿಸಿದ್ದಾರೆ. ಅವರ ಈ ಸಾಧನೆಯನ್ನು ಪರಿಗಣಿಸಿ, ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಅನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ” ಯನ್ನು ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಶ್ರೀ ಈ. ಕೃಷ್ಣಪ್ಪ

ಹನ್ನೆರಡನೆಯ ಶತಮಾನದ ಶರಣ ಕ್ರಾಂತಿ ಮತ್ತು ಅದರ ಫಲಶ್ರುತಿಯಾದ ವಚನ ಸಾಹಿತ್ಯದ ಬಹುಮುಖ್ಯ ತಾತ್ವಿಕತೆಯನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಸಾರಮಾಡುವ ಧೈಯದೊಂದಿಗೆ ಆರಂಭವಾದದ್ದು ಬೆಂಗಳೂರಿನ “ಬಸವ ಟಿ.ವಿ ವಾಹಿನಿ, ೨೦೧೮ರ ಜನವರಿ ೨೬ರಂದು ಕಾರ್ಯಾರಂಭ ಮಾಡಿರುವ ಈ ವಾಹಿನಿಯು ಉತ್ಸಾಹಿ ಮತ್ತು ಕ್ರಿಯಾಶೀಲ ಶರಣಜೀವಿ ಶ್ರೀ ಈ. ಕೃಷ್ಣಪ್ಪ ಅವರ ಕನಸಿನ ನನಸಾದ ರೂಪ. “ಬಸವ ತತ್ವ ಪ್ರಚಾರ ಪ್ರತಿಷ್ಠಾನ” ಎಂಬ ಸಂಸ್ಥೆಯ ಮೂಲಕ ಅನಾವರಣಗೊಂಡಿರುವ ಈ ದೃಶ್ಯವಾಹಿನಿಯು ನೋಡುಗರಿಗೆಲ್ಲ ಶರಣ ಧರ್ಮದ ಸಮಗ್ರ ದರ್ಶನ ಮಾಡಿಸುತ್ತಿದೆ.

“ಬಸವ ಟಿ.ವಿ.” ವಾಹಿನಿಯನ್ನು ಆರಂಭಿಸುವ ಮುನ್ನ ಶ್ರೀ ಈ.ಕೃಷ್ಣಪ್ಪ ಅವರು, ಶರಣ ಸಮುದಾಯದ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಕಂಡು ಅವರಿಂದ ನೆರವು ಕೇಳಿದರು. ಯಾರಿಂದಲೂ ಸಹಕಾರ ಸಿಗದಿದ್ದಾಗ ತಮ್ಮ ಆಸ್ತಿ- ಪಾಸ್ತಿಯನ್ನೆಲ್ಲ ಮಾರಿ, ತಾವು ಉದ್ದೇಶಿಸಿದ ಪ್ರಯತ್ನವನ್ನು ಸಾಕಾರಗೊಳಿಸಿಯೇ ಬಿಟ್ಟರು. ಅವರ ಏಕಲವ್ಯ ಪ್ರಯತ್ನದ ಫಲವಾಗಿ, ಕನ್ನಡ ನಾಡಿನಲ್ಲಿ ನಡೆದ ಶರಣರ ಅನನ್ಯ ಕ್ರಾಂತಿಯ ಫಲಶಗಳು ಮತ್ತು ಅವರ ವಚನ ಸಾಹಿತ್ಯದ ಪ್ರಭೆ ಈಗ “ಬಸವ ಟಿ.ವಿ.” ದೃಶ್ಯವಾಹಿನಿಯ ಮೂಲಕ ನಿರಂತರವಾಗಿ ಪ್ರಸಾರವಾಗುತ್ತಿವೆ. ಇದರ ಜೊತೆಗೆ “ಬಸವ ತತ್ವ ಟ್ರೇನಿಂಗ್ ಕಾಲೇಜನ್ನು “ ಸ್ಥಾಪಿಸುವ, ಹಾಗೂ “ಬಸವ ಧರ್ಮ ಸಂಸ್ಕಾರ ಕ್ರಿಯಾ ಮೂರ್ತಿಗಳ ತರಬೇತಿ ಮಂದಿರ”ವನ್ನು ನಿರ್ಮಿಸುವ ಕನಸೂ ಶ್ರೀ ಈ. ಕೃಷ್ಣಪ್ಪ ಅವರದಾಗಿದೆ.

