ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2023

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ಪ್ರತಿಭಾವಂತ ವಿದ್ಯಾರ್ಥಿನಿ. ತಮ್ಮ ವಿದ್ಯಾರ್ಥಿ ಜೀವನದಲ್ಲಿ 38 ಚಿನ್ನದ ಪದಕಗಳನ್ನು ಪಡೆದ ಹೃದ್ರೋಗ ವೈದ್ಯರು.

ಇವರು ಹೃದ್ರೋಗ ತಜ್ಞರಷ್ಟೆ ಅಲ್ಲ, ಹೃದಯವಂತರು ಕೂಡ. ಹೃದ್ರೋಗಿಗಳ ಕಷ್ಟ ಪರಿಹರಿಸುವುದರ ಜೊತೆಗೆ, ಜನರ ಪ್ರಾಣ ಉಳಿಸಿದ್ದು ಇವರ ವಿಶೇಷತೆ, ವೈದ್ಯ ವೃತ್ತಿಯನ್ನು ‘ಕಾಯಕ’ವನ್ನಾಗಿ ಪರಿಗಣಿಸಿ, ಪ್ರಪ್ರಥಮವಾಗಿ ಏಳು ವಿವಿಧ ಅತಿ ವಿರಳವೆನ್ನಿಸಿದ ಹೃದಯದ ಕಾಯಿಲೆಗಳನ್ನು ಡಿವೈಸಿನಿಂದ ಮುಚ್ಚಿ, ಅದನ್ನು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿ, ಭಾರತಕ್ಕೆ
ಕೀರ್ತಿ ತಂದವರು.

ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ಎಚ್. ನರಸಿಂಹಯ್ಯ ವಾರ್ಷಿಕ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಸತತ ಆರು ಬಾರಿ ಕನ್ನಡದಲ್ಲಿ ವೈಜ್ಞಾನಿಕ ಉಪನ್ಯಾಸ ನೀಡಿದ ಖ್ಯಾತಿ ಇವರಿಗಿದೆ. ಬೀದರ್, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ‘ವೈದ್ಯವೃತ್ತಿಯಲ್ಲಿ ಕನ್ನಡದ ಬಳಕೆ’ ಕುರಿತು ಉಪನ್ಯಾಸ ನೀಡಿದ ಹೆಮ್ಮೆಯ ಕನ್ನಡತಿ.

ಇವರ ಸೇವೆಯನ್ನು ಪರಿಗಣಿಸಿ 2005ರ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಪ್ರಶಸ್ತಿ, ಡಾ. ಬಿ. ಸಿ. ರಾಯ್ ಪ್ರಶಸ್ತಿ, ಬಸವೇಶ್ವರ ಸಮಿತಿ ಕಾಯಕ ಪ್ರಶಸ್ತಿ, (2007), ಕದಳಿ ಮಹಿಳಾ ವೇದಿಕೆಯ ಕದಳಿ ಪ್ರಶಸ್ತಿ, (2007), ಶ್ರೀಮತಿ ಸಾವಿತ್ರಮ್ಮ ದೇ. ಜವರೇಗೌಡ ಮಹಿಳಾ ವಿಶ್ವಮಾನವ ಪ್ರಶಸ್ತಿ ಹಾಗೆಯೇ ವಿದೇಶಗಳಲ್ಲಿಯೂ ಸನ್ಮಾನಿಸಿ ಪ್ರಶಸ್ತಿ ನೀಡಲಾಗಿದೆ.

ಸಂಶೋಧನೆ ಹಾಗೂ ಪ್ರಯೋಗಗಳ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕಾಣಿಕೆ ನೀಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಲ್ಲಿ ಆರೋಗ್ಯ ಮತ್ತು ಹೃದಯ ರೋಗಗಳ ತಡೆಗಟ್ಟವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ತಂಬಾಕು ಮತ್ತು ಮದ್ಯಪಾನ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಆಂದೋಲನವನ್ನು ನಡೆಸಿ, 10,000 ಸಹಿಗಳನ್ನು ಸಂಗ್ರಹಿಸಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಇವರು ವೈದ್ಯರಷ್ಟೇ ಅಲ್ಲ, ಸಾಹಿತಿಗಳೂ ಕೂಡ. ಪ್ರತಿಕೆಗಳಲ್ಲಿ ಅಂಕಣ ಬರಹದ ಜೊತೆಗೆ ‘ಜೀವನ ಧಾರೆ’, ‘ಜೀವನ ಜ್ಯೋತಿ’, ‘ಜೀವನ ಸಂಜೀವನಿ’, ‘ಜೀವನ ಮಾರ್ಗ’, ‘ಜೀವನ ಸಾಂತ್ವನ’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಶರಣ ತೆರಡು ಅಕ್ಕ ನಾಗಮ್ಮ’ (ಕಾದಂಬರಿ), ‘ಮಕ್ಕಳ ಹೃದಯ ಕಾಯಿಲೆ ಮೇಲೆ ವಿಜಯ’ ಮತ್ತು ‘ಸಮೃದ್ಧ ಕರ್ನಾಟಕ ಸಧೃಡ ಹೃದಯ’ ಎಂಬ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇವರ ‘ಕರ್ನಾಟಕ ವೀರವನಿತೆಯರು’ ಕೃತಿಯನ್ನು ಕರ್ನಾಟಕ ರಾಜ್ಯ 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ.

ಕಾಯಕ ದಾಸೋಹಗಳನ್ನು ಮೈಗೂಡಿಸಿಕೊಂಡಿರುವ ಸಹೃದಯಿ. ಸಾರ್ವಜನಿಕರ, ವಿಶೇಷವಾಗಿ ಮಕ್ಕಳ ನೋವುಗಳಿಗೆ ಸಾಂತ್ವನ ನೀಡುವ ಕಾಯಕ ಕೈಗೊಂಡು ಮಾನವೀಯತೆ ಮೆರೆದ ಹೃದಯವಂತೆ, ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಒಟ್ಟಾರೆ ಸೇವೆಯನ್ನು ಪರಿಗಣಿಸಿ, ಜೀವಮಾನದ ಸಾಧನೆಗಾಗಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು ಅವರಿಗೆ 2023ನೆಯ ಸಾಲಿನ ‘ರಮಣಶ್ರೀ ಶರಣ ಜೀವಮಾನದ ಸಾಧಕ ಸನ್ಮಾನ’ವನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ರಮಣಶ್ರೀ ಶರಣ ವಿಶೇಷ ಪುರಸ್ಕಾರ