ಶರಣ ಧರ್ಮದ ಸಂಸ್ಕೃತಿ ಮತ್ತು ತಾತ್ವಿಕತೆಯನ್ನು ನಾಡಿಗೆಲ್ಲ ತಲುಪಿಸುವ ಏಕೈಕ ಉದ್ದೇಶದಿಂದ “ಬಸವ ಟಿ.ವಿ” ದೃಶ್ಯವಾಹಿನಿಯನ್ನು ನಡೆಸುತ್ತಿರುವ ಶ್ರೀ ಈ. ಕೃಷ್ಣಪ್ಪ ಅವರ ಶ್ರಮ ಮತ್ತು ಸಾಹಸವನ್ನು ಪರಿಗಣಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ಅತ್ಯಂತ ಸಂತೋಷದಿಂದ, ೨೦೧೮ ನೆಯ ಸಾಲನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ” ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಗೌರವ ಪ್ರಶಸ್ತಿ

ಡಾ. ಜಿ.ಬಿ.ಜಯಾರಾಜಶೇಖರ್

ವಚನಕಾರರು, ವಚನಸಾಹಿತ್ಯ, ಶೂನ್ಯಸಂಪಾದನೆ, ಶರಣಧರ್ಮ ಚಿಂತನೆ-ಹೀಗೆ ಶರಣ ಸಂಸ್ಕೃತಿಯ ವಿಸ್ತಾರ ಸಾಗರವನ್ನು ಕುರಿತ ಅಧ್ಯಯನ, ಸಂಶೋಧನೆ, ಸಂಪಾದನೆ, ವಿಶ್ಲೇಷಣೆ, ಬರವಣಿಗೆಯಲ್ಲಿ ತಮ್ಮನ ನಿರ೦ತರ ವಾಗಿ ತೊಡಗಿಸಿಕೊ೦ಡಿರುವ ಡಾ.ಜಿ.ವಿ.ಜಯಾರಾಜಶೇಖರ್ ಅವರು ಒಬ್ಬ ಅಪರೂಪದ ಸಾಧಕಿ, ಸಂಗೀತ, ಗಮಕಗಳಲ್ಲಿ, ಪ್ರಸಾರ ಸಾಹಿತ್ಯದ ವಿವಿಧ ರೂಪಗಳಲ್ಲಿ ಮಾಧ್ಯಮದಲ್ಲಿ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬಿಡುವಿರದ ಕ್ರಿಯಾಶೀಲತೆಯಿಂದ ಕೆಲಸ ಮಾಡಿರುವ ಅವರ ಸಾಧನೆ ಬೇರೆಯವರಿಗೆ ಮಾದರಿ ಆಗುವಂಥದ್ದು, ಕೌಟುಂಬಿಕ ಬದುಕಿನಲ್ಲಿ ವಚನಧರ್ಮವನ್ನು ಪರಿಪಾಲಿಸುತ್ತ, ಒಂದು ಆದರ್ಶದ ಮಾರ್ಗದಲ್ಲಿ ನಡೆಯುತ್ತಿರುವ ಅವರು ಶರಣಸಂಸ್ಕೃತಿಯ ಪ್ರತೀಕವಾಗಿದ್ದಾರೆ.