ಸ್ನೇಹ ಕಪ್ಪಣ್ಣ

ಸ್ನೇಹ ಕಪ್ಪಣ್ಣ ಅವರು ನೃತ್ಯ ಮತ್ತು ರಂಗಭೂಮಿಯ ಸೂಕ್ಷ್ಮ ಪ್ರಕಾರಗಳನ್ನು ಸಮ್ಮಿಲನಗೊಳಿಸಿ ಪ್ರಚುರಪಡಿಸುವ ಸೃಜನಶೀಲ ವ್ಯಕ್ತಿತ್ವವುಳ್ಳ ಪ್ರತಿಭಾವಂತ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ಭರತನಾಟ್ಯ ಪ್ರತಿಪಾದಕಿ, ನಟಿ, ಕಥೆಗಾರ್ತಿ, ಜಾನಪದ ನೃತ್ಯ ಕಲಾವಿದೆ ಮತ್ತು ಸಂಶೋಧಕಿ, ‘ಕಪ್ಪಣ್ಣ’ ಅಂಗಳ ಎಂಬ ನಾಟಕ ಸಭಾಂಗಣದ ಆಡಳಿತ ನಿರ್ದೇಶಕಿ ಮತ್ತು ಕಥಾ ಕಾರ್ನರ್’ ಎಂಬ ಮಕ್ಕಳಿಗೋಸ್ಕರ ಪ್ರಸಿದ್ಧ ಕಥೆ ಹೇಳುವ ಮತ್ತು ಮಕ್ಕಳ ರಂಗಭೂಮಿ ವೇದಿಕೆಯ ಸಹ-ವ್ಯವಸ್ಥಾಪಕಿ. ‘ಬ್ರಾಹ್ಮರಿ ನೃತ್ಯ ಸಂಸ್ಥೆ’ಯ ಸಂಸ್ಥಾಪನಾ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ.

ವಿದೇಶಗಳಲ್ಲಿ 600ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕರ್ನಾಟಕ ಜಾನಪದ ನೃತ್ಯದಲ್ಲಿ ಹೆಸರುವಾಸಿ. ಪುರುಷರಿಗೆ ಮೀಸಲಾದ ಹಲವು ಜಾನಪದ ನೃತ್ಯಗಳನ್ನು ಕಲಿತಿರುವ ಮಹಿಳಾ ಸಾಧಕಿ. ನಶಿಸಿ ಹೋಗುತ್ತಿರುವ ಜಾನಪದ ನೃತ್ಯಗಳ ಸಂಶೋಧನೆ, ದಾಖಲೀಕರಣ, ತರಬೇತಿ ಮತ್ತು ಪ್ರದರ್ಶನವನ್ನು ಪುನರುಜ್ಜಿವನಗೊಳಿಸುತ್ತಿದ್ದಾರೆ.

ಹೆಸರಾಂತ ರಂಗಕರ್ಮಿ ಮತ್ತು ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಲಲಿತಾರವರ ಪುತ್ರಿ ಸ್ನೇಹಾ ಅವರು ತ್ರಿವಳಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬೆಂಗಳೂರು ವಿಶ್ವವಿದ್ಯಾನಿಲಯ ದಿಂದ “ಸಮಗ್ರ ಮಾನಸಿಕ ಸಮಾಲೋಚನೆ” ವಿಷಯದಲ್ಲಿ, ಭರತನಾಟ್ಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಮೀರಜ್‌ನ ಗಂಧರ್ವ ಮಹಾವಿದ್ಯಾಲಯದಿಂದ ಅಲಂಕಾರ ಪದವಿಗಳನ್ನು ಪಡೆದಿರುತ್ತಾರೆ.

ಭರತನಾಟ್ಯ ಪ್ರವೀಣರಾದ ಗುರು ಬಿ. ಭಾನುಮತಿ ಮತ್ತು ಗುರು ಶೀಲಾ ಚಂದ್ರಶೇಖರ್ ಅವರ ಶಿಷ್ಯ. 1999ರಲ್ಲಿ ರಂಗಪ್ರವೇಶ. ಭರತನಾಟ್ಯ ಸಂಪ್ರದಾಯಕ್ಕೆ ಡಿವಿಜಿಯವರ ಕಗ್ಗಗಳನ್ನು ಅಳವಡಿಸಲು ಪ್ರಯೋಗಾತ್ಮಕ ಹಾಗೂ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿರುತ್ತಾರೆ.

2010ರಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಅಕ್ಕ ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜನೆ ನಡೆಸಿಕೊಟ್ಟಿದ್ದಾರೆ. ಕುಮಾರನ್ಸ್ ಶಾಲೆಯಲ್ಲಿ ಒಂದೇ ನೃತ್ಯ ನಾಟಕ ನಿರ್ಮಾಣದಲ್ಲಿ 1000 ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ಕಲಾ ಉತ್ಸವಕ್ಕೆ 250 ಜಾನಪದ ಕಲಾವಿದರೊಂದಿಗೆ ಸಂಯೋಜನೆ, ಜೆಎಸ್‌ಎಸ್, ಸಹನಾ ವಿಭಾಗದ ಕಿವುಡ ಮತ್ತು ಮೂಗ ಮಕ್ಕಳ ನೃತ್ಯ ಸಂಯೋಜನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರ ‘ಬ್ರಾಹ್ಮರಿ ನೃತ್ಯ ರೆಪರ್ಟರಿ’ ನೃತ್ಯ ಶಾಲೆ ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಹಲವಾರು ರಾಜ್ಯ, ಅಂತರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸ್ನೇಹ ಕಪ್ಪಣ್ಣ ಅವರ ಇತ್ತೀಚೆಗಿನ ಸಾಧನೆಯೆಂದರೆ ಹೊಸ ವಿನ್ಯಾಸವುಳ್ಳ ನೃತ್ಯ ಸಂಯೋಜನೆ ಮತ್ತು ‘ನೀನಲ್ಲದೆ ಮತ್ತಾರು ಇಲ್ಲವಯ್ಯಾ’ ಎಂಬ ವಚನ ನೃತ್ಯರೂಪಕದ ನೃತ್ಯಸಂಯೋಜನೆ, ವಚನ ಸಾಹಿತ್ಯವನ್ನು ದೇಶಾದ್ಯಂತ ಪಸರಿಸಿದ ಹೆಮ್ಮೆ ಇವರದ್ದು. ಬಸವಣ್ಣನವರ 42 ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ಒಂದು ಗಂಟೆಯ ಕಾಲ ಪ್ರದರ್ಶನದ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. 24 ನುರಿತ ನೃತ್ಯ ಕಲಾವಿದೆಯರು ಬಸ್ಸಿನಲ್ಲಿ 12,000 ಕಿಲೋಮೀಟರುಗಳ ಪ್ರವಾಸ ಮಾಡಿ 14 ರಾಜ್ಯಗಳ 40 ನಗರಗಳಲ್ಲಿ 52 ಪ್ರದರ್ಶನಗಳನ್ನು ನೀಡಿದ್ದಾರೆ.

ಸ್ನೇಹಾ ಕಪ್ಪಣ್ಣ ಅವರ ವಚನ ಕಲಾಸೇವೆಯನ್ನು ಗುರುತಿಸಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು’ ‘ರಮಣಶ್ರೀ ಶರಣ ವಿಶೇಷ ಪುರಸ್ಕಾರ’ವನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ವೀಣಾ ಬನ್ನಂಜೆ

ಆಧುನಿಕ ವಚನ ರಚನೆ

ಡಾ. ಬಸವರಾಜ ಸಾದರ

1955ರ ಜುಲೈ 20 ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದ ಬಸವರಾಜ ಸಾದರ ಅವರು ಮೂಲತಃ ಹುಲ್ಲಂಬಿಯವರು, ಮಾಧ್ಯಮಿಕ ಶಾಲಾ ಹಂತದಲ್ಲೇ ಶರಣರ ಹಾಗೂ ವಚನ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಿಕೊಂಡಿರುವ ಅವರು, ತಮ್ಮ ಓದಿನ ಉದ್ದಕ್ಕೂ ಆ ಕುರಿತ ವೈಚಾರಿಕ ಮತ್ತು ಸಂಶೋಧನಾತ್ಮಕ ಅಧ್ಯಯನ ಮಾಡುತ್ತ ಬಂದಿದ್ದಾರೆ. ಎಂ.ಎ. ನಂತರ ‘ಡಿಪ್ಲೋಮಾ – ಇನ್ – ಬಸವ ಸ್ಟಡೀಜ್’ ಕೋರ್ಸನ್ನು ಬ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಪೂರೈಸಿ, ವಚನ ಸಾಹಿತ್ಯದ ಮಹತ್ತು ಬೃಹತ್ತುಗಳನ್ನು ಕುರಿತು ಗಂಭೀರವಾದ ಬರವಣಿಗೆಗೆ ತೊಡಗಿದ ಡಾ. ಸಾದರ ಅವರು, ಶರಣಕ್ರಾಂತಿಯ ಐತಿಹಾಸಿಕ ಮಹತ್ವ ಮತ್ತು ವಚನ ಸಾಹಿತ್ಯದ ಜಾಗತಿಕ ಮೌಲ್ಯಗಳನ್ನು ಕುರಿತು ಆಗಿನಿಂದಲೇ ವೈವಿಧ್ಯಪೂರ್ಣ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಆಕಾಶವಾಣಿಯಲ್ಲಿ ವೃತ್ತಿ ಕೈಗೊಂಡ ನಂತರ ಅಲ್ಲಿಯೂ ಶರಣಾಂದೋಲನ ಮತ್ತು ವಚನಗಳ ವೈಚಾರಿಕತೆ ಕುರಿತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸಾರ ಮಾಡಿದ್ದಾರೆ. ವಚನಗಳ ವಾಚನ, ವಿಶ್ಲೇಷಣೆ ಮತ್ತು ಹಾಡುಗಳನ್ನೊಳಗೊಂಡ ‘ವಚನ ವೈಭವ’ದಂಥ ವಿನೂತನ ಕಾರ್ಯಕ್ರಮಗಳನ್ನು ನಿರ್ಮಿಸಿ ಲಕ್ಷಾಂತರ ಕೇಳುಗರಿಗೆ ತಲುಪಿಸಿದ್ದೂ ಅವರ ಮಹತ್ಸಾಧನೆ. ವಚನಗಳ ಸಮಗ್ರ ಮತ್ತು ವೈಚಾರಿಕ ಅಧ್ಯಯನದ ಫಲವಾಗಿ ಅವರಿಂದ ರಚನೆಗೊಂಡ ಗ್ರಂಥಗಳಲ್ಲಿ, ‘ಹೊಸ ಆಲೋಚನೆ’, ‘ತಮಂಧಕ್ಕೆ ಬೆಳಗು’, ‘ಕಾಯಕ-ದಾಸೋಹ’, ‘ಮೀರುವ ಘನ, ವರ್ತಮಾನಕ್ಕೂ ವಚನ’ ‘ವಚನ ವರ್ಷ’, ‘ಶರಣ ಕ್ರಾಂತಿ – ವಿಭಿನ್ನ ಪ್ರತಿಕ್ರಿಯೆಗಳು’, ‘ನೋಯುವ ಹಲ್ಲಿಗೆ ಹೊರಳುವ ನಾಲಿಗೆ’, ‘ವಚನ ವರ್ಷಾರ್ಥ’ – ಇವು ಕೆಲವು ಗಮರ್ನಾಹವಾಗಿವೆ.

‘ವಚನ ವರ್ಷಾರ್ಥ’ ಗ್ರಂಥವು 143 ಶರಣರ 365 ವಚನಗಳ ಮೂಲ ಪಠ್ಯ ಮತ್ತು ಅವುಗಳ ವಿಶ್ಲೇಷಣೆಯೊಂದಿಗೆ ಪ್ರಕಟವಾಗಿದ್ದು ಅದರ ಆರು ಸಾವಿರ ಪ್ರತಿಗಳು ಈಗಾಗಲೇ ಜನತೆಗೆ ತಲುಪಿವೆ. ಆಧುನಿಕ ವಚನಗಳ ಮಾದರಿಯಲ್ಲಿ ಡಾ. ಸಾದರ ಅವರು ರಚಿಸಿದ ತೊಟ್ಟು, ತಟಕುಗಳು ಅತ್ಯಂತ ಜನಪ್ರಿಯವಾಗಿವೆ. ಇವುಗಳು ಕೂಡ ವಚನಗಳು ಮಾಡುವ ಪರಿಣಾಮದಂತೆ ಜನಮಾನಸದ ಮೇಲೆ ಅಷ್ಟೇ ಪರಿಣಾಮ ಬೀರುತ್ತಿವೆ.