ಮಕ್ಕಳಾದ ಮೇಲೆ ಸ್ನಾತಕೋತ್ತರ ಶಿಕ್ಷಣವನ್ನೂ, ಮೊಮ್ಮಕ್ಕಳಾದ ಮೇಲೆ ಡಾಕ್ಟರೇಟ್ ಪದವಿಯನ್ನೂ ಪಡೆದ ೮೫ ರ ಈ ಸಾಧಕಿಯು ಶರಣ ಸಾಹಿತ್ಯ ಮತ್ತು ಇತರೇ ಪ್ರಕಾರಗಳಲ್ಲಿ ರಚಿಸಿರುವ ಗ್ರಂಥಗಳು ಐವತ್ತಕ್ಕೂ ಮಿಕ್ಕಿದ ಸಂಖ್ಯೆಯವು. ಮಹಾದೇವಿಯಕ್ಕ, ಪ್ರಭುದೇವರು ಮತ್ತು ಮುಕ್ತಾಯಕ್ಕನವರ ವಚನಗಳ ವಾಚನ-ವ್ಯಾಖ್ಯಾನಗಳರುವ ಕ್ಯಾಸೆಟ್, ಸಿ.ಡಿ.ಗಳು, ಆಕಾಶವಾಣಿ-ದೂರದರ್ಶನಗಳಿಗೆ ಬರೆದ ನಾಟಕ, ರೂಪಕ, ಭಾಷಣ, ಚಿಂತನ, ವ್ಯಾಖ್ಯಾನಗಳು-ಒಂದೇ ಎರಡೇ? ಬಹುಮುಖಿ ಸಾದನೆ ಅವರದು. ಸಾಮಾಜಿಕ ಸೇವೆಯಲ್ಲೂ ಅವರದು ಬಹುದೊಡ್ಡ ಸಾಧನೆ.

ಶರಣ ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿನ ಸಾಧನೆಗಾಗಿ ದೇಶ ವಿದೇಶಗಳ ಹಲವಾರು ಸಂಘ-ಸಂಸ್ಥೆಗಳಿಂದ ಪುರಸ್ಕೃತರು ಡಾ. ಜಿ.ವಿ.ಜಯಾರಾಜಶೇಖರ್, ಶರಣ ಸಂಸ್ಕೃತಿಗೆ ಅವರು ಸಲ್ಲಿಸಿರುವ ಅನುಪಮ ಕೊಡುಗೆಯನ್ನು ಪರಿಗಣಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ “ರಮಣಶ್ರೀ ಶರಣ ಗೌರವ ಪ್ರಶಸಿ”ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಗೌರವ ಪ್ರಶಸ್ತಿ

ಡಾ. ವೀಣಾ ಬನ್ನಂಜೆ

ಬದುಕುತ್ತಲೇ, ಬದುಕಿನಾಚೆ ನಿಂತು, ಬದುಕಿನ ಸಂವೇದನೆಗಳನ್ನು ಮೀಟುವ, ಮತ್ತು ಅದರ ಗೂಢಗಳನ್ನು ಶೋಧಿಸುವ ಚಿಕಿತ್ಸಕ ಮನದ ಡಾ.ವೀಣಾ ಬನ್ನಂಜೆಯವರು, ಈ ನಾಡಿನ ಶ್ರೇಷ್ಠ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಮತ್ತು ಶ್ರೀಮತಿ ಅಹಲ್ಯಾ ಅವರ ಮಗಳು, ಕಥೆ, ಪ್ರಬಂಧ, ಕವಿತೆ, ನಾಟಕ-ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರ ಇನ್ನಿತರ ಪ್ರವೃತ್ತಿಗಳೆಂದರೆ, ನಟನೆ, ನಾಟಕ ನಿರ್ದೇಶನ, ಭಾಷಣ, ಸಮಾಜಸೇವೆ.