ನಿವೃತ್ತಿಯ ನಂತರ ಕರೋನಾ ಪಿಡುಗಿನ ಸಂದರ್ಭದಲ್ಲಿ ಅವರು ತಮ್ಮ ಮಗಳು ಕವಿತಾಳ ನೆರವಿನೊಂದಿಗೆ ನಿರ್ಮಿಸಿದ ಯೂಟ್ಯೂಬ್‌ ಮೂಲಕ ಜಗಜ್ಜಾಲದಲ್ಲಿ ಪ್ರಸಾರ ಮಾಡಿದ ‘ವಚನಯಾನ’ ಐವತ್ತು ಕಂತುಗಳ ಶ್ರವ್ಯ – ದೃಶ್ಯ ಸರಣಿ ಕನ್ನಡದಲ್ಲಿ ಮೊಟ್ಟಮೊದಲನೆಯದು. ಅನಂತರ ‘ಪ್ರಜಾವಾಣಿ’ ಪಾಡಕಾಸ್ಟ್ ಮೂಲಕ ನಿರ್ಮಿಸಿ ಪ್ರಸಾರ ಮಾಡಿದ ‘ವಚನವಾಣಿ’ ಸರಣಿಯಂತೂ ಆರು ಲಕ್ಷಕ್ಕೂ ಹೆಚ್ಚು ಕೇಳುಗರಿಗೆ ತಲುಪಿ ಒಂದು ಹೊಸ ಇತಿಹಾಸವನ್ನೇ ನಿರ್ಮಿಸಿತು. . ತಮ್ಮ ನಿವೃತ್ತಿ ಜೀವನದ ಬಹುಭಾಗವನ್ನು ಶರಣರ ಹಾಗೂ ವಚನಗಳ ಅಧ್ಯಯನಕ್ಕೆ ಮೀಸಲಿಟ್ಟಿರುವ ಡಾ. ಬಸವರಾಜ ಸಾದರ ಅವರ ಈ ನಿರಂತರ ಸಾಧನೆಗೆ ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಜರಗನಹಳ್ಳಿ ಬಸವ ಪ್ರಶಸ್ತಿ, ಜ್ಞಾನದಾಸೋಹಿ ಪ್ರಶಸ್ತಿ ಮೊದಲಾದ ಅನೇಕ ಉನ್ನತ ಗೌರವಗಳು ಸಂದಿವೆ.

ಶರಣರ ಬದುಕು ಮತ್ತು ವಚನ ಸಾಹಿತ್ಯದ ಆಳವಾದ ಅಧ್ಯಯನದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡದ್ದಷ್ಟೇ ಅಲ್ಲದೆ, ವಚನಕಾರರು ಜಗತ್ತಿಗೆ ಸಾರಿದ ಮೌಲ್ಯಗಳ ಅಡಿಯಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಡಾ. ಬಸವರಾಜ ಸಾದರ ಅವರ ಸಾಧನೆಯನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ರಮಣಶ್ರೀ ಪ್ರತಿಷ್ಠಾನವು ಕೊಡಮಾಡುವ 2023ರ ಸಾಲಿನ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ವಚನ ಸಂಗೀತ ಕ್ಷೇತ್ರ

ಡಾ. ನಾಗರಾಜರಾವ್ ಹವಾಲ್ದಾರ್ ಮತ್ತು ಓಂಕಾರ್‌ನಾಥ್ ಹವಾಲ್ದಾರ್

ಡಾ. ನಾಗರಾಜರಾವ್ ಹವಾಲ್ದಾರ್

ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಡಾ. ನಾಗರಾಜರಾವ್ ಹವಾಲ್ದಾರ್ ಒಬ್ಬ ಮೇರು ಕಲಾವಿದರು. ಕಿರಾನಾ ಘರಾನ ಪದ್ಧತಿಯಲ್ಲಿ ಭಾರತರತ್ನ ಪಂ. ಭೀಮಸೇನ ಜೋಶಿಯವರ ಶಿಷ್ಯರಾದ ಶ್ರೀ ಮಾಧವ ಗುಡಿಯವರಲ್ಲಿ ತಾಲೀಮು, ಅದೇ ರೀತಿ ಪಂ. ಮಲ್ಲಿಕಾರ್ಜುನ ಮನ್ಸೂರ್ ಶಿಷ್ಯ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರಲ್ಲಿ ಜೈಪುರ ‘ಅಳಿ ಘರಾನಾ ಶೈಲಿಯಲ್ಲಿಯೂ ಅಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ., ಪದವಿ ಹಾಗೂ 6 ವರ್ಷದ ‘ಸಂಗೀತ ರತ್ನ’ ಪದವಿ, ‘ಕರ್ನಾಟಕದ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಮೈಸೂರು ಒಡೆಯರ ಕೊಡುಗೆ’ ಮಹಾಪ್ರಬಂಧ ಮಂಡಿಸಿ ಪಿ.ಹೆಚ್‌ಡಿ. ಪಡೆದಿದ್ದಾರೆ. ಇವರು ‘ಆಕಾಶವಾಣಿ’ ಹಾಗೂ ದೂರದರ್ಶನದಲ್ಲಿ ‘ಎ’ ಶ್ರೇಣಿಯ ಕಲಾವಿದರು.

ಇವರು ಹಾಡುವ ಕನ್ನಡ ವಚನ, ಕನ್ನಡ ಗಾಯನ, ದಾಸರಪದ ಜನಮನ ಸೂರೆಗೊಂಡಿದೆ. ಕನ್ನಡದಲ್ಲಿ ಹಲವಾರು ಸಾಂದ್ರಿಕೆಗಳನ್ನು ಹೊರತಂದಿದ್ದಾರೆ. ಶರಣರ ವಚನಗಳನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ವಿಲಂಜಿನ್ ಖಯಾಲ್ ಶೈಲಿಗೆ ಅಳವಡಿಸಿ ಹಾಡುವ ಏಕೈಕ
120 ವ್ಯಕ್ತಿ ಕಲಾವಿದರಾಗಿದ್ದಾರೆ.