ಕೆಲಕಾಲ ಕನ್ನಡ ಉಪನ್ಯಾಸಕಿಯಾಗಿ, ಪ್ರಾಂಶುಪಾಲರಾಗಿ, ರಥಬೀದಿ ಗೆಳೆಯರ ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಡಾ. ವೀಣಾ ಅವರು, ಅನಂತರ, ಈ ನಾಡಿನ ಶ್ರೇಷ್ಠ ಸಾಹಿತಿಗಳೂ, ದಾರ್ಶನಿಕರೂ ಆದ ಸತ್ಯಕಾಮರ ಜೊತೆಗೆ ಹಿಮಾಲಯ ಪ್ರವಾಸ ಮಾಡಿದವರು, ಸತ್ಯಕಾಮರ ನಿಧನಾನಂತರ ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ “ಸತ್ಯಕಾಮ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಆ ಮೂಲಕ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಗಳನ್ನು ಮಾಡಿದ್ದಾರೆ. ಕಲ್ಲಹಳ್ಳ ಗ್ರಾಮಕ್ಕೆ ೮೦ ಲಕ್ಷ ರೂಪಾಯಿಯ ಕುಡಿಯುವ ನೀರಿನ ಕೆರೆಯನ್ನು ನಿರ್ಮಿಸಿದ್ದು ಅವರ ವಿಶಿಷ್ಟ ಸಾಧನೆ.

“ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಸಂವೇದನೆ’ ಎಂಬ ವಿಷಯ ಕುರಿತ ಎಂ.ಫಿಲ್‌ನ್ನು ಹಾಗೂ “ಆಚಾರ್ಯ ರಜನೀಶ್ ಮತ್ತು ಸತ್ಯಕಾಮರ ಸಾಹಿತ್ಯದಲ್ಲಿ ತಂತ್ರ ಮಾರ್ಗ” ಎಂಬ ವಿಷಯವಾಗಿ ಪಿಹೆಚ್.ಡಿ ಯನ್ನು ಪಡೆದಿರುವ ಡಾ. ವೀಣಾ ಬನ್ನಂಜೆ ಅಲೆಮಾರಿಯಾಗಿ, ಅಧ್ಯಾತ್ಮದ ಹೊಸ ನೆಲೆಯ ಶೋಧಕರಾಗಿ, ವಿಶಿಷ್ಟ ವೈಚಾರಿಕ ಕುತೂಹಲವುಳ್ಳವರಾಗಿ ಗಮನ ಸೆಳೆದಿದ್ದಾರೆ.

‘ಅಕ್ಕನ ದೈತ’, ‘ಅಕ್ಕನ ಹಾದಿ’, ‘ಸಂತೆಯೊಳಗೊಂದು ಮನೆ’, ‘ಅಂತರ್ಮುಖ, *ಲೋಕಾಂತ’, ‘ಆಗಮ-ಸಮಾಗಮ’, ‘ಸತ್ಯಕಾಮರೊಂದಿಗೆ ನನ್ನ ಸಾವಿರದ ದಿನಗಳು’, ‘ತಂದೆ ಮಗಳು’, ‘ಎಚ್ಚರದ ಕನಸು’-ಮೊದಲಾದ ವಿಶಿಷ್ಟ ಸಾಹಿತ್ಯಕೃತಿಗಳ ಹಾಗೂ ಸಾರ್ವಜನಿಕ ಕೆಲಸಗಳ ಮೂಲಕ ನಾಡಿಗೆ ಅನನ್ಯ ಕೊಡುಗೆ ನೀಡಿರುವ ಡಾ. ವೀಣಾ ಬನ್ನಂಜೆ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಪ್ರೀತಿಯಿಂದ “ರಮಣಶ್ರೀ ಶರಣ ಗೌರವ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಸಾಹಿತ್ಯ ಸಂಶೋಧಕ ಪ್ರಶಸ್ತಿ

ಡಾ. ಮೋಹನ ಬೊಳ್ಳಾರ್

“ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ -ಒಂದು ತೌಲನಿಕ ಅಧ್ಯಯನ” ಎಂಬ ವಿಷಯ ಕುರಿತು, ಡಾ.ಕೆ. ರಘುನಾಥ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ, ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಡಾ. ಮೋಹನ ಬೊಳ್ಳಾರ್ ಅವರು ಕಾಸರಗೋಡು ಜಿಲ್ಲೆಯ ಬೊಳ್ಳಾರು ಎಂಬ ಊರಿನವರು.