ಮೈಸೂರು ದಸರಾ, ಹಂಪಿ ಉತ್ಸವ, ಕದಂಬೋತ್ಸವಗಳಲ್ಲಿ ಗಾನಸುಧೆ ಹರಿಸಿದ್ದಾರೆ. ಕೊಲ್ಕತ್ತಾದ ಜ ಸಾಲ್ಟ್ ಲೇಕ್ ‘ಸಂಗೀತ ರತ್ನ’ ಪ್ರಶಸ್ತಿ, ಬೆಂಗಳೂರಿನ ‘ಆರ್ಯಭಟ’, ‘ನಿರ್ಮಾಣ್ ಪುರಂದರ ಸಂಗೀತರತ್ನ’, ಚೆನ್ನೈನ ವಿಶ್ವ ಕಲಾ ಸಂಘದ ‘ಸಂಗೀತ ಪ್ರಶಸ್ತಿ’ ಇವರ ಮುಡಿಗೇರಿವೆ. ಕರ್ನಾಟಕ ಸರಕಾರ ಇವರ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ 2019 ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಓಂಕಾರ್‌ನಾಥ್ ಹವಾಲ್ದಾ‌

ತಂದೆಯಂತೆ ಮಗ ಓಂಕಾರ್‌ನಾಥ್ ಹವಾಲ್ದಾರ ಸಂಗೀತ ಮನೆತನದ ಪರಿಸರದಲ್ಲಿ ಬೆಳೆದವರು. ಮನಶಾಸ್ತ್ರದಲ್ಲಿ ಪದವಿ ಪಡೆದಿರುವ ಓಂಕಾರ್‌ನಾಥ್ ಹವಾಲ್ದಾರರವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಾದ ಪಂಡಿತ ಮಾಧವಗುಡಿ, ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಪಂಡಿತ ಇಂದುಧರ ನಿರೋಡಿಯವರ ಬಳಿ ಅವರ ಶಿಷ್ಯರಾಗಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಈಗ ತಂದೆ ಡಾ. ನಾಗರಾಜರಾವ್ ಹವಾಲ್ದಾರ ಜೊತೆ ಅನೇಕ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಅಲ್ಪಾವಧಿಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶ್ರೀ ಓಂಕಾರ್‌ನಾಥ್ ಹವಾಲ್ದಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ನೀಡುವ ‘ಕಿಶೋರ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ಇದಲ್ಲದೆ ವಚನ ಸಂಗೀತಕ್ಕೆ ಹೆಸರುವಾಸಿಯಾಗಿರುವ ಪಂಡಿತ ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರ ಪ್ರಶಸ್ತಿ, ವಿದ್ವಾನ್ ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಡಾ. ನಾಗರಾಜ್‌ರಾವ್ ಹವಾಲ್ದಾರ ಮತ್ತು ಅವರ ಮಗ ಶ್ರೀ ಓಂಕಾರ್‌ನಾಥ್ ಹವಾಲ್ದಾರ ಇಬ್ಬರು ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಗುರುತಿಸಿ ಹಾಗೂ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಸಂಗೀತ ಸೇವೆ ನೀಡುತ್ತಿರುವ ಇವರ ಸಾಧನೆಯನ್ನು ಗಮನಿಸಿ ಇಬ್ಬರಿಗೂ ಜಂಟಿಯಾಗಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ 2023ರ ಸಾಲಿನ ‘ರಮಣಶ್ರೀ ಹಿರಿಯ ಶ್ರೇಣಿ ಶರಣ ಪ್ರಶಸ್ತಿ’ ನೀಡಲು ಪಮ್ಮೆ ಪಡುತ್ತವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷರು ಎನ್. ತಿಮ್ಮಪ್ಪ

ಬಸವಾದಿ ಶರಣರು. ವಚನಗಳ ಮೂಲಕ ನೀಡಿದ ವಿಚಾರಧಾರೆಯನ್ನು ವಚನಗಳ – ಮೂಲಕ ಜನಸಾಮಾನ್ಯರಿಗೆ, ನಾಡಿನ ಮನೆಮನಗಳಿಗೆ ಮುಟ್ಟಿಸಬೇಕೆಂಬ ಹಂಬಲದಿಂದ ಜನ್ಮತಾಳಿದ ಸಂಸ್ಥೆ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು.

ನಾಡಿನ ಅನೇಕ ಮಠ-ಮಾನ್ಯಗಳು, ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ಸಂಘ- ಸಂಸ್ಥೆಗಳು ಏರ್ಪಡಿಸಿದ ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿ ಕಾರ್ಯಕ್ರಮಗಳಿಂದ ಪ್ರೇರಣೆ ಮತ್ತು ಹಲವಾರು ಶರಣರ ನಿಜಬದುಕಿನ ಚಿಂತನೆಗಳಿಂದ ಸ್ಪೂರ್ತಿ ಪಡೆದು ಅವರ ಸಂದೇಶಗಳನ್ನು ಪಸರಿಸಬೇಕೆಂಬ ಹಂಬಲ ಹೊಂದಿದವರು ಈ ಸಂಸ್ಥೆಯ ಸಂಸ್ಥಾಪಕರಾದ ಎನ್. ತಿಮ್ಮಪ್ಪ ನವರು.

ವಚನಕಾರರ ವಚನಗಳನ್ನು ಮಾತ್ರವಲ್ಲದೆ ಅವರ ಸಂದೇಶವನ್ನು ನಾಡಿನಲ್ಲೆಲ್ಲ ಹರಡಲು ದಿಟ್ಟ ಹೆಜ್ಜೆಯನ್ನಿಟ್ಟು, ಆ ನಿಟ್ಟಿನಲ್ಲಿ ತಮ್ಮದೇ ಮಾರ್ಗದಲ್ಲಿ ವಚನ ಸಾಹಿತ್ಯದಲ್ಲಿ ಎಲ್ಲ ವರ್ಗದವರು ಒಳಗೊಳ್ಳುವಂತೆ ಮಾಡುವಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವಕೀಲರಾದರೂ ವಚನ ಸಾಹಿತ್ಯದ ಘಮಲನ್ನು ರಾಜ್ಯದೆಲ್ಲೆಡೆ ಚೆಲ್ಲುತ್ತಿದ್ದಾರೆ. ನಾಡಿನ ಇತರ ಸಂಸ್ಥೆಗಳಂತೆ ಇಂತಹ ಸಂಸ್ಥೆಗಳು ಸಹ ಸಾರ್ಥಕ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

ಈ ಪರಿಷತ್ತು ಈಗಾಗಲೇ ಕರ್ನಾಟಕ ರಾಜ್ಯದ 28 ಜಿಲ್ಲೆಗಳಲ್ಲಿ ಮತ್ತು 167 ತಾಲ್ಲೂಕುಗಳಲ್ಲಿ ವ್ಯಾಪಿಸಿದೆ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎನ್. ತಿಮ್ಮಪ್ಪನವರು ಸಂಸ್ಥೆಯ ಮೂಲಕ ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕುಗಳಲ್ಲಿ ಹಲವಾರು ಕಾರ್ಯಕ್ರಮಗಳ ಜೊತೆಗೆ 7 ರಾಜ್ಯಮಟ್ಟದ ಸಮ್ಮೇಳನಗಳನ್ನು ಆಯೋಜಿಸಿರುವುದು ಗಮನಾರ್ಹ ಸಂಗತಿ.