೧೨ನೆಯ ಶತಮಾನದ ಬಸವಣ್ಣ ಮತ್ತು ೧೯ನೆಯ ಶತಮಾನದ ನಾರಾಯಣ ಗುರುಗಳ ಕಾಲ ಮತ್ತು ದೇಶಗಳಲ್ಲಿ ಅಂತರವಿದ್ದರೂ, ಅವರ ಚಿಂತನೆ ಮತ್ತು ಕ್ರಿಯೆಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಅಸಮಾನತೆಯೇ ತಾಂಡವಿಸುವ ಸಮಾಜದಲ್ಲಿ ಬಹುಕಾಲದಿಂದಲೂ ಉಳಿದುಕೊಂಡು ಬಂದಿರುವ ಮೂಢನಂಬಿಕೆಗಳು, ಜಾತಿಯ ಅಡ್ಡಗೋಡೆಗಳು, ಮಹಿಳೆಯರ ವಿಷಯದಲ್ಲಿದ್ದ ಬಂಧನಗಳು, ಉಳ್ಳವರ ಶೋಷಣೆ- ಇವೆಲ್ಲವೂ ಕಾಲ- ದೇಶಾತೀತವಾಗಿ ಜನತೆಯನ್ನು ಕಾಡುತ್ತಲೇ ಬಂದಿದ್ದು, ಇಂಥ ಜಡ ಸ್ಥಿತಿಯನ್ನು ಚಲನಶೀಲಗೊಳಸಲು ಈ ಇಬ್ಬರೂ ದಾರ್ಶನಿಕರು ನಡೆಸಿದ ಕ್ರಿಯಾತ್ಮಕ ಹೋರಾಟದ ಸ್ವರೂಪವನ್ನು ಮೋಹನ ಬೊಳ್ವಾರ್ ಅವರು ತಮ್ಮ ಸಂಶೋಧನ ಅಧ್ಯಯನದಲ್ಲಿ ತೌಲನಿಕವಾಗಿ ವಿಶ್ಲೇಷಿಸಿದ್ದಾರೆ. ಸಾಮಾಜಿಕ ಸಮಾನತೆ ಮತ್ತು ಜನತೆಯ ನೆಮ್ಮದಿ-ಇವೆರಡರ ಗಟ್ಟಿ ಅಪೇಕ್ಷೆ ಹೊಂದಿದ್ದ ಬಸವಣ್ಣ ಮತ್ತು ನಾರಾಯಣ ಗುರುಗಳ ಪ್ರಗತಿಪರ ಚಿಂತನೆಗಳನ್ನು ಸೋದಾಹರಣಾತ್ಮಕವಾಗಿ ವರ್ತಮಾನಕ್ಕೆ ಕಟ್ಟಿಕೊಟ್ಟಿರುವ ಕಾರಣಕ್ಕಾಗಿಯೇ ಡಾ. ಬೊಳ್ಳಾರ್ ಅವರ ಈ ಅಧ್ಯಯನ ಮಹತ್ವದ್ದಾಗಿದೆ.

ಮಂಗಳೂರಿನ ಡಾ. ಎನ್.ಎಸ್.ಎ.ಎಮ್ ನಿಟ್ಟೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ಮೋಹನ ಬೊಳ್ವಾರ್ ಅವರ “ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ -ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನ ಅಧ್ಯಯನಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ೨೦೧೮ನೆಯ ಸಾಲಿನ “ರಮಣಶ್ರೀ ಶರಣ ಸಾಹಿತ್ಯ ಸಂಶೋಧಕ ಪ್ರಶಸ್ತಿ”ಯನ್ನು ಅತ್ಯಂತ ಸಂತೋಷದಿಂದ ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಸಾಹಿತ್ಯ ಸಂಶೋಧಕ ಪ್ರಶಸ್ತಿ