ಶ್ರೀ ಎನ್. ತಿಮ್ಮಪ್ಪನವರ ಪರಿಷತ್ತಿನ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ರಮಣಶ್ರೀ ಪ್ರತಿಷ್ಠಾನವು ಕೊಡಮಾಡುವ 2023ರ ಸಾಲಿನ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಎ.ಜೆ. ಶಿವಕುಮಾರ

ಡಾ. ಎ.ಜೆ. ಶಿವಕುಮಾರ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪುಟ್ಟ ಹಳ್ಳಿಯಲ್ಲಿ ಜನಿಸಿದವರು. ತಂದೆ ಜಯಪ್ಪ ತಾಯಿ ಜಯಮ್ಮ, ಸುಸಂಸ್ಕೃತ ರೈತಾಪಿ ಕುಟುಂಬದಿಂದ ಬಂದ ಇವರು ಮದ್ರಾಸ್ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾವಂತರು. ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಗೆ ಚಿಕ್ಕಂದಿನಿಂದಲೇ ವಚನ ಸಾಹಿತ್ಯದಲ್ಲಿ ಆಸಕ್ತಿ. ಹೀಗಾಗಿ ‘ವಚನ ಸಂಸ್ಕೃತಿಯಲ್ಲಿ ಸಮಾನತೆಯ ವಿವಿಧ ಆಯಾಮಗಳು ಅಧ್ಯಯನ’ ಕುರಿತು ಮಹಾಪ್ರಬಂಧವನ್ನು ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ. ಪದವಿಯನ್ನು ಪಡೆದಿರುತ್ತಾರೆ. ಈ ಮಹಾಪ್ರಬಂಧಕ್ಕೆ ಮಾರ್ಗದರ್ಶಕರು ಡಾ. ಸಿ.ಟಿ. ಜಯಣ್ಣ.

ಇವರು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದಲ್ಲದೇ ವಚನ ಸಾಹಿತ್ಯ ಕುರಿತಂತೆ ವಚನ ಸಾಹಿತ್ಯದ ಸ್ವರೂಪ ಮತ್ತು ವೈಶಿಷ್ಟ್ಯ, ವಚನ ಸಂಸ್ಕೃತಿಯಲ್ಲಿ ಸಮಾನತೆಯ ಪರಿಕಲ್ಪನೆ, ವಚನ ಸಾಹಿತ್ಯದಲ್ಲಿ ಕಾಯಕ, ದಾಸೋಹ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಮುಂತಾದ ಅನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ.

ಡಾ. ಎ.ಜೆ. ಶಿವಕುಮಾರ ಅವರ ಸಾಧನೆಯನ್ನು ಗುರುತಿಸಿ, ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು 2023ನೆಯ ಸಾಲಿನ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ಆಧುನಿಕ ವಚನ ರಚನೆ

ಶ್ರೀ ದೇವರಾಜ ಪಿ. ಚಿಕ್ಕಹಳ್ಳಿ

ಆಧುನಿಕ ವಚನಕಾರರು, ಸಾಹಿತಿಗಳು, ನಾಟಕಗಾರ, ಕಿರುಚಿತ್ರ ನಿರ್ದೇಶಕರು, ಕಲಾವಿದರು, ಹೋರಾಟಗಾರರು, ವಾಗ್ರಿಗಳು, ಸಮಾಜಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ದೇವರಾಜ ಪಿ. ಚಿಕ್ಕಹಳ್ಳಿ.

ಇವರು ಮೈಸೂರಿನ ಪಂಡಿತ್ ದಿ ಆರ್ಕಿಡ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರು, ಉಪನ್ಯಾಸಕರು. ಸಾಮಾಜಿಕ ಕಳಕಳಿಯ ಇವರು ವ್ಯಸನಮುಕ್ತ ರಾಜ್ಯಕ್ಕಾಗಿ ಶಾಲಾ ಕಾಲೇಜುಗಳಲ್ಲಿ 200ಕ್ಕು ಹೆಚ್ಚು ಉಪನ್ಯಾಸ ಶಿಬಿರಗಳನ್ನು ನಡೆಸಿರುತ್ತಾರೆ. ಬಸವಾದಿ ಶರಣರ ತತ್ವ ಸಂದೇಶಗಳನ್ನು ಜನರಿಗೆ ತಲುಪಿಸಲು 300ಕ್ಕು ಹೆಚ್ಚು ಅಧಿಕ ವಚನ ಸಾಹಿತ್ಯವನ್ನು ಕುರಿತು ಉಪನ್ಯಾಸ ನೀಡಿರುತ್ತಾರೆ.

“ವಚನ ದೀವಿಗೆ”, “ವಚನಜ್ಯೋತಿ” ಮುಂತಾದ ಆಧುನಿಕ ವಚನ ಸಂಕಲನಗಳಲ್ಲದೆ 2000ಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿದ ಶ್ರೇಯಸ್ಸು ಶ್ರೀ ದೇವರಾಜ ಪಿ ಚಿಕ್ಕಹಳ್ಳಿ ಅವರಿಗಿದೆ, ಇದಲ್ಲದೆ ‘ಹೂ ಚೆಲುವಿ’, ‘ಜಾತಿ ಇಲ್ಲದ ಜ್ಯೋತಿ’ ‘ಜಗದ ಜ್ಯೋತಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿರುವುದಲ್ಲದೆ `ನಮ್ಮ-ನಿಮ್ಮೊಳಗೊಬ್ಬ’ ಎಂಬ ನಾಟಕವನ್ನು ರಚಿಸಿದ್ದಾರೆ ‘ಜಾತಿ ಇಲ್ಲವೆ ಜ್ಯೋತಿ’ ‘ಆಪೂರ್ಣ’ ‘ಆಹ್ವಾನ’ ಕಿರುಚಿತ್ರಗಳನ್ನು ಇವರು ರಚಿಸಿದ್ದಾರೆ.

ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ, ‘ಆಧುನಿಕ ಅಲ್ಲಮ’ ಪ್ರಶಸ್ತಿ (ವೆಂಕಟಗಿರಿ ಪ್ರಕಾಶನ) ಮೈಸೂರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೈಚಾರಿಕತೆಯೇ ಆಧಾರವಾದ ಸಮಾಜಮುಖಿ ಅರ್ಥಪೂರ್ಣ ಆಧುನಿಕ ವಚನಗಳನ್ನು ರಚಿಸುತ್ತಿರುವ ಶ್ರೀ ದೇವರಾಜು .ಪಿ ಚಿಕ್ಕಹಳ್ಳಿ ಅವರ ಸಾಧನೆಯನ್ನು ಪರಿಗಣಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು 2023ನೆಯ ಸಾಲಿನ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ವಚನ ಸಂಗೀತ ಕ್ಷೇತ್ರ

ಡಾ. ಕುಮಾರ ಕಣವಿ

ಡಾ: ಕುಮಾರ ಕಣವಿ ಮೂಲತಃ ಕಲ್ಯಾಣ ಕರ್ನಾಟಕದ ಕಲಬುರ್ಗಿಯವರು 20.5.1983ರಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನನ, ಸಂಗೀತದಲ್ಲಿ ಸ್ನಾತಕೊತ್ತರ ಪದವಿಯನ್ನು ಪೂರೈಸಿ ಆಕಾಶವಾಣಿಯ, ದೂರದರ್ಶನದ ‘ಎ’ ಗ್ರೇಡ್ ಕಲಾವಿದ ಮತ್ತು ಸಂಗೀತ ನಿರ್ದೇಶಕರಾಗಿ ಆಯ್ಕೆಯಾದರು. ಹಿಂದುಸ್ಥಾನಿ ಸಂಗೀತದ ವಿದ್ವತ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಸುವರ್ಣ ಟಿ.ವಿ. ವಾಹಿನಿಯ ಸ್ಟಾರ್‌ಸಿಂಗರ್‌ ಕಾರ್ಯಕ್ರಮದಲ್ಲಿ ರನ್ನರ್‌ಅಪ್ ಆಗಿ ವಿಜೇತರಾದವರು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ, ಗುರುಗಳಾದ ಪಂಡಿತ ಫಕ್ಕಿರೇಶ ಕಣವಿ ಇವರ ತಂದೆ, ತಾಯಿ ದಿವಂಗತ ಶಾಂತಾ ಕಣವಿ

ವಚನಗಳನ್ನು ವಿಶಿಷ್ಟವಾಗಿ ಸಂಗೀತ ನಿರ್ದೇಶನದ ಮುಖಾಂತರ ಅರ್ಥಪೂರ್ಣವಾಗಿ ಹಾಡುತ್ತಾರೆ. ಪ್ರಸ್ತುತ ಬೆಂಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2000ರಲ್ಲಿ ಆಂಧ್ರಪ್ರದೇಶದ ಜಹಿರಾಬಾದನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗು ಭಾಷೆಯಲ್ಲಿ ವಚನಗಳನ್ನು ಹಾಡಿದ್ದು ವಿಶೇಷ. 2002ರಲ್ಲಿ ಸೊಲ್ಲಾಪುರದಲ್ಲಿ ಕನ್ನಡ ವಚನಗಳ ಜೊತೆಯಲ್ಲಿ ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಬರೆದ ವಚನಗಳಿಗೆ ಸಂಗೀತ ನಿರ್ದೇಶನ, 2004ರಲ್ಲಿ ಮೈಸೂರು ದಸರಾದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಕಲಬುರ್ಗಿಯ ಪಿ.ಎಸ್. ಶಂಕರ್ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ, ಬೀದರ್‌ನಲ್ಲಿ, ಬಾಗಲಕೋಟೆಯ ಬಿ.ವಿ.ವಿ.ಯಲ್ಲಿ ನಡೆದ ಬಸವ ಜಯಂತಿ ಉತ್ಸವದಲ್ಲಿ, ಸಂಗೀತ ವಚನ ಗಾಯನ ನಡೆಸಿಕೊಟ್ಟಿದ್ದಾರೆ.

ಇವರ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜ್ಯುಕೆಶನ್‌ನವರು ಗೌರವ ಡಾಕ್ಟರೇಟ್‌ನ್ನು ನೀಡಿ ಗೌರವಿಸಿದೆ.

2019 ರಲ್ಲಿ ಡಾ. ಬಸವರಾಜಸಾದರ ಅವರ ವಚನ ವಿಶ್ಲೇಷಣೆಗೆ ದನಿಯಾಗಿ ಸತತ ಒಂದು ವರ್ಷಗಳ ಕಾಲ 365 ವಚನಗಳಿಗೆ ರಾಗಸಂಯೋಜಿಸಿ ವಚನವಾಣಿ ಸರಣಿ ಕಾರ್ಯಕ್ರಮ ನಡೆಸಿದ್ದಾರೆ. ಪ್ರಜಾವಾಣಿಯ ಪಾಡಕಾಸ್ಟ್ ಮುಖಾಂತರ 5ಲಕ್ಷ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಸ್ತುತ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಬರೆದಿರುವ ವಚನಗಳಿಗೆ ರಾಗಸಂಯೋಜನೆ ಮಾಡಿ ಹಾಡುತ್ತ ಪ್ರತಿನಿತ್ಯ ಶ್ರೀಗುರು ವಚನಪ್ರಭಾ ಎಂಬ ಶೀರ್ಷಿಕೆಯಲ್ಲಿ ವಚನಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ..

ಕಣವಿಯವರ ವಚನ ಸಂಗೀತ ಸೇವೆಯನ್ನು ಗುರುತಿಸಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು 2023ರ ಸಾಲಿನ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ನಾಡೋಜ ಜೆ.ಎಸ್ ಖಂಡೇರಾವ

01.11.1940ರಂದು ಕಲಬುರಗಿಯಲ್ಲಿ ಶ್ರೀಯುತರ ಜನನ, ಧಾರವಾಡ ವಿಶ್ವವಿದ್ಯಾಲಯದಿಂದ ಪದವಿ, ಮುಂಬೈನ ಜೆ.ಜೆ. ಲಲಿತ ಕಲಾ ಶಾಲೆಯಲ್ಲಿ ಡಿಪ್ಲೊಮಾ, ಕಲಬುರಗಿಯಲ್ಲಿ ತಮ್ಮದೇ ಸ್ವಂತ ‘ಐಡಿಯಲ್ ಲಲಿತ ಕಲಾ ಇನ್‌ಸ್ಟಿಟ್ಯೂಟ್’ ಪ್ರಾರಂಭಿಸಿ ಅದರ ಪ್ರಾಂಶುಪಾಲರಾಗಿ 7 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ.

ಶ್ರೀ ಶರಣ ಬಸವೇಶ್ವರ ಲಲಿತ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಲಲಿತ ಕಲಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತಿ ಹೊಂದಿದ್ದಾರೆ. 2008-2011ರ ವರೆಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಅವರ ಅವಿರತ ಲಲಿತ ಕಲಾ ಸೇವೆಗೆ ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಪ್ರಮುಖವಾಗಿ 1968-1970 ಮತ್ತು 1980ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, 2004ರಲ್ಲಿ ಹಂಪಿ ವಿಶ್ವವಿದ್ಯಾಲಯ ಕೊಡಮಾಡುವ ‘ನಾಡೋಜ ಪ್ರಶಸ್ತಿ, 2018ರಲ್ಲಿ ಕಲಬುರ್ಗಿ ಸೆಂಟ್ರಲ್ ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್‌’ಗೆ ಭಾಜನರಾಗಿದ್ದಾರೆ. 2018ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಕೊಡಮಾಡುವ ಜೀವಮಾನ ಗೌರವ ಫೆಲೋಶಿಪ್’ ಪುರಸ್ಕಾರ ಪಡೆದಿರುತ್ತಾರೆ.

ಲಲಿತ ಕಲಾ ಅಕಾಡೆಮಿಯವರು ಹಮ್ಮಿಕೊಳ್ಳುವ ಕಲಾವಿದರ ಶಿಬಿರಗಳನ್ನು 2009ರಲ್ಲಿ ಮುಂಬೈ, 2014ರಲ್ಲಿ ಗುಜರಾತನ ಭಾವನಗರ್, ಬೆಂಗಳೂರು, ಮಣಿಪಾಲ್, ಚಿಕ್ಕಮಗಳೂರು, ನಂದಿ ಬೆಟ್ಟ, ಹಂಪಿ, ಪುಣೆ, ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ.

1991ರಿಂದ 2002ರವರೆಗೆ ಕಲಬುರಗಿ, ಮೈಸೂರು, ಬಿಜಾಪುರ, ಬೆಂಗಳೂರುಗಳಲ್ಲಿ ಹಲವು ಲಲಿತಕಲಾ ಶಾಲಾ ಹಾಗೂ ಲಲಿತಕಲಾ ಆಕಾಡೆಮಿಯ ಕಾರ್ಯಾಗಾರ ಶಿಬಿರಗಳಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. 1999ರಲ್ಲಿ ನವದೆಹಲಿ, ಕೇರಳದ ಕೊಚ್ಚಿ ಅಂತರಾಷ್ಟ್ರೀಯ 2000ರಲ್ಲಿ ಹೈದರಾಬಾದ್, 2011ರಲ್ಲಿ ಬೆಂಗಳೂರು ಹಾಗೂ 1984 ರಿಂದ 199!ರವರೆಗೆ ನವದೆಹಲಿಯಲ್ಲಿ ರಾಷ್ಟ್ರೀಯ ಲಲಿತ ಕಲಾ ಪ್ರದರ್ಶನಗಳನ್ನು ನೀಡಿರುತ್ತಾರೆ. 1984ರಿಂದ 2008ರವರೆಗೆ ಬೆಂಗಳೂರು, ನಾಗಪುರ, ಮುಂಬೈ, ಪುಣೆ, ಭೂಪಾಲ್, ಕರ್ನಾಟಕದ ಹಂಪಿ, ಹುಬ್ಬಳ್ಳಿ ಇನ್ನೂ ಹಲವಾರು ಕಡೆ ನಡೆದ ಶಿಬಿರಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ.

ಜೆ.ಎಸ್‌. ಖಂಡೇರಾವ್ ಒಬ್ಬ ವ್ಯಕ್ತಿಯಾಗಿರದೆ ಒಂದು ಸಂಸ್ಥೆಯಾಗಿದ್ದಾರೆ. ಇವರು ತೆಗೆದ ‘ಅನುಭವ ಮಂಟಪ’ ಪೇಂಟಿಂಗ್ ಸಂಸತ್ತಿನಲ್ಲಿ ಹಾಕಲು ಲೋಕಸಭಾ ಅಧ್ಯಕ್ಷರು ಅನುಮತಿ ನೀಡಿರುತ್ತಾರೆ. ಇನ್ನೊಂದು, ‘ವೈರಿಯ ಮಕ್ಕಳು ವೈರಿಗಳಲ್ಲ. ಅವರು ನಮ್ಮ ಮಕ್ಕಳು’ ಎಂಬ ಶೀರ್ಷಿಕೆಯ ಚಿತ್ರ, ಇದು ಇಂಗ್ಲೀಷ್ ಮಕ್ಕಳನ್ನು ಸೆರೆಹಿಡಿದು ತಂದಾಗ ಕಿತ್ತೂರು ಚೆನ್ನಮ್ಮ ತಮ್ಮ ಸೈನಿಕರಿಗೆ ಹೇಳಿದ ಮಾತಿದು. ಈ ಪೇಂಟಿಂಗ್‌ಗಾಗಿ ಯೂನೆಸ್ಕೋದಿಂದ ಮೆಚ್ಚುಗೆ ಪತ್ರವನ್ನು ಪಡೆದಿದ್ದಾರೆ. ಇದಲ್ಲದೆ ಅನೇಕ ಶರಣರ ವ್ಯಕ್ತಿಚಿತ್ರಗಳನ್ನು ಮತ್ತು ವಚನಾಧಾರಿತ ಪೇಂಟಿಂಗ್‌ಗಳನ್ನು ಬಿಡಿಸಿದ್ದಾರೆ.

ನಾಡೋಜ ಜೆ.ಎಸ್. ಖಂಡೇರಾವ ಒಂದು ಸಂಸ್ಥೆಯಾಗಿ ಕೆಲಸಮಾಡಿರುವ ಸಾಧನೆಯನ್ನು ಗುರುತಿಸಿ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ಗಳು 2023ರ ಸಾಲಿನ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.