ಡಾ. ಶ್ರೀನಿವಾಸ ದೊಡ್ಡಮನಿ

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಡಿ.ಜಿ.ಹಾಜವಗೋಳ ಅವರ ಮಾರ್ಗದರ್ಶನದಲ್ಲಿ “ಸಿಂಗಿರಾಜ ಪುರಾಣ ವಿಜಯ : ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯವಾಗಿ ಸಂಶೋಧನೆ ನಡೆಸಿ ಪಿ.ಎಚ್‌ಡಿ. ಪಡೆದಿರುವ ಡಾ. ಶ್ರೀನಿವಾಸ ದೊಡ್ಡಮನಿ ಅವರು, ಹಾವೇರಿ ಜಿಲ್ಲೆಯ ಮಾವಿನತೋಮು ಗ್ರಾಮದವರು. ರಾಣಿಬೆನ್ನೂರು ಮತ್ತು ಧಾರವಾಡದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿರುವ ಅವರು ಸಧ್ಯ ಕರ್ನಾಟಕ ವಿಶ್ವವಿದ್ಯಾಲಯದ ಹಾವೇರಿಯ ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.

ಬಸವಣ್ಣನವರ ಚರಿತ್ರೆಯನ್ನು ಪವಾಡಗಳ ಮೂಲಕ ಕಟ್ಟಿಕೊಡುವ ಕೃತಿ ‘ಸಿಂಗಿರಾಜಮರಾಣ’. ಹದಿನೈದನೆಯ ಶತಮಾನದಲ್ಲಿ ರಚಿತವಾದ ಈ ಪುರಾಣವು ಆ ಕಾಲದ ಕಾವ್ಯ, ಶಾಸನಗಳ ಜೊತೆಗೆ ಬಹಳ ಮುಖ್ಯವಾಗಿ ಶರಣರ ವಚನಗಳ ಆಧಾರದಿಂದಲೇ ರೂಪ ಪಡೆದಿದೆ. ಅಂಗಾಯತ ಧರ್ಮದ ಆಚರಣಾತ್ಮಕ ತಾತ್ವಿಕತೆಯನ್ನು ವಿವರಿಸುತ್ತ, ಬಸವಣ್ಣ ಮತ್ತು ಬಿಜ್ಜಳನ ನಡುವಿನ ಸಂಬಂಧದ ಮೇಲೂ ಬೆಳಕು ಬೀರುವ ಈ ಕೃತಿಯು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಕಡೆಗೂ ಗಮನ ಸೆಳೆಯುತ್ತದೆ. ಬಸವಣ್ಣನವರ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಹೇಳುವ ಇಲ್ಲಿನ ಕೆಲವು ಪವಾಡಗಳು ಈಗ ಅವೈಜ್ಞಾನಿಕ ಎನ್ನಿಸಬಹುದಾದರೂ, ಆ ಕಾಲದ ಕಾವ್ಯ ಪರಂಪರೆಗೆ ಅವೇ ಮೂಲ ಆಧಾರವಾಗಿದ್ದವು. ಇಂಥ ಕೆಲವು ಪವಾಡಗಳ ಬಗೆಗೆ ಡಾ. ಶ್ರೀನಿವಾಸ ಅವರು ಇಲ್ಲಿ ವೈಚಾರಿಕ ವಿಶ್ಲೇಷಣೆಯನ್ನೂ ಮಾಡಿದ್ದಾರೆ.

ಪೌರಾಣಿಕ ದೃಷ್ಟಿಯ ಸಿಂಗಿರಾಜಪುರಾಣವನ್ನು ಸಾಂಸ್ಕೃತಿಕ ಅಧ್ಯಯನಕ್ಕೆ ಒಳಪಡಿಸಿರುವ ಡಾ. ಶ್ರೀನಿವಾಸ ದೊಡ್ಡಮನಿ ಅವರ ಕಾರ್ಯವನ್ನು ಗಮನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ೨೦೧೮ನೆಯ ಸಾಲಿನ “ರಮಣಶ್ರೀ ಶರಣ ಸಾಹಿತ್ಯ ಸಂಶೋಧಕ ಪ್ರಶಸ್ತಿ”ಯನ್ನು ಸಂತೋಷದಿಂದ ನೀಡಿ ಗೌರವಿಸುತ್ತಿವೆ.